ADVERTISEMENT

ಬೇಲೂರು: ಪ್ರವಾಸೋದ್ಯಮ ಅಭಿವೃದ್ಧಿಗೆ ₹50 ಕೋಟಿ

ಬೇಲೂರು, ಹಳೇಬೀಡು ಅಭಿವೃದ್ಧಿಗೆ ಕ್ರಮ: ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2022, 16:21 IST
Last Updated 18 ಫೆಬ್ರುವರಿ 2022, 16:21 IST
ಬೇಲೂರು ತಾಲ್ಲೂಕಿನ ಚಿಕ್ಕಬ್ಯಾಡಗೆರೆ ಗ್ರಾಮದಲ್ಲಿ ತ್ರೀಸ್ಟಾರ್ ಹೋಟೆಲ್ ಕಟ್ಟಡ ನಿರ್ಮಾಣಕ್ಕೆ ಆನಂದ್ ಸಿಂಗ್ ಶಂಕುಸ್ಥಾಪನೆ ನೆರವೇರಿಸಿದರು. ಗೋಪಾಲಯ್ಯ, ಸಿ.ಟಿ.ರವಿ, ಲಿಂಗೇಶ್‌ ಇದ್ದಾರೆ
ಬೇಲೂರು ತಾಲ್ಲೂಕಿನ ಚಿಕ್ಕಬ್ಯಾಡಗೆರೆ ಗ್ರಾಮದಲ್ಲಿ ತ್ರೀಸ್ಟಾರ್ ಹೋಟೆಲ್ ಕಟ್ಟಡ ನಿರ್ಮಾಣಕ್ಕೆ ಆನಂದ್ ಸಿಂಗ್ ಶಂಕುಸ್ಥಾಪನೆ ನೆರವೇರಿಸಿದರು. ಗೋಪಾಲಯ್ಯ, ಸಿ.ಟಿ.ರವಿ, ಲಿಂಗೇಶ್‌ ಇದ್ದಾರೆ   

ಬೇಲೂರು: ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರಿರುವಬೇಲೂರು, ಹಳೇಬೀಡಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಶೀಘ್ರದಲ್ಲೇ ₹50 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಪ್ರವಾಸೋದ್ಯಮಸಚಿವ ಆನಂದ್ ಸಿಂಗ್ ತಿಳಿಸಿದರು.

ತಾಲ್ಲೂಕಿನ ‌ಚಿಕ್ಕಬ್ಯಾಡಗೆರೆ ಗ್ರಾಮದಲ್ಲಿ ತ್ರೀ ಸ್ಟಾರ್ ಹೋಟೆಲ್ ಕಟ್ಟಡನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಹಳೇಬೀಡು ಮತ್ತು ಸೋಮನಾಥಪುರದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಿಸಿದ ದೇವಾಲಯಗಳನ್ನು ವಿಶ್ವ ಪರಂಪರೆ ಸ್ಮಾರಕಗಳ ತಾತ್ಕಾಲಿಕ ಪಟ್ಟಿಗೆ ಸೇರಿಸಲಾಗಿದ್ದು, ಅದ್ಭುತ ಹೊಯ್ಸಳ ವಾಸ್ತು ಶಿಲ್ಪವನ್ನು ವೀಕ್ಷಿಸಲು ದೇಶಿ-ವಿದೇಶದಿಂದ ಪ್ರವಾಸಿಗರು ಆಗಮಿಸುತ್ತಾರೆ’ ಎಂದರು.

‘ಜಿಲ್ಲೆಯಲ್ಲಿ ಒಟ್ಟು 44 ಕಾಮಗಾರಿಗಳಿಗೆ ₹11.35 ಕೋಟಿ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ನೂತನವಾಗಿ 32 ಪ್ರವಾಸಿ ತಾಣಗಳನ್ನು ಗುರುತಿಸಿ, ಮೂಲ ಸೌಲಭ್ಯ ಕಲ್ಪಿಸಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

ಹಂಪಿ ಮತ್ತು ಬಾದಾಮಿ ಐಹೊಳೆ ರೀತಿಯಲ್ಲಿ ಬೇಲೂರು ಮತ್ತು ಹಳೇಬೀಡನ್ನು ವಿಶ್ವ ಪಾರಂಪರಿಕ ತಾಣಗಳನ್ನಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಹೋಂ ಸ್ಟೇಗಳ ಅಭಿವೃದ್ಧಿಗೆ ಗಮನ ಹರಿಸಲಾಗುವುದು’ ಎಂದರು.

ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿಗೆಹೆಚ್ವಿನ‌ ಅನುದಾನಕ್ಕೆ ಶಾಸಕ ಕೆ.ಎಸ್.ಲಿಂಗೇಶ್ ಮನವಿ ಮಾಡಿದರು.

ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ‘ರಣಘಟ್ಟ ಯೋಜನೆಗೆ ₹120 ಕೋಟಿ ಒದಗಿಸಲಾಗಿದೆ ಜಿಲ್ಲೆಯಲ್ಲಿ ₹800 ಕೋಟಿ ವೆಚ್ಚದಲ್ಲಿ ಜಲಜೀವನ್‌ ಮಿಷನ್ ಯೋಜನೆಗೆ ಅನುಮೋದನೆ ದೊರೆತಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು₹1,450 ಕೋಟಿ ಅನುದಾನ ಒದಗಿಸಲಾಗುತ್ತಿದೆ. ಬೆಳೆ ಹಾನಿಗೆ ₹120 ಕೋಟಿಬಿಡುಗಡೆ ಮಾಡಲಾಗಿದೆ. ಗೊರೂರಿನಲ್ಲಿ ಕೆಆರ್‌ಎಸ್ ಮಾದರಿ ಉದ್ಯಾನ ಅಭಿವೃದ್ಧಿಗೆ ಮನವಿ‌ಸಲ್ಲಿಸಲಾಗಿದೆ’ ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ‘ಹಂಪಿ ಉತ್ಸವದಂತೆ ಹೊಯ್ಸಳ ಉತ್ಸವ ಮಾಡಬೇಕು. ಬೇಲೂರು, ಹಳೇಬೀಡು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆಸೇರ್ಪಡೆಯಾಗುವ ವಿಶ್ವಾಸ ಇದೆ’ ಎಂದು ತಿಳಿಸಿದರು.

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಜಗದೀಶ್,ರಾಜ್ಯ ಅರಣ್ಯ ವಸತಿ ಮತ್ತು ವಿಹಾರಧಾಮ ಅಧ್ಯಕ್ಷ ಎಂ.ಅಪ್ಪಣ್ಣ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಧ್ಯಕ್ಷ ಕಾಪು ಸಿದ್ದಲಿಂಗಸ್ವಾಮಿ, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪಂಚಾಯಿತಿ ಸಿಇಒ ಕಾಂತರಾಜು, ಎಸ್‌ಪಿ ಶ್ರೀನಿವಾಸ ಗೌಡಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.