ADVERTISEMENT

ಚಿರತೆ ಹೊಡೆದು ಕೊಂದ ಗ್ರಾಮಸ್ಥರು

ತಾಯಿ, ಮಗ ಸೇರಿ ನಾಲ್ವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 15:04 IST
Last Updated 22 ಫೆಬ್ರುವರಿ 2021, 15:04 IST
ಗ್ರಾಮಸ್ಥರು ಕೊಂದು ಹಾಕಿರುವ ಚಿರತೆ
ಗ್ರಾಮಸ್ಥರು ಕೊಂದು ಹಾಕಿರುವ ಚಿರತೆ   

ಹಾಸನ: ಅರಸೀಕೆರೆ ತಾಲ್ಲೂಕಿನ ಬೈರಗೊಂಡನಹಳ್ಳಿ ಬೋವಿ ಕಾಲೋನಿಯಲ್ಲಿ ಸೋಮವಾರ ಬೆಳಿಗ್ಗೆ ಜಮೀನಿಗೆ ತೆರಳುತ್ತಿದ್ದ ತಾಯಿ ಹಾಗೂ ಮಗನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಚಿರತೆಯನ್ನು ಸಂಜೆ ಸ್ಥಳೀಯರು ಹೊಡೆದು ಸಾಯಿಸಿರುವ ಘಟನೆ ನಡೆದಿದೆ.

ಚಂದ್ರಮ್ಮ (5) ಮತ್ತು ಕಿರಣ್ (25) ಎಂಬುವರು ಗಂಭೀರ ಗಾಯಗೊಂಡಿದ್ದು, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗ್ಗೆ 8.20ರ ಸಮಯದಲ್ಲಿ ಎಂದಿನಂತೆ ತಾಯಿ,ಮಗ ಜಾನುವಾರುಗಳೊಂದಿಗೆ ಜಮೀನು ಬಳಿಗೆ ತೆರಳುತ್ತಿದ್ದರು. ಈ ವೇಳೆ ದಾಳಿ ಮಾಡಿದ ಚಿರತೆ ಇಬ್ಬರನ್ನೂ ಗಂಭೀರವಾಗಿ ಗಾಯಗೊಳಿಸಿದೆ.ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅರವಳಿಕೆ ವೈದ್ಯರು ಮುಂದಾದರು. ಈ ವೇಳೆ ಅರವಳಿಕೆ ಎಂಜೆಕ್ಷನ್‌ ನೀಡಿದ ನಂತರ ಡಾ.ಮುರುಳಿ ಹಾಗೂ ಮತ್ತೊಬ್ಬರ ಮೇಲೆ ಚಿರತೆ ಎರಗಿತ್ತು. ಮುರುಳಿ ಕೈಗಳಿಗೆ ಗಾಯವಾಗಿತ್ತು. ಅಲ್ಲಿಂದ ತಪ್ಪಿಸಿಕೊಂಡ ಚಿರತೆ ಮಧ್ಯಾಹ್ನ ಬೆಂಡೆಕೆರೆ ಗ್ರಾಮದ ತಾಂಡ್ಯ ಬಳಿ ಪ್ರತ್ಯಕ್ಷವಾಗುತ್ತಿದ್ದಂತೆ ಗ್ರಾಮಸ್ಥರು ದೊಣ್ಣೆ, ಕಲ್ಲುಗಳಿಂದ ಹೊಡೆದು ಕೊಂದಿದ್ದಾರೆ.

ADVERTISEMENT

"ಚಿರತೆ ದಾಳಿಯಿಂದ ಗಾಯಗೊಂಡಿರುವ ಡಾ. ಮುರುಳಿ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕ್ಕಮಗಳೂರಿನಿಂದ ಮತ್ತೊಬ್ಬ ವೈದ್ಯರನ್ನು ಕರೆಸಿ, ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಬೆಂಡೆಕೆರೆ ಬಳಿ ಕಾಣಿಸಿಕೊಂಡಿದೆ. ಗ್ರಾಮಸ್ಥರು ಅದನ್ನು ದೊಣ್ಣೆ, ಕಲ್ಲುಗಳಿಂದ ಹೊಡೆದು ಸಾಯಿಸಿದ್ದಾರೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.