ಕೊಣನೂರು: ಪ್ರಾಥಮಿಕ ಶಾಲಾ ಹಂತದಲ್ಲೇ ಶಿಕ್ಷಕರು ಮಕ್ಕಳಿಗೆ ಉತ್ತಮ ತರಬೇತಿ ನೀಡಿದರೆ ಅವರು ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಾರೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಬಿ.ಸಿ. ಹೊನ್ನೇಗೌಡ ತಿಳಿಸಿದರು.
ರಾಮನಾಥಪುರದಲ್ಲಿ ನಮೋ ನವೋದಯ ಕೋಚಿಂಗ್ ಸೆಂಟರ್ ಆಯೋಜಿಸಿದ್ದ ಜವಾಹರ್ ನವೋದಯ ಶಾಲಾ ಮತ್ತು ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳು ಶಿಕ್ಷಣ ಬೇಕಾದರೆ ಸುಖವನ್ನು ತ್ಯಜಿಸಬೇಕು. ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಕಿರಿಯ ವಯಸ್ಸಿನಲ್ಲೇ ಕಲಿಸಬೇಕು ಎಂದರು.
ಪ್ರವೇಶ ಪರೀಕ್ಷೆಗಳ ತರಬೇತುದಾರ ನವೋದಯ ಮೋಹನ್ ಮಾತನಾಡಿ, ಮತ್ತಷ್ಟು ಪೋಷಕರು, ಮಕ್ಕಳಿಗೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದರು. ನಮೋ ನವೋದಯದಿಂದ ತರಬೇತಿ ಪಡೆದ 16 ಮಕ್ಕಳು ಜವಾಹರ್ ನವೋದಯ, 16 ಮಕ್ಕಳು ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಆಗಿದ್ದಾರೆ. ಇದುವರೆಗೆ 1800ಕ್ಕೂ ಅಧಿಕ ಮಕ್ಕಳಿಗೆ ತರಬೇತಿ ನೀಡಿದ್ದು, 300 ಮಂದಿ ಮಕ್ಕಳು ಪ್ರವೇಶ ಪಡೆದಿದ್ದಾರೆ. ಉಚಿತವಾಗಿ ತರಬೇತಿ ಕೊಡಲಾಗುತ್ತಿದೆ ಎಂದು ತಿಳಿಸಿದರು. 32 ಮಂದಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸೋಮವಾರಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಸೂತಿ ತಜ್ಞ ಎಚ್.ಎಸ್.ಶಿವಪ್ರಸಾದ್, ಬೆಂಗಳೂರಿನ ತಂತ್ರಾಂಶ ಎಂಜಿನಿಯರ್ ಎಚ್.ಎಸ್. ಪ್ರಶಾಂತ್, ವಿದ್ಯಾನಿಕೇತನ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿರೂಪಾಕ್ಷ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.