
ಹೊಳೆನರಸೀಪುರ: ಪಟ್ಟಣದಲ್ಲಿ ದೇವಾಂಗ ಜನಾಂಗದವರು ಪ್ರತಿವರ್ಷ ಧನುರ್ಮಾಸದ ಬ್ರಾಹ್ಮೀ ಮುಹೂರ್ತದಲ್ಲಿ ಒಂದು ತಿಂಗಳಕಾಲ ನಡೆಸುವ ಭಜನಾ ಕಾರ್ಯಕ್ರಮದಲ್ಲಿ ಶನಿವಾರ ತಿರುಪತಿ ತಿರುಮಲ ಕರ್ನಾಟಕ ಭವನದ ವಿಶೇಷಾಧಿಕಾರಿ ಕೆ. ಕೋದಂಡರಾಮ್ ಭಾಗವಹಿಸಿ ಭಕ್ತಿ ಸಮರ್ಪಿಸಿದರು. ಚೌಡೇಶ್ವರಿ ದೇವಾಲಯದಲ್ಲಿ ದೇವಾಂಗ ಯುವಕ ಸಂಘದ ಅಧ್ಯಕ್ಷ ಶಂಕರ್ ಹಾಗೂ ಸದಸ್ಯರು ಅವರನ್ನು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೋಡಂಡರಾಮ್, ಜನರು ಅಧ್ಯಾತ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸಿಗೆ ನೆಮ್ಮದಿ ಎನಿಸುತ್ತದೆ. ಇದರಿಂದ ರಕ್ತದೊತ್ತಡ ಕಡಿಮೆ ಆಗಿ ಆರೋಗ್ಯ ಸುಧಾರಿಸುತ್ತದೆ ಎಂದರು.
ತಿರುಪತಿಯಿಂದ ತಂದಿದ್ದ ಲಾಡು ಪ್ರಸಾದವನ್ನು ಭಜನೆಯಲ್ಲಿ ಭಾಗವಹಿಸಿದ್ದವರೆಲ್ಲರಿಗೂ ನೀಡಿದರು. ಭಜನೆ ಸಾಗುವ ಮಾರ್ಗದಲ್ಲಿ ಚಂದ್ರ, ಅರುಣ್, ಗಣೇಶ್, ನಾರಾಯಣ ದೇವರನಾಮಗಳನ್ನು ಹಾಡಿದರು. ರಾಜಣ್ಣ, ಎಚ್.ಆರ್. ರವಿಕುಮಾರ್ ತಬಲಾದಲ್ಲಿ, ಮಂಜು ಹಾಗೂ ಕಾಳಾಚಾರ್ ಹಾರ್ಮೋನಿಯಂ ನುಡಿಸಿ ಸಹಕರಿಸಿದರು.