ADVERTISEMENT

ಕೃಷಿಯಲ್ಲಿ ಪರಂಪರೆಗೆ ಆಧುನಿಕತೆ ಲೇಪನ

ಯುವ ರೈತ ಪ್ರಶಸ್ತಿಗೆ ಭಾಜನರಾದ ಉಂಡಿಗನಾಳು ಪೂಜಿತ್‌ ಪ್ರಕಾಶ್

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 2:30 IST
Last Updated 12 ಡಿಸೆಂಬರ್ 2025, 2:30 IST
ಪ್ರಶಸ್ತಿಯೊಂದಿಗೆ ಪೂಜಿತ್ ಪ್ರಕಾಶ್‌
ಪ್ರಶಸ್ತಿಯೊಂದಿಗೆ ಪೂಜಿತ್ ಪ್ರಕಾಶ್‌   

ಅರಸೀಕೆರೆ: ಮಂಡ್ಯದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದ ಕೃಷಿ ಮೇಳದಲ್ಲಿ ತಾಲೂಕಿನ ಉಂಡಿಗನಾಳು ಗ್ರಾಮದ ಯುವ ರೈತ ಎನ್.ಪಿ. ಪೂಜಿತ್ ಪ್ರಕಾಶ್, ಕೃಷಿ ಕ್ಷೇತ್ರದಲ್ಲಿ ತೋರಿದ ಬಹುಮುಖ ಸಾಧನೆ ಮತ್ತು ನವೀನ ಪ್ರಯೋಗಗಳನ್ನು ಪರಿಗಣಿಸಿ, ತಾಲ್ಲೂಕು ಮಟ್ಟದ ಯುವ ರೈತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಪ್ರಶಸ್ತಿಯನ್ನು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಅವರಿಂದ ಸ್ವೀಕರಿಸಿರುವ ಪೂಜಿತ್‌ ಪ್ರಕಾಶ್‌, ತಮ್ಮ ಯಶೋಗಾಥೆಯನ್ನು ಹಂಚಿಕೊಂಡಿದ್ದಾರೆ.

ಪರಂಪರೆಯ ಕೃಷಿಯಿಂದ ಆಧುನಿಕತೆಯತ್ತ: ಅನೇಕ ಯುವಕರು ಗ್ರಾಮೀಣ ಜೀವನ ಬಿಟ್ಟು ನಗರದತ್ತ ವಲಸೆ ಹೋಗುತ್ತಿರುವ ಸಂದರ್ಭದಲ್ಲಿ, ಪೂಜಿತ್ ಪ್ರಕಾಶ್ ಅವರು, ಕುಟುಂಬದ ಕೃಷಿ ಭೂಮಿಯನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿ ಪಡಿಸಿ ಆದರ್ಶ ಯುವ ರೈತನಾಗಿದ್ದಾರೆ.

ADVERTISEMENT

ಬಾಲ್ಯದಿಂದ ಕೃಷಿಯ ಮೇಲೆ ವಿಶೇಷ ಆಸಕ್ತಿ ಹೊಂದಿದ್ದ ಅವರು, ಕೃಷಿ ವಿಜ್ಞಾನ, ಮಣ್ಣಿನ ಸಂರಕ್ಷಣೆ, ಬೆಳೆ ಪರಿವರ್ತನೆ ಮತ್ತು ಜೀವಾಮೃತ ಸಾವಯವ ತಂತ್ರಗಳನ್ನು ಅಳವಡಿಸಿಕೊಂಡು ತಮ್ಮ ತೋಟವನ್ನು ಮಾದರಿ ಕೃಷಿ ಕೇಂದ್ರವಾಗಿ ರೂಪಿಸಿದ್ದಾರೆ ಎನ್ನುತ್ತಾರೆ ಕುಟುಂಬಸ್ಥರು.

ಪೂಜಿತ್ ಕೃಷಿಯಲ್ಲಿ ಕೇವಲ ಪರಂಪರೆಯ ವಿಧಾನಗಳಿಲ್ಲ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಉತ್ಪಾದಕತೆ ಹೆಚ್ಚಿಸಿದ್ದಾರೆ. ಡ್ರಿಪ್ ಮತ್ತು ಸ್ಪ್ರಿಂಕ್ಲರ್ ನೀರಾವರಿ, ಮಣ್ಣಿನ ಪರೀಕ್ಷೆ ಆಧಾರಿತ ಗೊಬ್ಬರ ಬಳಕೆ, ಕಡಿಮೆ ನೀರಿನ ಬಳಕೆಯ ಬೆಳೆ ಮಾದರಿಗಳು, ಮಾರುಕಟ್ಟೆ ಬೆಲೆ ಅಧ್ಯಯನ ಮತ್ತು ನೇರ ಮಾರಾಟ ಕ್ರಮಗಳನ್ನು ಅನುಸರಿಸುವ ಮೂಲಕ ಲಾಭದಾಯಕ ಕೃಷಿಯ ಜೊತೆಗೆ ಪರಿಸರ ಸ್ನೇಹಿ ಕೃಷಿ ಪದ್ದತಿ ಅಳವಡಿಸಿಕೊಂಡಿದ್ದಾರೆ.

ಆಹಾರ ಭದ್ರತೆ, ಉದ್ಯೋಗ ಸೃಷ್ಟಿ, ಮಣ್ಣು, ನೀರು, ಜೀವ ವೈವಿಧ್ಯ ಸಂರಕ್ಷಣೆ ಇವನ್ನೆಲ್ಲಾ ಕಾಪಾಡಲು ಕೃಷಿ ಪ್ರಮುಖ ಕ್ಷೇತ್ರ. ಯುವಕರು ಕೃಷಿಯಲ್ಲಿ ತೊಡಗಿದಾಗ ನವೀನ ತಂತ್ರಜ್ಞಾನಗಳ ಬಳಕೆ ಹೆಚ್ಚುತ್ತದೆ. ಉತ್ಪಾದನೆ ಮತ್ತು ಲಾಭ ಏರುತ್ತವೆ. ಗ್ರಾಮೀಣ ಅಭಿವೃದ್ಧಿ ವೇಗಗೊಳ್ಳುತ್ತದೆ. ಸ್ಥಳೀಯ ಉದ್ಯೋಗ ಸೃಷ್ಟಿಯಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಕೃಷಿ ತೋಟದಲ್ಲಿ ಯುವ ರೈತ ಪೂಜಿತ್‌ ಪ್ರಕಾಶ್‌

ಹಲವು ಬೆಳೆ: ಆರ್ಥಿಕ ಸ್ಥಿರತೆ

ಪೂಜಿತ್ ಅವರ ತೋಟದಲ್ಲಿ ಬೆಳೆಗಳ ವೈವಿಧ್ಯವೇ ವಿಶೇಷತೆ. ಒಂದೇ ಪ್ರದೇಶದಲ್ಲಿ ಅನೇಕ ಹಣ್ಣು ವಾಣಿಜ್ಯ ಹಾಗೂ ಮಿಶ್ರ ಬೆಳೆಗಳನ್ನು ಬೆಳೆಸಿ ಆರ್ಥಿಕ ಸ್ಥಿರತೆ ಸಾಧಿಸಿದ್ದಾರೆ.  ತೆಂಗು ಅಡಿಕೆ ಮಾವು ಬಾಳೆ ಮೆಣಸು ಹಲಸು ಬಟರ್‌ಫ್ರೂಟ್ ದಾಳಿಂಬೆ ಸೀಬೆ ಸಪೋಟ ಬೆಟ್ಟದ ನೆಲ್ಲಿಕಾಯಿ ನುಗ್ಗೆಕಾಯಿಗಳ ಜೊತೆಗೆ ಸಾವಯವ ಗೊಬ್ಬರ ತಯಾರಿಕಾ ಘಟಕ ಕೃಷಿ ಹೊಂಡ ಯಂತ್ರೋಪಕರಣಗಳು ಜೇನು ಸಾಕಾಣಿಕೆ ಔಷಧೀಯ ಮಣ್ಣಿನ ಸಂರಕ್ಷಣಾ ಬೆಳೆಗಳನ್ನು ಬೆಳೆದು ಸಮಗ್ರ ಕೃಷಿಯ ಮಾದರಿ ನಿರ್ಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.