ADVERTISEMENT

ಜಿಲ್ಲೆಯಲ್ಲಿ ಹತ್ತು ಡೆಂಗಿ ಪ್ರಕರಣ ದೃಢ

ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಪುನೀತ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಮೇ 2022, 16:20 IST
Last Updated 14 ಮೇ 2022, 16:20 IST
ಹಾಸನದಲ್ಲಿ ನಡೆದ ಡೆಂಗಿ ಜ್ವರ ನಿಯಂತ್ರಣದ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯಲ್ಲಿ ಡಾ.ಪುನೀತ್‌, ಡಾ.ಕೆ.ಎಂ.ಸತೀಶ್‌, ಡಾ.ವೇಣುಗೋಪಾಲ್‌, ಡಾ.ಹಿರಣ್ಣಯ್ಯ ಇದ್ದರು
ಹಾಸನದಲ್ಲಿ ನಡೆದ ಡೆಂಗಿ ಜ್ವರ ನಿಯಂತ್ರಣದ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯಲ್ಲಿ ಡಾ.ಪುನೀತ್‌, ಡಾ.ಕೆ.ಎಂ.ಸತೀಶ್‌, ಡಾ.ವೇಣುಗೋಪಾಲ್‌, ಡಾ.ಹಿರಣ್ಣಯ್ಯ ಇದ್ದರು   

ಹಾಸನ: ‘ಜಿಲ್ಲೆಯಲ್ಲಿ ಹತ್ತು ಡೆಂಗಿ ಪ್ರಕರಣಗಳು ಪತ್ತೆಯಾಗಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಪುನೀತ್‌ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಡೆಂಗಿ ಜ್ವರ ನಿಯಂತ್ರಣ ಕುರಿತ ಜಿಲ್ಲಾ ಮಟ್ಟದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.

‘ನಗರದ ಆಡುವಳ್ಳಿ, ಉದಯಗಿರಿ, ಕುವೆಂಪುನಗರ, ಜಯನಗರ, ಆಲೂರಿನ ಆಶಾ ಬಡಾವಣೆ ಮತ್ತು ಗ್ರಾಮೀಣ ವಿಭಾಗ, ಹೊಳೆನರಸೀಪುರದ ಕೆರೆಗೋಡು, ಬೆಟ್ಟನಹಳ್ಳಿ, ಕಿನ್ನರಳ್ಳಿ ಹಾಗೂ ಚನ್ನರಾಯಪಟ್ಟಣದ ಬಳಘಟ್ಟ ದಲ್ಲಿ ತಲಾ ಒಂದು ಡೆಂಗಿ ಪ್ರಕರಣ ಕಂಡುಬಂದಿವೆ. ಹೀಗಾಗಿ, ಈ ಭಾಗದ ಜನರು ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.

ADVERTISEMENT

‘ಮುಂದಿನ ಮೂರು ತಿಂಗಳು ಮಳೆಗಾಲ ಇರುವುದರಿಂದ ಡೆಂಗಿ ಜ್ವರ ಹರಡುವ ಸಾಧ್ಯತೆ ಇರುವುದರಿಂದ ನಿಯಂತ್ರಣ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಈಡಿಸ್ ಈಜಿಪ್ಟೈ ಸೊಳ್ಳೆಯು ಸ್ವಚ್ಛ ನೀರಿನಲ್ಲಿ ಸಂತಾನೋತ್ಪತ್ತಿ ಮಾಡಲಿದೆ. ಈ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಎಳನೀರಿನ ಚಿಪ್ಪುಗಳು, ಒಡೆದ ಬಾಟಲಿ, ಬಕೆಟ್ ಹಾಗೂ ಟೈರ್‌ಗಳಲ್ಲಿ ಸಂಗ್ರಹವಾದ ನೀರಿನಲ್ಲಿ ಉತ್ಪತ್ತಿಯಾಗುತ್ತವೆ. ಆದ್ದರಿಂದ ಇಂತಹ ವಸ್ತುಗಳಲ್ಲಿ ನೀರು ಶೇಖರಣೆಯಾಗದಂತೆ ಎಚ್ಚರ ವಹಿಸಬೇಕು’ ಎಂದು ಸಲಹೆ ನೀಡಿದರು.

‘ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಡೆಂಗಿ ನಿಯಂತ್ರಣ ಮಾಹಿತಿ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರ ಜತೆಗೆ ತಮ್ಮ ಸುತ್ತಮುತ್ತಲಿನ ಆವರಣಗಳಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ಮೀನುಗಾರಿಕೆ ಇಲಾಖೆಯು ಲಾರ್ವಾಹಾರಿ ಗಾಂಬೂಸಿಯಾ ಮತ್ತು ಗಪ್ಪಿ ಮೀನುಗಳನ್ನು ಕೆರೆ, ಕಟ್ಟೆ ಬಾವಿಗಳಲ್ಲಿ ಬಿಡುವುದರ ಮೂಲಕ ಸೊಳ್ಳೆ ನಿಯಂತ್ರಣ ಮಾಡಬೇಕು. ಸಾರ್ವಜನಿಕರು ಸೊಳ್ಳೆ ನಿಯಂತ್ರಣಕ್ಕೆ ಈ ಮೀನುಗಳನ್ನು ಬಳಸುವಂತೆ ಪ್ರೇರೇಪಿಸುವುದು ಅಗತ್ಯವಾಗಿದೆ. ಡೆಂಗಿಮುಕ್ತ ಜಿಲ್ಲೆಗೆ ಶ್ರಮಿಸಬೇಕು’ ಎಂದು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಮಾತನಾಡಿ, ‘ಇಲಾಖೆಯಿಂದ ಡೆಂಗಿ ನಿಯಂತ್ರಣಕ್ಕೆ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ವೇಣು ಗೋಪಾಲ್‌ ಮಾತನಾಡಿ, ‘ಸಾರ್ವಜನಿಕರು ನೀರನ್ನು ಮುಚ್ಚಿಟ್ಟು ಬಳಸಬೇಕು. ಬಳಸಿದ ನೀರಿನ ಪಾತ್ರೆಗಳನ್ನು ಒಣಗಿಸಿ ಮರು ಬಳಕೆ ಮಾಡಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಹಿರಣ್ಣಯ್ಯ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಕೆ.ಹರೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.