ADVERTISEMENT

ಕಿನ್ನರರು ಕೀಳರಿಮೆ ತೊರೆಯಲಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 9:05 IST
Last Updated 22 ಜನವರಿ 2011, 9:05 IST

ಸವಣೂರ: ‘ನಾಗರಿಕ ಸಮಾಜದಲ್ಲಿರುವ ಕಿನ್ನರರ (ನಪುಂಸಕರು) ಬಗ್ಗೆ ಮಾನವೀಯ ನೆಲೆಯಲ್ಲಿ ಚಿಂತಿಸಿ, ಅವರನ್ನೂ ಸಮಾಜದ ಮುಖ್ಯವಾಹಿನಿಯಲ್ಲಿ ಕರೆತರಬೇಕಿದೆ’ ಎಂದು ನಗರದ ನ್ಯಾಯಾಧೀಶ ಎಸ್.ಎಲ್. ಚವ್ಹಾಣ ಹೇಳಿದರು.

ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಸುಬೋಧ ಗ್ರಾಮೀಣಾಭಿವೃದ್ಧಿ  ಸಂಸ್ಥೆಯ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕಿನ್ನರರ ಹಕ್ಕುಗಳ ಕುರಿತ ಜನ ಜಾಗೃತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕಿನ್ನರರ ಬಗ್ಗೆ ಪ್ರತ್ಯೇಕವಾದ ಯಾವುದೇ ಕಾನೂನುಗಳು ಇಲ್ಲವಾದರೂ ಅವರಲ್ಲಿನ ಕೀಳರಿಮೆಯನ್ನು ತೊಡೆಯುವ ಉದ್ದೇಶದಿಂದ ಪ್ರತ್ಯೇಕ ಕಾನೂನು ರಚಿಸುವ ಪ್ರಯತ್ನಗಳು ನಡೆದಿವೆ. ಇದರೊಂದಿಗೆ ಸಮಾಜವೂ ಕಿನ್ನರರ ಬಗ್ಗೆ ತಿರಸ್ಕಾರ ಮನೋಭಾವನೆಯನ್ನು ತೋರದೆ, ಎಲ್ಲ ರೀತಿಯ ಮಾನವ ಹಕ್ಕುಗಳನ್ನೂ ಅವರಿಗೆ ಸಮಾನ ರೂಪದಲ್ಲಿ ಕಲ್ಪಿಸಬೇಕು ಎಂದರು.

ಸವಣೂರಿನ ವಕೀಲರ ಸಂಘದ ಆವರಣದಲ್ಲಿ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಜೆ.ಎಸ್ ಕುಲಕರ್ಣಿ, ಆರ್ಥಿಕವಾಗಿ ಹಿಂದುಳಿದ ಕಿನ್ನರರೂ ಕಾನೂನು ನೆರವು ಸಮಿತಿಯ ಮೂಲಕ ಸಂಪೂರ್ಣ ಉಚಿತವಾಗಿ ಕಾನೂನಿನ ನೆರವು ಪಡೆಯಬಹುದು. ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬಹುದು ಎಂದರು. 

ಸಹಾಯಕ ಸರಕಾರಿ ಅಭಿಯೋಜಕರಾದ ಎಸ್.ಜಿ ಕೂಡಲಗಿಮಠ ಹಾಗೂ ನ್ಯಾಯವಾದಿಗಳಾದ ವಿ.ಬಿ ಬಿಜ್ಜೂರ ಉಪಸ್ಥಿತರಿದ್ದರು. ಕಿನ್ನರರ ಹಕ್ಕುಗಳು ಹಾಗೂ ಸಮಾಜದಲ್ಲಿ ಅವರ ಭದ್ರತೆ ಎಂಬ ವಿಷಯದ ಬಗ್ಗೆ ನ್ಯಾಯವಾದಿ ಎಮ್.ಎಸ್. ಮುದಗಲ್ ಉಪನ್ಯಾಸ ನೀಡಿದರು.ಸುಬೋಧ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ವಕೀಲರ ಸಂಘದ ಪ್ರತಿನಿಧಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ಸಂತೋಷ ಇಜಂತಕರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.