ADVERTISEMENT

ಜಾತಿ, ಧರ್ಮದ ಚೌಕಟ್ಟು ಮೀರಿದ ತರಳಬಾಳು ಮಠ

8ನೇ ದಿನ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಮಹೇಶ್ ಜೋಶಿ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 10:50 IST
Last Updated 9 ಫೆಬ್ರುವರಿ 2020, 10:50 IST
ಹಳೇಬೀಡಿನಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಾಗವಹಿಸಿದ್ದ ಮಠಾಧಿಪತಿಗಳು
ಹಳೇಬೀಡಿನಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಾಗವಹಿಸಿದ್ದ ಮಠಾಧಿಪತಿಗಳು   

ಹಳೇಬೀಡು: ಮನಸ್ಸುಗಳ ನಡುವೆ ಸಂಸ್ಕಾರದ ಕೊಂಡಿ ಕಳಚಿದಂತಹ ಸಂದರ್ಭದಲ್ಲಿ ತರಳಬಾಳು ಮಠ ಸಮಾಜವನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯಲು ಶ್ರಮಿಸುತ್ತಿದೆ ಎಂದು ದೂರದರ್ಶನ ನಿವೃತ್ತ ನಿರ್ದೇಶಕ ಮಹೇಶ್ ಜೋಶಿ ಹೇಳಿದರು.

ಹಳೇಬೀಡಿನಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವ 8ನೇ ದಿನದ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು.

ಜಾತಿ ಮತದ ಚೌಕಟ್ಟಿನಿಂದ ಹೊರಗೆ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕೆಲಸ ಮಾಡುತ್ತಿದ್ದಾರೆ. ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಇಮಾಮ್‌ ಸಾಹೇಬ್‌ ಎಂಬುವರನ್ನು ಶ್ರೀಗಳು ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದರು ಎಂಬುದು ಈಗ ನೆನಪಾಗುತ್ತಿದೆ ಎಂದು ಸ್ಮರಿಸಿದರು.

ADVERTISEMENT

ಮಾಜಿ ಸಚಿವ ಬಿ.ಶಿವರಾಂ ಮಾತನಾಡಿ, ‘ಅರಸೀಕೆರೆಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವದ ಪ್ರಭಾವ ಹೆಚ್ಚಾಗಿದೆ. ಅಂದಿನ ಅರಸೀಕೆರೆ ಶಾಸಕ ಸಿದ್ದಪ್ಪ ಅವರ ಶ್ರಮದಿಂದ ಹೊನವಳ್ಳಿ ಏತ ನೀರಾವರಿ ಯೋಜನೆ ಅನುಷ್ಠಾನಗೊಂಡಿತ್ತು. ಅರಸೀಕೆರೆಯಲ್ಲಿ ಮಹೋತ್ಸವದ ಕೊನೆಯ ದಿನ ಶಿವಮೂರ್ತಿ ಶಿವಾಚಾರ್ಯರ ಪಲ್ಲಕ್ಕಿ ಉತ್ಸವ ನಡೆಯಬೇಕಾಗಿತ್ತು. ಅಂದು ಗುಜಾರಾತ್‌ನಲ್ಲಿ ಭೂಕಂಪದಿಂದ ಅನಾಹುತ ಸಂಭವಿಸಿತ್ತು. ಶ್ರೀಗಳು ಉತ್ಸವದ ಬದಲಾಗಿ ಅರಸೀಕೆರೆಯ ಬೀದಿಗಳಲ್ಲಿ ಸಂಚರಿಸಿ ಹಣ ಸಂಗ್ರಹಿಸಿ ಸಂತ್ರಸ್ತರಿಗೆ ಕಳುಹಿಸಿದ್ದರು’ ಎಂದರು.

ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕಾಗಿನೆಲೆ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ, ಬೇಲಿಮಠದ ಶಿವಾನುಭ ಚರಮೂರ್ತಿ ಶಿವರುದ್ರ ಸ್ವಾಮೀಜಿ, ತಮಿಳುನಾಡಿನ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.

ಸಚಿವರಾದ ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಮುಖ್ಯಮಂತ್ರಿಯವರ ಉಪ ಕಾರ್ಯದರ್ಶಿ ಎ.ಆರ್‌.ರವಿ ಮಾತನಾಡಿದರು.

ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್‌ ಉಪನ್ಯಾಸ ನೀಡಿದರು. ಶಾಸಕ ಕೆ.ಎಸ್‌.ಲಿಂಗೇಶ್‌, ವಿಧಾನ ಪರಿಷತ್‌ ಸದಸ್ಯರಾದ ಭೋಜೇಗೌಡ, ಎನ್‌.ರವಿಕುಮಾರ್‌, ಮುಖ್ಯಮಂತ್ರಿಯವರ ವಿಶೇಷ ಅಧಿಕಾರಿ ಎಚ್‌.ಎಂ.ಮಂಜುನಾಥ್‌, ಜಿಲ್ಲಾ ಪಂಚಾಯಿತಿ ಸದಸ್ಯೆ ರತ್ನಮ್ಮ ಐಸಾಮಿಗೌಡ, ಡಿವೈಎಸ್‌ಪಿ ನಾಗೇಶ್‌, ವೈದ್ಯ ನಂದೀಶ್‌, ತಾಲ್ಲೂಕು ವೀರಶೈವ ಯುವ ವೇದಿಕೆ ಉಪಾಧ್ಯಕ್ಷ ಎಚ್‌.ಸಿ.ಚೇತನ್‌, ಮುಖಂಡರಾದ ಕಲ್ಯಾಣ್‌ ಕುಮಾರ್‌, ಬೆಣ್ಣೂರು ರೇಣುಕುಮಾರ್‌ ಇದ್ದರು.

ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ

ಬೇಲೂರಿನ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದವರು ಪ್ರಸ್ತುತಪಡಿಸಿದ ವಚನ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ತರಳಬಾಳು ಜಗದ್ಗುರು ಅನುಭವ ಮಂಟಪ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳು ಸಮೂಹ ನೃತ್ಯ ಪ್ರಸ್ತುತ ಪಡಿಸಿದರು. ದಾವಣಗೆರೆ ತರಳಬಾಳು ಸೆಟ್ರಲ್‌ ಸ್ಕೂಲ್‌ ಮಕ್ಕಳು ಜನಪದ ನೃತ್ಯದೊಂದಿಗೆ ರಂಜಿಸಿದರು. ತರಳಬಾಳು ಕಲಾ ಸಂಘದವರು ರಾಜಸ್ಥಾನಿ ಬಂಜಾರ ಹಾಗೂ ಮಹಾರಾಷ್ಟ್ರ ಲಾವಣಿ ನೃತ್ಯಗಳು ಸಭಿಕರ ಮನಗೆದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.