ADVERTISEMENT

ಜಲಾಗಾರ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2014, 6:00 IST
Last Updated 11 ಜನವರಿ 2014, 6:00 IST

ಹಾನಗಲ್‌: ‘ಬಹು ಜನರ ಬೇಡಿಕೆಗಳಿಗೆ ಮನ್ನಣೆ ನೀಡುವ ಮೂಲಕ ಎನ್‌ಆರ್‌ ಇಜಿ ಅಡಿಯಲ್ಲಿ ಗ್ರಾಮೀಣ ಭಾಗದಲ್ಲಿ ವಿವಿಧ ಕಾಮಗಾರಿಗಳು ಜಾರಿಗೊಳ್ಳು ತ್ತಿವೆ. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿ ಯಲ್ಲಿ ಎರಡು ಶಾಲೆಗಳಿಗೆ ಮೈದಾನ ಮತ್ತು ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಪ್ರತಿ ಗ್ರಾಮದಲ್ಲಿ ಒಕ್ಕಲು ಕಣ ನಿರ್ಮಾಣಕ್ಕೆ ಸ್ಥಳೀಯ ಸಂಸ್ಥೆಗಳು ಮುಂದಾಗಬೇಕು’ ಎಂದು ಶಾಸಕ ಮನೋಹರ ತಹಸೀಲ್ದಾರ್‌ ಹೇಳಿದರು.

ತಾಲ್ಲೂಕಿನ ಹಿರೇಕಾಂಶಿ ಗ್ರಾಮದಲ್ಲಿ ಗುರುವಾರ ಸಂಜೆ ರೂ. 10 ಲಕ್ಷ ವೆಚ್ಚದ 50 ಸಾವಿರ ಲೀಟರ್‌ ಸಾಮ ರ್ಥ್ಯದ ಮೇಲ್ಮಟ್ಟದ ಜಲಾಗಾರ ಮತ್ತು ರೂ. 3.50 ಲಕ್ಷದಲ್ಲಿ ಲೋಕವ್ವನ ದೇವಸ್ಥಾನದ ಸಂಪರ್ಕ ರಸ್ತೆ ಸುಧಾರ ಣೆ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ತಿಳವಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಸದಸ್ಯ ಬಸವರಾಜ ಹಾದಿಮನಿ ಮಾತನಾಡಿ, ‘ಕೃಷಿ ಚಟುವಟಿಕೆಗಳ ಅನುಕೂಲಕ್ಕಾಗಿ ಹೊಲಗಳಿಗೆ ಸಂಪರ್ಕ ಕಲ್ಪಿಸುವ ತಾಲ್ಲೂಕಿನ ಸುಮಾರು 800 ಕಿ.ಮೀ ರಸ್ತೆಯನ್ನು ಸುಧಾರಣೆ ಮಾಡುವ ಕಾಮಗಾರಿ ಕೈಗೊಳ್ಳುವ ಅಗತ್ಯವಿದೆ’ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಬಿ.ಪಾಟೀಲ ಕಾಮಗಾರಿಗಳ ವಿವರ ಣೆ ನೀಡಿ, ನೀರು ಸರಬರಾಜು ಯೋಜನೆಯ ಮೇಲ್ಮಟ್ಟದ ಜಲಾಗಾರ ನಿರ್ಮಾಣದಿಂದ ಗ್ರಾಮದಲ್ಲಿ ಕುಡಿ ಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಲಾರದು. ಗ್ರಾಮಸ್ಥರ ಬಹು ದಿನಗಳ ಬೇಡಿಕೆಯಂತೆ ಲೋಕವ್ವನ ದೇವಸ್ಥಾನಕ್ಕೆ ಸುಸಜ್ಜಿತ ರಸ್ತೆ ನಿರ್ಮಾಣಗೊಳ್ಳುತ್ತಿದೆ ಎಂದರು.

ಗೊಂದಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಹ್ಮದಶಾ ಆಲೂರ ಅಧ್ಯಕ್ಷತೆ ವಹಿಸಿದ್ದರು. ಸದಸ್ಯೆ ರೇಖಾ ಕಳಸಳ್ಳಿ, ತಾಯೆ ರಾಬಾನು ಸುಂಕದ, ಗಂಗವ್ವ ತಳವಾರ, ಜಗದೀಶ ಗಂಟನವರ, ಮಂಜಪ್ಪ ಮಲಗುಂದ, ಕುಸುಮಾ ಗಡಿಯಣ್ಣನವರ, ಕಮಲವ್ವ ಗುಡಿಕೇರಿ, ಮೆಹಬೂಬಸಾಬ ಶೇಷಗಿರಿ, ಜಿಪಂ ಎಂಜಿನಿಯರ್‌ ಕೆ.ಆರ್‌.ಮಠದ, ವಿ. ಯಶೋಧರ, ಗುತ್ತಿಗೆದಾರ ಎಂ.ಎ. ಮೂಡಿ, ಎಸ್‌.ಆರ್‌.ಹಾದಿಮನಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.