ಬೇಲೂರು: ವಿಜಯದಶಮಿ ಅಂಗವಾಗಿ ಚನ್ನಕೇಶವಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಬನ್ನಿ ಮರದ ಬಳಿ ದೇಗುಲದ ಆಯುಧಗಳನ್ನು ಇಟ್ಟು ಸೋಮವಾರ ಸಂಜೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಇಲ್ಲಿನ ಚನ್ನಕೇಶವಸ್ವಾಮಿ ಮೂಲ ವಿಗ್ರಹಕ್ಕೆ ಪೂಜೆ ಸಲ್ಲಿಸಿದ ನಂತರ ಉತ್ಸವ ಮೂರ್ತಿಯನ್ನು ಬನ್ನಿಮರದ ಬಳಿ ತಂದು ದೇವಸ್ಥಾನದ ಆಯುಧಗಳು, ಕೀಲಿ ಕೈಗಳನ್ನಿಟ್ಟು ವಿಶೇಷ ಪೂಜೆ ಸಲ್ಲಿಸಿ, ಬನ್ನಿ ಪತ್ರೆಯನ್ನು ಕೀಳಲಾಯಿತು.
ಪ್ರತಿವರ್ಷ ವಿಜಯದಶಮಿ ದಿನ ಅಶ್ವಾರೂಢ ವಾಹನದಲ್ಲಿ ಚನ್ನಕೇಶ್ವಸ್ವಾಮಿ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಬಂಟೇನಹಳ್ಳಿಯಲ್ಲಿರುವ ಬನ್ನಿ ಮಂಟಪಕ್ಕೆ ತೆರಳಿ, ಬನ್ನಿ ಮರದ ಬಳಿ ದೇಗುಲದ ವಿವಿಧ ಆಯುಧಗಳನ್ನಿಟ್ಟು ಪೂಜೆ ಸಲ್ಲಿಸಿ, ಆಯುಧದಿಂದ ಬನ್ನಿ ಮರದ ಸೊಪ್ಪನ್ನು ಕಡಿದು ಸ್ವಾಮಿ ಉತ್ಸವ ಮೂರ್ತಿಗೆ ಸಾವಿರಾರು ಭಕ್ತರ ಸಮ್ಮಖದಲ್ಲಿ ವಿಶೇಷ ಪೂಜೆ ನೆರವೇರಿಸಿ ಬನ್ನಿ ಸೊಪ್ಪನ್ನು ನೆರೆದಿದ್ದ ಭಕ್ತರಿಗೆ ವಿತರಿಸಲಾಗುತ್ತಿತ್ತು.
ಆದರೆ, ಈ ಭಾರಿ ಕೊರೊನಾ ಹಿನ್ನೆಲೆಯಲ್ಲಿ ದೇಗುಲದ ಆವರಣದಲ್ಲೇ ಇರುವ ಬನ್ನಿ ಮರದ ಬಳಿ ಉತ್ಸವ ಮೂರ್ತಿ ಹಾಗೂ ಆಯುಧಗಳನ್ನಿಟ್ಟು ಅರ್ಚಕರು ಪೂಜೆ ಸಲ್ಲಿಸಿ ಸರಳವಾಗಿ ಆಚರಿಸಿದರು.
ದೇಗುಲದ ಆಡಳಿತಾಧಿಕಾರಿ ಉಮಾ, ಅರ್ಚಕರಾದ ಶ್ರೀನಿವಾಸ ಭಟ್ಟರ್, ಕೃಷ್ಣಸ್ವಾಮಿ ಭಟ್ಟರ್, ಶಿರಸ್ತೇದಾರ್ ನಾಗರಾಜ್, ಸಿಪಿಐ ಸಿದ್ಧರಾಮೇಶ್ವರ್, ಅಡ್ಡೆಗಾರರು ಮತ್ತು ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.