ADVERTISEMENT

ವಿಜೃಂಭಣೆಯಿಂದ ಜರುಗಿದ ಮೂರು ರಥೋತ್ಸವ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 13:22 IST
Last Updated 16 ಏಪ್ರಿಲ್ 2025, 13:22 IST
ಚನ್ನರಾಯಪಟ್ಟಣ ತಾಲ್ಲೂಕು ಆನೆಕೆರೆಯಲ್ಲಿ ರಥೋತ್ಸವ ಬುಧವಾರ ಮುಂಜಾನೆ ವಿಜೃಂಭಣೆಯಿಂದ ಜರುಗಿತು
ಚನ್ನರಾಯಪಟ್ಟಣ ತಾಲ್ಲೂಕು ಆನೆಕೆರೆಯಲ್ಲಿ ರಥೋತ್ಸವ ಬುಧವಾರ ಮುಂಜಾನೆ ವಿಜೃಂಭಣೆಯಿಂದ ಜರುಗಿತು   

ಚನ್ನರಾಯಪಟ್ಟಣ: ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿ ಆನೆಕೆರೆ ಗ್ರಾಮದಲ್ಲಿ ಆನೆಕೆರೆ ಅಮ್ಮ, ಸಾಗತವಳ್ಳಿ ಹಾಗೂ ನಂಬಿಹಳ್ಳಿಯ ರಥೋತ್ಸವ ಬುಧವಾರ ಮುಂಜಾನೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ಮಂಗಳವಾರ ರಾತ್ರಿ ಸಾಗತವಳ್ಳಿ, ನಂಬಿಹಳ್ಳಿಯಿಂದ ಭಕ್ತರು ರಥೋತ್ಸವಕ್ಕೆ ಚಾಲನೆ ನೀಡಿದರು. ಎರಡು ತೇರುಗಳು ಆನೆಕೆರೆ ಗ್ರಾಮಕ್ಕೆ ಆಗಮಿಸಿದವು. ಆನೆಕೆರೆಯಲ್ಲಿ ಮೂರು ತೇರುಗಳಿಗೆ ಪೂಜೆ ಸಲ್ಲಿಸಲಾಯಿತು. ರಾತ್ರಿ ಪ್ರಮುಖ ಬೀದಿಯಲ್ಲಿ ಉತ್ಸವ ಜರುಗಿತು. ಅಮ್ಮನವರ ಕೈ ಅಡ್ಡೆ ಉತ್ಸವ ಜರುಗಿತು. ಊರಿನ ಪ್ರಮುಖ ಬೀದಿಯಲ್ಲಿ ಸೋಮನಕುಣಿತ, ವೀರಗಾಸೆ ಸೇರಿ ಜನಪದ ಕಲಾತಂಡದೊಂದಿಗೆ ಮೆರವಣಿಗೆ ನಡೆಸಿದರು.

ಬುಧವಾರ ಮುಂಜಾನೆ ತಮಟೆಯ ವಾದ್ಯದೊಂದಿಗೆ ಮೂರು ತೇರುಗಳು ಆನೆಕೆರೆ ಅಮ್ಮ ಮತ್ತು ಚಿಕ್ಕಮ್ಮ ದೇಗುಲದತ್ತ ಸಾಗಿದವು. ಭಕ್ತರು ತೇರಿನ ಕಳಸಕ್ಕೆ ಹಣ್ಣು, ದವನ ಎಸೆದು ಭಕ್ತಿಯಿಂದ ನಮಿಸಿದರು. ತಮಟೆಯ ನಾದಕ್ಕೆ ಯುವಕರು ಹೆಜ್ಜೆ ಹಾಕಿದರು. ಪ್ರತಿವರ್ಷದಂತೆ ಗ್ರಾಮಸ್ಥರು ಕೋಲಾಟ ನಡೆಸಿಕೊಟ್ಟರು. ವೀರಭದ್ರಸ್ವಾಮಿ ದೇವಾಲಯದ ಆವರಣದಲ್ಲಿ ಹರಕೆ ಹೊತ್ತವರ ಕೆಂಡೋತ್ಸವ ನಡೆಸಿ ಭಕ್ತಿ ಸಮರ್ಪಿಸಿದರು. ವೀರಭದ್ರಸ್ವಾಮಿ ಉತ್ಸವ ವಾದ್ಯದೊಂದಿಗೆ ಜರುಗಿತು. ಮೂರು ತೇರುಗಳು ಏಕಕಾಲದಲ್ಲಿ ನಡೆಯುವ ಅಪೂರ್ವ ಧಾರ್ಮಿಕ ಕಾರ್ಯಕ್ರಮಕ್ಕೆ ಆನೆಕೆರೆ, ಸಾಗತವಳ್ಳಿ ನಂಬಿಹಳ್ಳಿ, ಪಿಳ್ಳಹಳ್ಳಿ, ಆಲಗೊಂಡನಹಳ್ಳಿ ಸೇರಿ ಹಲವು ಗ್ರಾಮಗಳ ಸಾವಿರಾರು ಭಕ್ತರು ಸಾಕ್ಷಿಯಾದರು. ಆನೆಕೆರೆ ಅಮ್ಮನವರ ದೇವಸ್ಥಾನದಲ್ಲಿ ಮೂರು ತೇರುಗಳಿಗೆ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಬಳಿ ತೇರುಗಳು ಆಗಮಿಸುತ್ತಿದ್ದಂತೆ ಭಕ್ತಾದಿಗಳು ಘೋಷಣೆ ಕೂಗಿದರು.

ADVERTISEMENT

ತೇರಿನಿಂದ ಆನೆಕೆರೆ ಅಮ್ಮನನ್ನು ಕೆಳಗಿಳಿಸಿದ ಬಳಿಕ ಉತ್ಸವ ನಡೆಸಿ ದೇವಸ್ಥಾನದ ಆವರಣದಲ್ಲಿ ಇರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.