ಹಾಸನ: ತೌಕ್ತೆ ಚಂಡಮಾರುತದ ಪರಿಣಾಮ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ಸಾಧಾರಣ ಮಳೆಯಾಗಿದೆ.
ನಸುಕಿನಿಂದಲೇ ಆರಂಭವಾದ ತುಂತುರು ಮಳೆ ಬಿಟ್ಟು ಬಿಟ್ಟು ರಾತ್ರಿವರೆಗೂ ಸುರಿಯಿತು. ಮಧ್ಯಾಹ್ನ ಸ್ವಲ್ಪ ಹೊತ್ತು ಬಿಸಿಲು ಇತ್ತು. ಸಕಲೇಶಪುರ, ಆಲೂರು, ಬೇಲೂರು ಸುತ್ತಮುತ್ತ ಆಗಾಗ ಜೋರು ಗಾಳಿಸಹಿತ ಮಳೆಯಾಯಿತು. ರೈತರು ಹಾಗೂ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.
ಕೊಣನೂರು ವ್ಯಾಪ್ತಿಯಲ್ಲಿ ಬೆಳಿಗ್ಗೆಯಿಂದ ಸುರಿಯುತ್ತಿದ್ದ ತುಂತುರು ಮಳೆ ಮಧ್ಯಾಹ್ನದ ನಂತರ ಸ್ವಲ್ಪ ಸಮಯ ಜೋರಾಗಿಯೇ ಬಂತು. ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ, ಶ್ರವಣಬೆಳಗೊಳದಲ್ಲೂಮಳೆ ಬಿದ್ದಿತು.
ದಿನವಿಡೀ ಮೋಡ ಕವಿದ ವಾತಾವರಣ ಇದ್ದು, ಅರಕಲಗೂಡು, ಬೇಲೂರು, ಹಳೇಬೀಡು ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ಮಲೆನಾಡು ಭಾಗದಲ್ಲಿ ತುಂತುರು ಮಳೆಗೆ ಜನತೆ ಹೈರಾಣಾಗಿದ್ದಾರೆ. ವಾತಾವರಣ ತಂಪಿನಿಂದ ಕೂಡಿದೆ.
ಹಾಸನ ನಗರದಲ್ಲಿ ಉತ್ತಮ ಮಳೆಯಾಗಿದ್ದು, ಅಗತ್ಯವಸ್ತುಗಳ ಖರೀದಿಗೆ ಜನರಿಗೆ ತೊಂದರೆ ಉಂಟಾಯಿತು. ಜಿಟಿಜಿಟಿ ಮಳೆಯಿಂದಾಗಿ ಹೊರಗೆ ಹೋಗದಂತಾಗಿದೆ. ನಗರ ಬಸ್ ನಿಲ್ದಾಣದಲ್ಲಿನ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಕೊಡೆ ನೆರವಿನೊಂದಿಗೆ ವ್ಯಾಪಾರ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.