ಹಾಸನ:‘ರಾಜಕೀಯದ ಬಗ್ಗೆ ಸದ್ಯಕ್ಕೆ ನನಗೆ ಆಸಕ್ತಿಯಿಲ್ಲ. ಹಿಂದಿನಿಂದಲೂ ಜನರೊಂದಿಗೆ ರಾಜ ಪರಂಪರೆಯ ನಂಟಿದೆ. ಆ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುವುದಷ್ಟೇ ನನ್ನ ಮುಂದಿರುವ ಜವಾಬ್ದಾರಿ’ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮೊದಲು ಬಾರಿಗೆ ಹಾಸನಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಮಂಡ್ಯದಿಂದ ಲೋಕಸಭೆಗೆ ಸ್ಪರ್ಧೆ ಮಾಡುವ ವಿಚಾರ ಬರೀ ಊಹಾಪೋಹ. ಅಂತಹ ಯಾವುದೇ ಪ್ರಸ್ತಾಪ ನನ್ನ ಮುಂದೆ ಇಲ್ಲ. ಮೈಸೂರಿನ ಪರಂಪರೆ ಉಳಿಸಿಕೊಳ್ಳುವುದು, ಸಮಾಜ ಸೇವೆಯಲ್ಲಿ ಅಥವಾ ಕೆಲವು ಕ್ಷೇತ್ರದಲ್ಲಿ ತೊಡಗಿಸಿಕೊಂಡು ಮುಂದುವರಿಯುತ್ತೇನೆ. ರಾಜಕೀಯವಲ್ಲದೆ ಜನಸೇವೆ ಮಾಡಲು ಅನೇಕ ಕ್ಷೇತ್ರಗಳಿವೆ’ ಎಂದು ತಿಳಿಸಿದರು.
‘ನಾನು ವಿದೇಶದಲ್ಲಿ ಇದ್ದುದರಿಂದ ನೆರೆ ಹಾವಳಿಯಿಂದ ತತ್ತರಿಸಿ ಹೋಗಿರುವ ಕೊಡಗಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಆದಷ್ಟು ಶೀಘ್ರ ಮಡಿಕೇರಿಗೆ ಭೇಟಿ ನೀಡುವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೈಸೂರಿನ ಅರಸರಿಗೆ ರಾಜಧನ ನೀಡಿಕೆ ವಿಚಾರ ಕುರಿತ ಪ್ರಶ್ನೆಗೆ, ‘ಈ ಬಗ್ಗೆ ತನಗೆ ಹೆಚ್ಚಿನ ಮಾಹಿತಿಯಿಲ್ಲ. ಈ ಬಗ್ಗೆ ಅರಮನೆ ಕಚೇರಿಯಲ್ಲಿ ಕೇಳಿ’ ಎಂದಷ್ಟೇ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.