ADVERTISEMENT

`ಕಾಂಗ್ರೆಸ್ ಯೋಜನೆಗೆ ಬಿಜೆಪಿ ಹೆಸರು'

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 9:39 IST
Last Updated 27 ಡಿಸೆಂಬರ್ 2012, 9:39 IST

ರಾಣೆಬೆನ್ನೂರು: ಕಳೆದ 40 ವರ್ಷಗಳಿಂದ ಕ್ಷೇತ್ರದಲ್ಲಿರುವ ಮರಾಠಾ ಸಮಾಜ ಬಾಂಧವರು ಕಾಂಗ್ರೆಸ್‌ಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಬಾರಿಯೂ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿರುವುದು ಸ್ವಾಗತಾರ್ಹ ಎಂದು' ಮಾಜಿ ಸಚಿವ ಕೆ.ಬಿ. ಕೋಳಿವಾಡ ಹೇಳಿದರು.

ನಗರದ ಆದಿಶಕ್ತಿ ದೇವಸ್ಥಾನದ ಆವರಣದಲ್ಲಿ ನಡೆದ ಕಾಂಗ್ರೆಸ್ ಬೆಂಬಲಿತ ಮರಾಠ ಸಮಾಜದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್.ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ `ತುಂಗಾ ಮೇಲ್ದಂಡೆ' ಯೋಜನೆಯನ್ನು ಅನುಷ್ಠಾನಕ್ಕೆ ತಂದು ಶೇ 90ರಷ್ಟು ಕಾಮಗಾರಿ ಕೈಗೊಳ್ಳಲಾಗಿತ್ತು. ಉಳಿದ ಕೇವಲ ಶೇ 10ರಷ್ಟು ಕಾಮಗಾರಿಯನ್ನು ಬಿಜೆಪಿ ಸರ್ಕಾರ ಮಾಡಿ ತಾವೇ ಮಾಡಿರುವುದಾಗಿ ಬೆನ್ನು ತಟ್ಟಿ ಕೊಳ್ಳುತ್ತಿರುವ ಬಿಜೆಪಿ ಸರ್ಕಾರ ಜನತೆಗೆ ಮೋಸ ಮಾಡುತ್ತಾ ಬಂದಿದೆ. ಸದಾ ಹಗರಣದಲ್ಲಿ ಆಂತರಿಕ ಕಚ್ಚಾಟದಲ್ಲಿ ತೊಡಗಿದ ಬಿಜೆಪಿ ಸರ್ಕಾರ ಮೂರು ಹೋಳಾಗಿದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿ ಹಿಂದುಳಿದ, ಅಲ್ಪಸಂಖ್ಯಾತರ, ದೀನದಲಿತರು ಸೇರಿದಂತೆ ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ಕಾಂಗ್ರೆಸ್ ಬೆಂಬಲಿತ ಮರಾಠ ಸಮಾಜದ ಸಭೆ ಉದ್ಘಾಟಿಸಿದ ಮಾಜಿ ಸಚಿವ ಎಸ್. ಆರ್. ಮೋರೆ,  ರಾಜ್ಯದ ಜನತೆ ಬಿಜೆಪಿ ಸರ್ಕಾರದ ದುರಾಡಳಿತದ ಬಗ್ಗೆ ಅಸಮಾಧಾನಗೊಂಡು ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಮರಾಠ ಸಮಾಜದ ಬಾಂಧವರೆಲ್ಲರೂ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದರು.

ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿದರು. ಮರಿಯಪ್ಪ ಹಲವಾಗಲ, ಎಂ.ಎನ್. ವೆಂಕೋಜಿ, ಎಂ.ಎಸ್. ಜಾಧವ್, ರತ್ನಾ ಪುನೀತ್, ಅರ್ಜುನ್ ರಾವ್, ಪ್ರಕಾಶ್ ಘಾಟ್ಗೆ, ವಕೀಲ ಎಸ್.ಎ. ಪವಾರ, ಬಸವರಾಜ ಮಾಂಡ್ರೆ, ತುಕಾರಾಮಪ್ಪ, ನಾಗರಾಜ ಮರಿಯಮ್ಮನವರ ಕಿಶೋರ್ ಸಣ್ಮನಿ ಸೇರಿದಂತೆ ತಾಲ್ಲೂಕಿನ ಮರಾಠ ಸಮಾಜ ಬಾಂಧವರು ಉಪಸ್ಥಿತರಿದ್ದರು. ನಾಗರಾಜ ಮಾಕನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಟ್ಟಪ್ಪ ಮರಿಯಮ್ಮನವರ ಸ್ವಾಗತಿಸಿದರು. ಕಷ್ಣಪ್ಪ ಕಂಬಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.