ADVERTISEMENT

ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 10:55 IST
Last Updated 18 ಜನವರಿ 2011, 10:55 IST

ರಾಣೆಬೆನ್ನೂರು: ತಾಲ್ಲೂಕಿನ ಗುಡಿ ಹೊನ್ನತ್ತಿ ಗ್ರಾಮದ ಹೊನ್ನಮ್ಮದೇವಿ ದೇವಸ್ಥಾನದ ಕಾಣಿಕೆ ಹುಂಡಿ ಒಡೆಯುವುದನ್ನು ನಿಲ್ಲಿಸಬೇಕು ಮತ್ತು ಬ್ಯಾಂಕ್ ವ್ಯವಹಾರಗಳನ್ನು ಸ್ಥಗಿತಗೊಳಿಸಬೇಕು ಎಂದು  ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಸಮಿತಿ ಸಹಯೋಗದಲ್ಲಿ ಗ್ರಾಮಸ್ಥರು ಸೋಮವಾರ  ಪ್ರತಿಭಟನೆ ನಡೆಸಿ ತಹಸೀಲ್ದಾರ ಮಹ್ಮದ್ ಝುಬೈರ್ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ಜಿಲ್ಲಾ ಅಧ್ಯಕ್ಷ ಬಸವಣ್ಣೆಪ್ಪ ನಲವಾಗಲ, ‘ಗುಡಿಹೊನ್ನತ್ತಿ ಗ್ರಾಮದ ಹೊನ್ನಮ್ಮದೇವಿ ದೇವಸ್ಥಾನದ ಆಡಳಿತ ಮಂಡಳಿಯವರು ದೇವಸ್ಥಾನದ ಆಸ್ತಿಯನ್ನು ಕಾನೂನು ಬಾಹಿರವಾಗಿ ಕಬಳಿಸಿದ್ದು, ದಾಖಲೆ ಆಧಾರ ಸಮೇತ ಸಾಬೀತಾಗಿದೆ’ ಎಂದರು.

‘ದೇವಸ್ಥಾನ ಜೀರ್ಣೋದ್ಧಾರ ಸಮಿತಿಯವರು ದೇವಸ್ಥಾನದ ಅಭಿವೃದ್ಧಿ ಮಾಡುವುದನ್ನು ಬಿಟ್ಟು ಭಕ್ತರು ಕೊಟ್ಟ ಹಣವನ್ನು ದೇವಸ್ಥಾನಕ್ಕೆ ಬಳಸದೇ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲಾ ಅವ್ಯವಹಾರವನ್ನು ತನಿಖೆ ಮಾಡಿಸಿ ಸಾರ್ವಜನಿ     ಕರಿಗೆ ಲೆಕ್ಕಪತ್ರ ನೀಡಬೇಕು. ಈಗಿನ ಆಡಳಿ ಮಂಡಳಿಯನ್ನು ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.

‘ದೇವಸ್ಥಾನಕ್ಕೆ ಸರ್ಕಾರ ಎಂಟು  ಎಕರೆ ಜಮೀನನ್ನು ಮಂಜೂರು ಮಾಡಿದ್ದು, ಸರ್ಕಾರದ ಅನುಮತಿ ಪಡೆಯದೇ ಈ ಆಸ್ತಿಯನ್ನು ಪರಭಾರೆ ಮಾಡುವದಾಗಲೀ, ಹಸ್ತಾಂತರ ಮಾಡುವುದಾಗಲೀ ಮಾಡಬಾರದು ಎಂಬ ನಿಯಮವಿದೆ. ಆದರೆ ದೇವಸ್ಥಾನದ ಆಡಳಿತ ಮಂಡಳಿಯ ಹಿಂದಿನ ಕಾರ್ಯದರ್ಶಿ, ಮಾಜಿ ಶಾಸಕ ಎನ್.ಎಲ್. ಬೆಲ್ಲದ ಅವರು ಅಧಿಕಾರ ದುರುಪಯೋಗ ಪಡಿಸಿಕೊಂಡು, ಒಂದು ಎಕರೆ ಮೂರು ಗುಂಟೆ  ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ’ ಎಂದು ದೂರಿದರು.

‘ರಿ.ಸ.ನಂ. 103ರಲ್ಲಿ 1.20 ಗುಂಟೆ ಆಸ್ತಿಯಲ್ಲಿ 16 ಗುಂಟೆ ಆಸ್ತಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ಕಾನೂನು ಬಾಹಿರವಾಗಿ ಹಸ್ತಾಂತರಿಸಲಾಗಿದೆ. ತಮಗೆ ಬೇಕಾದವರಿಗೆ ಮನೆ ಕಟ್ಟಿಕೊಳ್ಳಲು ನೀಡಿದ್ದಾರೆ’ ಎಂದು ಆರೋಪಿಸಿದರು.

‘ದೇವಸ್ಥಾನದ ಪಕ್ಕದಲ್ಲಿ ಮದ್ಯದ ಅಂಗಡಿಯನ್ನು ತೆರೆಯಲು ಅನುಮತಿ ನೀಡಿದ್ದಾರೆ. ಇದರಿಂದ ಸಾರ್ವಜನಿಕರ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಇವರಿಗೆ ಅರಿವಿಲ್ಲವೇ’ ಎಂದು ಪ್ರಶ್ನಿಸಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶಪ್ಪ ಗರಡೀಮನಿ, ಹಾಲೇಶಪ್ಪ ಭಂಗೀಗೌಡ್ರ, ಬಸಪ್ಪ ಓಲೇಕಾರ, ಬಸವರಾಜ ಹ. ಬಣಕಾರ, ಕುರುವತ್ತೆಪ್ಪ ಬಣಕಾರ, ಎಸ್.ಡಿ. ಸೂರಣಗಿ, ಕರಬಸಪ್ಪ ನಾಗಪ್ಪ ಬೆನ್ನೂರು, ಕೊಟ್ರೇಶಪ್ಪ ಹುಬ್ಬಳ್ಳಿ, ಬಸವರಾಜ ಕೆ. ರಾಜನಹಳ್ಳಿ, ಸಂಗಪ್ಪ ಬಸಪ್ಪ ಸೂರಣಗಿ, ಎಚ್.ಎಸ್. ಪಾಟೀಲ, ಕೊಟ್ರೇಶ ಸರ್ವಂದ, ಮಲ್ಲಿಕಾರ್ಜುನ ಹುಬ್ಬಳ್ಳಿ, ಬಸವರಾಜ ಓಲೇಕಾರ, ಗುತ್ತೆಪ್ಪ ಗುಡಿಹಿಂದ್ಲವರ, ಸುರೇಶಪ್ಪ ಗರಡಿಮನಿ, ಬಸಪ್ಪ ಗುತ್ತೆಪ್ಪನವರ ಶಾಂತಪ್ಪ ಕುದ್ರಿಹಾಳ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.