ADVERTISEMENT

ಕೈ ಕೈ ಮಿಲಾಯಿಸಿದ ಬಿಎಸ್‌ಪಿ ಎರಡು ಬಣಗಳು

ಉಚ್ಚಾಟನೆ ಖಂಡಿಸಿ ಪ್ರತಿಭಟನೆ: ಮತ್ತೊಂದು ಗುಂಪಿನಿಂದ ತಕರಾರು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 10:24 IST
Last Updated 19 ನವೆಂಬರ್ 2019, 10:24 IST
ಬೇಲೂರಿನಲ್ಲಿ ಸೋಮವಾರ ಬಿಎಸ್‌ಪಿಯ ಎರಡು ಬಣಗಳ ಕಾರ್ಯಕರ್ತರು ಕೈ ಕೈ ಮಿಲಾಯಿಸಿದರು
ಬೇಲೂರಿನಲ್ಲಿ ಸೋಮವಾರ ಬಿಎಸ್‌ಪಿಯ ಎರಡು ಬಣಗಳ ಕಾರ್ಯಕರ್ತರು ಕೈ ಕೈ ಮಿಲಾಯಿಸಿದರು   

ಬೇಲೂರು: ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ತಾಲ್ಲೂಕಿನ ಕೆಲ ಕಾರ್ಯಕರ್ತರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಉಚ್ಚಾಟನೆ ಮಾಡಿದ್ದನ್ನು ಖಂಡಿಸಿ ಸೋಮವಾರ ಉಚ್ಚಾಟಿತ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆ ನಡೆಸುವ ವೇಳೆ ಪಕ್ಷದ ಎರಡು ಬಣಗಳ ನಡುವೆ ಮಾರಾಮಾರಿ ನಡೆದಿದೆ.

ಉಚ್ಚಾಟಿತ ಕಾರ್ಯಕರ್ತರು ಪ್ರವಾಸಿ ಮಂದಿರದಲ್ಲಿ ಸೇರಿ ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದರಲ್ಲದೆ, ಕೆಲ ಮುಖಂಡರ ಪ್ರತಿಕೃತಿ ದಹಿಸಲು ಉದ್ದೇಶಿಸಿದ್ದರು. ಇನ್ನೇನು ಪ್ರತಿಭಟನೆ ಆರಂಭಿಸಬೇಕು ಎನ್ನುವ ವೇಳೆಗೆ ಅಲ್ಲಿಗೆ ಬಂದ ಮತ್ತೊಂದು ಬಣದ ಕಾರ್ಯಕರ್ತರು ಪ್ರತಿಭಟನೆ ಏಕೆ ನಡೆಸುತ್ತಿದ್ದೀರಾ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತಲ್ಲದೆ, ಕೈ ಕೈ ಮಿಲಾಯಿಸಿದರು.

ಬಳಿಕ ಅಂಬೇಡ್ಕರ್‌ಗೆ ಅಪಮಾನ ಖಂಡಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಬಿಎಸ್‌ಪಿ ಕಾರ್ಯಕರ್ತರನ್ನು ಸಮಾಧಾನಗೊಳಿಸಿದರು. ನಂತರ ಉಚ್ಚಾಟಿತ ಕಾರ್ಯಕರ್ತರು ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿ ಕ್ರಮವನ್ನು ಖಂಡಿಸಿದರು.

ADVERTISEMENT

ಉಚ್ಛಾಟಿತ ಬಿಎಸ್‌ಪಿ ಮುಖಂಡ ವಿರೂಪಾಕ್ಷ ‘ಸುಮಾರು 20 ವರ್ಷಗಳಿಂದ ಕೆಲಸ ನಿರ್ವಹಿಸಿದ ಬಿಎಸ್‌ಪಿ ಮುಖಂಡರನ್ನು ಉಚ್ಚಾಟಿಸಿರುವುದು ಖಂಡನೀಯ. ಎನ್‌.ಯೋಗೇಶ್‌ ರಾಜ್ಯ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಗೆ ದುಡಿದಿದ್ದಾರೆ. ಆದರೆ ಇವರ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಉಚ್ಚಾಟಿಸಲಾಗಿದೆ. ಇದನ್ನು ಖಂಡಿಸಿ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಬಿಎಸ್‌ಪಿ ಮುಖಂಡ ಗಂಗಾಧರ್‌ ಬಹುಜನ್‌ ಅವರ ಹಿಂಬಾಲಕರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಆರೋಪಿಸಿದರು.

ಶಶಿಧರ್‌ ಮೌರ್ಯ, ಧರಣೇಶ್‌, ಬಸವರಾಜು, ಶಿವಕುಮಾರ್‌, ಇಂದ್ರೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.