ಸಕಲೇಶಪುರ: ತಾಲ್ಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಸುರಂಗ ಮಾರ್ಗದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಭೂ ಕುಸಿತ ಉಂಟಾಗಿ ಮನೆಗಳು ಕುಸಿಯುವ ಆತಂಕ ಗ್ರಾಮಸ್ಥರಲ್ಲಿ ಉಂಟಾಗಿದೆ.
ಗ್ರಾಮದ ಸರ್ವೆ ನಂಬರ್ 209ರ ಈಚಲುಬಾರೆ ಯಲ್ಲಿ ಸುಮಾರು 40 ಮನೆಗಳಿವೆ. ಇದೇ ಪ್ರದೇಶದಲ್ಲಿ ಸುಮಾರು 80 ಅಡಿ ಆಳ 206 ಮೀಟರ್ ಉದ್ದದ ಪೈಪ್ಲೈನ್ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಬುಧವಾರ ಬೆಳಿಗ್ಗೆ ಗ್ರಾಮದ ಲೋಕೇಶ್ ಅವರ ಮನೆಯಿಂದ ಕೇವಲ 20 ಅಡಿ ದೂರದಲ್ಲಿ ಭೂ ಕುಸಿತ ಉಂಟಾಗಿದೆ. ಈ ಪ್ರದೇಶದ ಮನೆಗಳು ಯಾವುದೇ ಸಂದರ್ಭದಲ್ಲಿ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ ಎಂದು ವಕೀಲ ಕವನ್ಗೌಡ ತಿಳಿಸಿದ್ದಾರೆ.
ಕಾಮಗಾರಿ ನಡೆಯುತ್ತಿರುವ ಪ್ರದೇಶದ ಸರ್ಕಾರಿ ಭೂಮಿಯಾಗಿದ್ದು, ಹತ್ತಾರು ವರ್ಷಗಳಿಂದ ಕೂಲಿ ಕಾರ್ಮಿಕರು, ಬಡವರು ಮನೆಗಳನ್ನು ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಸುವ ಬಗ್ಗೆ ನಿವಾಸಿಗಳಿಗೆ ಇಲಾಖೆಯಿಂದ ಯಾವುದೇ ನೋಟೀಸ್ ನೀಡದೆ. ಪುನರ್ವಸತಿ ಕಲ್ಪಿಸದೆ ಏಕಾಏಕಿ ಬಂದು ಕಾಮಗಾರಿ ನಡೆಸಿ ಗ್ರಾಮಸ್ಥರಿಗೆ ಸಮಸ್ಯೆ ಉಂಟು ಮಾಡಿದ್ದಾರೆ. ಈ ಸಂಬಂಧ ಯೋಜನೆಯ ಎಂಜಿನಿರ್ಗಳನ್ನು ಪ್ರಶ್ನಿಸಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ ಎಂದು ಅರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.