ತಾಯಿ ಹಸೀನಾಬಾನು ಹಾಗೂ ತಂದೆ ಅಮೀರ್ ಹುಸೇನ್ ಜೊತೆಗೆ ಬಾಲಕನನ್ನು ಸಕಲೇಶಪುರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಯಿತು.
ಸಕಲೇಶಪುರ (ಹಾಸನ): ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ ಅಸ್ಸಾಂನ ಕಾರ್ಮಿಕ ದಂಪತಿ, 11 ವರ್ಷದ ಮಗನನ್ನು ಸರಪಳಿಯಿಂದ ಕಟ್ಟಿ ಮನೆಯೊಳಗೆ ಕೂಡಿ ಹಾಕುತ್ತಿದ್ದ ಘಟನೆಯು ತಾಲ್ಲೂಕಿನ ಕ್ಯಾನಹಳ್ಳಿಯಲ್ಲಿ ಬುಧವಾರ ಬೆಳಕಿಗೆ ಬಂದಿದೆ.
ಗ್ರಾಮದ ಮಲ್ಲೇಶ್ ಎಂಬುವವರ ಕಾಫಿ ತೋಟದಲ್ಲಿ ಕಾಫಿ ಹಣ್ಣು ಕೊಯ್ಲಿಗಾಗಿ ಬಂದಿದ್ದ ಅಮೀರ್ ಹುಸೇನ್– ಹಸೀನಾಬಾನು ದಂಪತಿ, ತಮ್ಮ ಪುತ್ರನನ್ನು ಕೂಡಿ ಹಾಕಿದ್ದರು. ದಂಪತಿಗೆ 7 ಮಕ್ಕಳಿದ್ದು, ಈ ಬಾಲಕ ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ, ಗ್ರಾಮಾಂತರ ಠಾಣೆ ಪಿಎಸ್ಐ ಖತೀಜಾ ಹಾಗೂ ಸಿಬ್ಬಂದಿ ತೋಟಕ್ಕೆ ತೆರಳಿ ಬಾಲಕನನ್ನು ಪಟ್ಟಣದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.
‘ನಾವು ಕೆಲಸಕ್ಕೆ ಹೋದ ಬಳಿಕ ಮಗ ಮನೆಯಲ್ಲಿರದೇ ಓಡಿಹೋಗುತ್ತಿದ್ದ. ದಿನವೂ ಹುಡುಕಾಡಬೇಕಿತ್ತು. ಅವನಿಗೆ ಏನೂ ತಿಳಿಯುವುದಿಲ್ಲ. ಆತನನ್ನು ಆಸ್ಪತ್ರೆಗೆ ದಾಖಲಿಸಲು ಹಣವಿಲ್ಲ. ನಮ್ಮಿಂದ ದೂರವಾಗುತ್ತಾನೆಂಬ ಭಯದಿಂದ ಕಟ್ಟಿ ಹಾಕಿದ್ದೆವು, ಆದರೆ ಹಿಂಸಿಸಿಲ್ಲ. ತೋಟದ ಮಾಲೀಕರೂ ನಮಗೆ ಎಚ್ಚರಿಕೆ ನೀಡಿದ್ದರು’ ಎಂದು ಅಮೀರ್ ಹುಸೇನ್ ತಿಳಿಸಿದರು.
‘ದಂಪತಿಯು 5 ತಿಂಗಳಿಂದ ತೋಟದ ಲೈನ್ ಮನೆಯಲ್ಲಿ ವಾಸವಿದ್ದಾರೆ. ಪ್ರಕರಣದ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗಮನಕ್ಕೆ ತರಲಾಗಿದ್ದು, ಇಲಾಖೆಯ ವಿಚಾರಣೆ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಡಿವೈಎಸ್ಪಿ ಪ್ರಮೋದ್ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.