ADVERTISEMENT

ಕಸಾಪ ಚುನಾವಣೆ: ಕಣದಲ್ಲಿ ಐವರು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 10:15 IST
Last Updated 6 ಏಪ್ರಿಲ್ 2012, 10:15 IST

ಹಾವೇರಿ: ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸದೇ ಅವಿರೋಧ ಆಯ್ಕೆ ಮಾಡಬೇಕು ಅಥವಾ ಚುನಾವಣೆ ನಡೆದರೆ ಸರ್ವಸಮ್ಮತದ ಅಭ್ಯರ್ಥಿಯನ್ನು ನಿಲ್ಲಿಸಬೇಕೆಂದು ಕಳೆದ ಒಂದು ವಾರದಿಂದ ಜಿಲ್ಲೆಯ ಕನ್ನಡಪರ ಚಿಂತಕರ, ಸಾಹಿತಿಗಳ ಹಾಗೂ ಕೆಲ ಕಸಾಪ ಅಜೀವ ಸದಸ್ಯರ ಪ್ರಯತ್ನ ಪೂರ್ಣ ಪ್ರಮಾಣದ ಫಲ ನೀಡುವಲ್ಲಿ ವಿಫಲವಾಯಿತು.

ನಾಮಪತ್ರ ವಾಪಸ್ಸು ಪಡೆಯಲು ಅಂತಿಮ ದಿನವಾದ ಗುರುವಾರ ಐವರು ನಾಮಪತ್ರ ವಾಪಸ್ಸು ಪಡೆದರು. ಅಂತಿಮವಾಗಿ ಐದು ಜನ ಅಭ್ಯರ್ಥಿಗಳು ಕಣದಲ್ಲಿ ಉಳಿಯುವ ಮೂಲಕ ಬದಲಾಗಿ ಏ. 29 ರಂದು ಜಿಲ್ಲಾ ಕಸಾಪ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುವುದು ಖಚಿತವಾಯಿತು. ಹಿಂದಿನ ಅಧ್ಯಕ್ಷ ಮಾರುತಿ ಶಿಡ್ಲಾಪುರ, ರಾಣೆಬೆನ್ನೂರಿನ ಗಿರಿಜಾದೇವಿ ದುರ್ಗದಮಠ, ಜಿ.ಬಿ.ಮಾಸಣಗಿ, ಮಾಲತೇಶ ಅಂಗೂರ ಸೇರಿದಂತೆ ಐವರು ಕಣದಲ್ಲಿ ಉಳಿದಿದ್ದಾರೆ.

ಕಳೆದ ಬಾರಿ ಜಿಲ್ಲಾ ಕಸಾಪ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದ ಜಿಲ್ಲೆ ಈ ಬಾರಿಯೂ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಬೇಕೆಂಬ ಜಿಲ್ಲೆಯ ಕನ್ನಡಪರ ಚಿಂತಕರ ಉದ್ದೇಶ ಪೂರ್ಣ ಪ್ರಮಾಣದಲ್ಲಿ ಈಡೇರದಿದ್ದರೂ, ಹತ್ತು ಜನರ ನಡುವೆ ನಡೆಯಬೇಕಿದ್ದ ಪೈಪೋಟಿಯನ್ನು ಐವರಲ್ಲಿ ಮಾತ್ರ ಉಳಿಯುವಂತೆ ಮಾಡುವಲ್ಲಿ ಯಶಸ್ವಿಯಾದರು.

ಹಿರಿಯ ಸಾಮಾಜಿಕ ಕಾರ್ಯಕರ್ತ ಎಂ.ಎಸ್. ಕೋರಿಶೆಟ್ಟರ ಅವರ ನೇತೃತ್ವದಲ್ಲಿ ಏ.2 ಮತ್ತು 4 ರಂದು ನಡೆದ ಅಧ್ಯಕ್ಷರ ಅವಿರೋಧ ಆಯ್ಕೆ ಕುರಿತ ಸಭೆಯಲ್ಲಿ 10 ಜನ ಅಭ್ಯರ್ಥಿಗಳ ಪೈಕಿ ಒಂಬತ್ತು ಅಭ್ಯರ್ಥಿಗಳು ಭಾಗವಹಿಸಿದ್ದರು. ಮಾರುತಿ ಶಿಡ್ಲಾಪುರ ಭಾಗವಹಿಸದೇ ಇರುವುದರಿಂದ ಅವಿರೋಧ ಆಯ್ಕೆ ಸಾಧ್ಯವಾಗಲಿಲ್ಲ.

ಒಂಬತ್ತು ಅಭ್ಯರ್ಥಿಗಳ ಪರವಾಗಿ ಶಿಡ್ಲಾಪುರ ವಿರುದ್ಧ ಒಬ್ಬರೇ ಅಭ್ಯರ್ಥಿಯನ್ನು ನಿಲ್ಲಿಸಲು ಸಭೆ ನಿರ್ಧರಿಸಿತ್ತಲ್ಲದೇ, ಸರ್ವಸಮ್ಮತ ಅಭ್ಯರ್ಥಿ ಆಯ್ಕೆಗೆ ಹಿರಿಯ ಸಾಹಿತಿ ಬ.ಫ.ಯಲಿಗಾರ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಆರು ಜನರ ಸಮಿತಿ ರಚಿಸಲಾಗಿತ್ತು. ಆದರೆ, ಸಮಿತಿಯಲ್ಲಿ ಒಮ್ಮತ ಮೂಡದ ಕಾರಣ ಸರ್ವ ಸಮ್ಮತದ ಅಭ್ಯರ್ಥಿ ಬದಲಾಗಿ ಆರು ಜನರಲ್ಲಿ ನಾಲ್ಕು ಜನರು ಬೆಂಬಲ ಪಡೆದ ಗಿರಿಜಾದೇವಿ ದುರ್ಗದಮಠ ಅವರನ್ನು ಬಹುಮತ ಪಡೆದ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲು ನಿರ್ಧರಿಸಿತು.

ಒಂಬತ್ತು ಜನ ಅಭ್ಯರ್ಥಿಗಳಲ್ಲಿ ಸಮಿತಿ ನಿರ್ಧಾರವನ್ನು ಒಪ್ಪಿಕೊಂಡು ಗುರುವಾರ ಐವರು ಕಣದಿಂದ ಹಿಂದೆ ಸರಿದಿದ್ದಾರೆ. ತೋಟಪ್ಪ ಹಳ್ಳಿಕೇರಿ, ಪ್ರಭು ಹಿಟ್ನಳ್ಳಿ, ಕೆ.ಎಸ್.ನಾಗರಾಜ, ಹುಲ್ಲತ್ತಿ ಹಾಗೂ ನಂದಿಹಳ್ಳಿ ಎಂಬುವವರೇ ಹಿಂದೆ ಸರಿದ ಅಭ್ಯರ್ಥಿಗಳು. ಮೂವರು ಅಭ್ಯರ್ಥಿಗಳು ಸಮಿತಿ ನಿರ್ಧಾರಕ್ಕೆ ವಿರೋಧ ವ್ಯಕ್ತಪಿಡಿಸಿ ಕಣದಲ್ಲಿ ಉಳಿಯಲು ನಿರ್ಧರಿಸಿದ್ದಾರೆ. ಇದರಿಂದ ಚುನಾವಣೆಯಲ್ಲಿ ದುರ್ಗದಮಠ ಹಾಗೂ ಶಿಡ್ಲಾಪುರ ಮಧ್ಯ ನಡೆಯಬೇಕಿದ್ದ ಪೈಪೋಟಿ ಐವರು ಅಭ್ಯರ್ಥಿಗಳಲ್ಲಿ ಹಂಚಿ ಹೋದಂತಾಗಿದೆ.

ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳು ಅರ್ಹರೇ ಆಗಿದ್ದರು. ಆದರೆ, ಅಭ್ಯರ್ಥಿಗಳ ವಯೋಮಾನ, ಸಾಹಿತ್ಯ ಕೃಷಿ, ಸಾಮಾಜಿಕ ಚಟುವಟಿಕೆ ಹಾಗೂ ಅವರು ಪರಿಷತ್‌ನೊಂದಿಗೆ ಗುರುತಿಸಿವಿಕೆಯಂತಹ ವಿಚಾರಗಳನ್ನು ಮಾನದಂಡವನ್ನಾಗಿ ಇಟ್ಟುಕೊಂಡು ಆಯ್ಕೆ ಮಾಡಿದಾಗ ದುರ್ಗದಮಠ ಹಾಗೂ ಜಿ.ಬಿ.ಮಾಸಣಗಿ ಅಂತಿಮ ಆಯ್ಕೆಯಲ್ಲಿ ಉಳಿದುಕೊಂಡಿದ್ದರು.

ಇವರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂದಾಗ ಸಮಿತಿಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಿಲ್ಲದಾಗ ಸಮಿತಿ ನಾಲ್ಕು ಜನ ಸದಸ್ಯರು ದುರ್ಗದಮಠ ಪರವಾಗಿ, ಇಬ್ಬರು ಮಾಸಣಗಿ ಪರವಾಗಿ ಮತ ಚಲಾಯಿಸಿದ್ದರಿಂದ ಅಂತಿಮವಾಗಿ ದುರ್ಗದಮಠ ಅವರ ಹೆಸರನ್ನು ಅಂತಿಮಗೊಳಿಸಲಾಯಿತು ಎಂದು   ಸಮಿತಿ ಅಧ್ಯಕ್ಷ ಬ.ಫ. ಯಲಗಾರ ತಿಳಿಸಿದರು. 

ಸಮಿತಿ ನಿರ್ಧಾರಕ್ಕೆ ಬದ್ಧರಿರುವುದಾಗಿ ಎಲ್ಲ ಅಭ್ಯರ್ಥಿಗಳು ಹೇಳಿದ್ದರು. ಅದರಂತೆ ಅವರಿಗೆ ವಿಷಯ ತಿಳಿಸಿ ನಾಮಪತ್ರ ಹಿಂದೆ ಪಡೆಯಲು ಸಮಿತಿ ವಿನಂತಿಸಿದೆ. ಕೆಲವರು ನಾಮಪತ್ರ ಹಿಂದೆ ಪಡೆದಿದ್ದಾರೆ. ಅವರಿಗೆ ಸಮಿತಿ ಅಭಿನಂದಿಸುತ್ತದೆ. ಇನ್ನೂ ಕೆಲವರು ವಾಪಸ್ಸು ಪಡೆಯುವುದಾಗಿ ಹೇಳಿದ್ದಾರೆ. ಕಾದು ನೋಡುತ್ತೇವೆ. ಆದರೆ, ಸಮಿತಿ ನಿರ್ಧಾರ ಧಿಕ್ಕರಿಸಿ ಸ್ಪರ್ಧೆಗೆ ಇಳಿಯುವುದಾದರೆ, ಏನು ಮಾಡಲಾ ಗುವುದಿಲ್ಲ.
 
ಆದರೆ, ಬಹುಮತದ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳುವ ಬಗ್ಗೆ ಸಮಿತಿ ಒಂದೆರಡು ದಿನಗಳಲ್ಲಿ ಸಭೆ ನಡೆಸಿ ತೀರ್ಮಾನಿಸಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಸಾಪ ಮಾಜಿ ಅಧ್ಯಕ್ಷ ವೈ.ಎಸ್.ಗುಬ್ಬಣ್ಣನವರ, ಕನ್ನಡಪರ ಚಿಂತಕ ಎಂ.ಎಸ್. ಕೋರಿಶೆಟ್ಟರ, ಕೆ.ಸಿ.ಕೋರಿ, ಶಿವಯೋಗಿ ಮರಡೂರ ಮಠ ಮತ್ತಿತರರು ಹಾಜರಿದ್ದರು.

`ದುರ್ಗದಮಠ ಬಹುಮತದ ಆಯ್ಕೆ~
`ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಅಧ್ಯಕ್ಷರ ಅವಿರೋಧ ಆಯ್ಕೆಗಾಗಿ ಕರೆದ ಸಭೆಯಲ್ಲಿ ರಚಿಸಲಾದ ಆರು ಜನರ ಸಮಿತಿ ಶಿಡ್ಲಾಪುರ ಅವರ ವಿರುದ್ಧ ಸ್ಪರ್ಧಿಸಲು ರಾಣೆಬೆನ್ನೂರಿನ ನಿವೃತ್ತ ಪ್ರಾಧ್ಯಾಪಕಿ ಗಿರಿಜಾದೇವಿ ದುರ್ಗದಮಠ ಅವರನ್ನು ಬಹುಮತದ ಅಭ್ಯರ್ಥಿ ಯನ್ನಾಗಿ ಆಯ್ಕೆ ಮಾಡಿದೆ~ ಎಂದು ಸಮಿತಿ ಅಧ್ಯಕ್ಷ ಬ.ಫ.ಯಲಗಾರ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈವರೆಗೆ ಕಸಾಪ ಅಧ್ಯಕ್ಷರಾಗಿ ಯಾವೊಬ್ಬ ಮಹಿಳೆಗೆ ಅವಕಾಶ ನೀಡಿಲ್ಲ. ಮಹಿಳೆಗೆ ಅವಕಾಶ ನೀಡಬೇಕು. ಆ ಹುದ್ದೆಗೆ ಗಿರಿಜಾದೇವಿ ದುರ್ಗದಮಠ ಅರ್ಹರಾಗಿದ್ದಾರೆ ಎನ್ನುವ ಉದ್ದೇಶ ದಿಂದ ಅವರನ್ನು ಅಂತಿಮವಾಗಿ 4-2 ಬಹುಮತ ದೊಂದಿಗೆ ಆಯ್ಕೆ ಮಾಡಲಾಯಿತು ಎಂದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT