ಹಾಸನ: ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬೂವನಹಳ್ಳಿ ಸಮೀಪ ಭಾನುವಾರ ರಾತ್ರಿ ಲಾರಿ ಡಿಕ್ಕಿ ಹೊಡೆದು, ದ್ವಿಚಕ್ರ ವಾಹನದಲ್ಲಿದ್ದ ಮೂರು ವರ್ಷದ ಅವಳಿ ಮಕ್ಕಳಾದ ಪ್ರಣತಿ ಮತ್ತು ಪ್ರಣವ್ ಸ್ಥಳದಲ್ಲೇ ಮೃತಪಟ್ಟರೆ, ತಾಯಿ ಗವೇನಹಳ್ಳಿಯ ಜ್ಯೋತಿ (32) ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟರು. ಅವರೊಂದಿಗಿದ್ದ ಪತಿ ಶಿವಾನಂದ್ ಗಂಭೀರವಾಗಿಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ದಂಪತಿಯು ಮಕ್ಕಳೊಂದಿಗೆ ಹೋಂಡಾ ಆಕ್ಟಿವಾದಲ್ಲಿ ಹೋಗುತ್ತಿದ್ದಾಗ ರಟ್ಟು ತುಂಬಿದ್ದ ಲಾರಿ ಡಿಕ್ಕಿ ಹೊಡೆದಿತ್ತು. ಚಕ್ರದಡಿಗೆ ಸಿಕ್ಕು ಮಕ್ಕಳ ದೇಹಗಳು ಗುರುತಿಸಲಾಗದಷ್ಟು ಛಿದ್ರಗೊಂಡಿದ್ದವು.
ಘಟನೆ ನಂತರ ಚಾಲಕ ಲಾರಿಯನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಬೆನ್ನಟ್ಟಿ ಹೊಸಕೊಪ್ಪಲು ಬಳಿ ತಡೆದಿದ್ದರು. ಆಗಲೂ ತಪ್ಪಿಸಿಕೊಂಡು ಹೋಗುವ ಯತ್ನದಲ್ಲಿ ಮತ್ತೆರಡು ಬೈಕ್ಗಳಿಗೆ ಡಿಕ್ಕಿ ಹೊಡೆಸಿದ್ದ. ನಂತರ ಆತನನ್ನು ಹಿಡಿದು ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ರೊಚ್ಚಿಗೆದ್ದ ಕೆಲವರು ಲಾರಿಗೆ ಬೆಂಕಿ ಹಚ್ಚಲು ಯತ್ನಿಸಿದ್ದನ್ನು ಪೊಲೀಸರು ತಡೆದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ಸ್ಥಳಕ್ಕೆ ಭೇಟಿ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.