ಬೇಲೂರು: ತಾಲ್ಲೂಕಿನ ಕಲ್ಲಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಶಿಕಾರಿಗೆ ಹೋಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ತಗುಲಿದ ಗುಂಡಿಗೆ ಕುಶಾವರ ಗ್ರಾಮದ ಮಧು (24) ಮೃತಪಟ್ಟಿದ್ದಾನೆ.
ಘಟನೆ ಬಳಿಕ ಈತನೊಂದಿಗಿದ್ದ ಸ್ನೇಹಿತರು ತಲೆ ಮರೆಸಿಕೊಂಡಿದ್ದು, ಮಗನ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಮಧು, ಲಾಕ್ಡೌನ್ನಿಂದಾಗಿ ಸ್ವಗ್ರಾಮಕ್ಕೆ ಬಂದು ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದ. ಭಾನುವಾರ ಶುಂಠಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸ್ನೇಹಿತರು ಕರೆ ಮಾಡಿದ್ದಾರೆ. ಬೇಲೂರಿಗೆ ಹೋಗಿ ಬರುತ್ತೇನೆಂದು ತಾಯಿಗೆ ಹೇಳಿ ಟಿವಿಎಸ್ ಮೊಪೆಡ್ನಲ್ಲಿ ತೆರಳಿದ್ದ.
ನಂತರ ಕೋಗಿಲಮನೆಯಲ್ಲಿ ಬೈಕ್ ನಿಲ್ಲಿಸಿ ಸ್ನೇಹಿತರಾದ ಬಿಕ್ಕೋಡು ಗ್ರಾಮದ ಸಾಂಗ್ಲಿಯಾನ, ಮಲ್ಲಿಕಾರ್ಜುನ ಸೇರಿ ಸುಮಾರು 10 ಮಂದಿ ಗೆಳೆಯರ ಜೊತೆ ಬಂದೂಕು ಹಿಡಿದು ಮಧ್ಯಾಹ್ನ 3.30ರ ಸುಮಾರಿಗೆ ಕಲ್ಲಹಳ್ಳಿಅರಣ್ಯಕ್ಕೆಶಿಕಾರಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಬಂದೂಕುನಿಂದ ಹಾರಿದ ಗುಂಡು ಮಧುಗೆ ತಗುಲಿದೆ. ಇದನ್ನು ಕಂಡು ಜೊತೆಯಲ್ಲಿದ್ದ ಕೆಲವರು ಪರಾರಿಯಾಗಿದ್ದರೆ, ಸಾಂಗ್ಲಿಯಾನ ಮತ್ತು ಮಲ್ಲಿಕಾರ್ಜುನ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಧುನನ್ನು ಹಾಸನದ ಆಸ್ಪತ್ರೆಗೆ ದಾಖಲಿಸಿ ಹೊರಟು ಹೋಗಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೆ ಮಧು ಮೃತಪಟ್ಟಿದ್ದಾನೆ.
‘ ಸ್ನೇಹಿತರೊಂದಿಗೆ ಹೋದಮಗ ಹೆಣವಾಗಿದ್ದಾನೆ. ಶಿಕಾರಿಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿತೋ, ಅಥವಾ ಸ್ನೇಹಿತರೇ ಜೀವ ತೆಗೆದರೋ ಗೊತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಿ ನಮಗೆ ನ್ಯಾಯಕೊಡಿಸಬೇಕು’ ಎಂದು ಮೃತ ಮಧು ತಂದೆ ಮಹೇಶ್ ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.