ADVERTISEMENT

ಜಾತ್ರಾಗೆ ಕಳೆ ಕಟ್ಟಿದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2013, 9:20 IST
Last Updated 22 ಫೆಬ್ರುವರಿ 2013, 9:20 IST
ಬ್ಯಾಡಗಿ ಪಟ್ಟಣದ ವೀರಭದ್ರೇಶ್ವರ ಹಾಗೂ ಕಲ್ಮೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ವಿಶೇಷ ಆಕರ್ಷಣೆ ನೀಡಿದ ಗೊಂಬೆ ಕುಣಿತ.
ಬ್ಯಾಡಗಿ ಪಟ್ಟಣದ ವೀರಭದ್ರೇಶ್ವರ ಹಾಗೂ ಕಲ್ಮೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ವಿಶೇಷ ಆಕರ್ಷಣೆ ನೀಡಿದ ಗೊಂಬೆ ಕುಣಿತ.   

ಬ್ಯಾಡಗಿ: ಪಟ್ಟಣದ ವೀರಭದ್ರೇಶ್ವರ ಹಾಗೂ ಕಲ್ಮೇಶ್ವರ ದೇವರ ಜಾತ್ರಾ ಮಹೋತ್ಸವ ಬುಧವಾರ ಸಡಗರ ಸಂಭ್ರಮದಿಂದ ಜರುಗಿತು. ಮಹಾರುದ್ರಾಭಿಷೇಕ ನಡೆಯಿತು. ಬೆಳಿಗ್ಗೆ 8ಗಂಟೆಗೆ ದೇವಸ್ಥಾನದಿಂದ ಆರಂಭವಾದ ಗುಗ್ಗಳ ಹಾಗೂ ಹೂವಿನ ತೇರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಪುರವಂತರು ಒಡಪುಗಳನ್ನು ಹೇಳುವ ಮೂಲಕ ವೀರಭದ್ರೇಶ್ವರ ಅವತಾರವನ್ನು ಪ್ರಸ್ತುತಪಡಿಸಿದರು.

ಮಧ್ಯಾಹ್ನ 2ಗಂಟೆಗೆ ದೇವಸ್ಥಾನದ ಆವರಣದಲ್ಲಿ ಅಗ್ನಿಕುಂಡ ಪ್ರವೇಶ ನಡೆಯಿತು. ಸಂಜೆ 7ಗಂಟೆಗೆ ವಿದ್ಯುತ್ ದೀಪಗಳಿಂದ ಅಲಂಕೃತ ದೊಡ್ಡ ರಥೋತ್ಸವ ಸಕಲ ವಾದ್ಯ ವೈಭವದೊಂದಿಗೆ ಜರುಗಿತು. ದೊಡ್ಡ ರಥೋತ್ಸವದ ಮೆರವಣೆಗೆ ದೇವಸ್ಥಾನದಿಂದ ಆರಂಭವಾಗಿ ಮುಖ್ಯ ರಸ್ತೆ, ಬನಶಂಕರಿ ರಸ್ತೆ, ದಂಡಿ ಪೇಟೆಯ ಮೂಲಕ ಹಾಯ್ದು ದೇವಸ್ಥಾನ ತಲುಪುಪಿತು.

ಹರಪನಹಳ್ಳಿ ತಾಲ್ಲೂಕು ನಂದಿಬೇವೂರಿನ ವೀರಭದ್ರೇಶ್ವರ ಕಲಾ ಸಂಘದ ನಂದಿ ಕೋಲು ಹಾಗೂ ಚಿಕ್ಕಮಗಳೂರ ಜಿಲ್ಲೆಯ ಲಿಂಗದಹಳ್ಳಿಯ ಮಹಿಳಾ ವೀರಗಾಸೆ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಸೃಷ್ಠಿ ಆರ್ಟ್ಸ್ ಅವರ ಕೀಲು ಕುದುರೆ ಹಾಗೂ ಗೊಂಬೆ ಕುಣಿತ ಮತ್ತು ಮಹಿಳೆಯರ ನವಿಲು ಕುಣಿತದಂತಹ ಜಾನಪದ ಕುಣಿತಗಳು ವಿಶೇಷ ಆಕರ್ಷಣೆ ನೀಡಿದವು. ಸುಮಾರು ಐದು ಗಂಟೆಗಳ ಕಾಲ ನಡೆದ ಮೆರವಣಿಗೆ ಸಂಭ್ರಮದಿಂದ ಜರುಗಿತು.

ಜಾತ್ರಾ ಸಮಿತಿ ಅಧ್ಯಕ್ಷ ಚಂದ್ರಣ್ಣ ಆಲದಗೇರಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಹುಚ್ಚಗೊಂಡರ,ಗೌರವ ಕಾರ್ಯದರ್ಶಿ ಮಾಲತೇಶ ಅರಳಿಮಟ್ಟಿ, ಖಜಾಂಚಿ ಶಂಭಣ್ಣ ಅಂಗಡಿ, ಸದಸ್ಯರಾದ ನಾಗಯ್ಯ ಕಲ್ಮಠ, ಶಿವಯೋಗೆಪ್ಪ ಶೆಟ್ಟರ್, ಶಂಭುಲಿಂಗಪ್ಪ ಶಿರೂರ, ಮುರುಗೇಶ ಹೊಸಂಗಡಿ, ಗಂಗಾಧರ ತಿಳವಳ್ಳಿ, ಮಹಾಲಿಂಗಪ್ಪ ಶಿರೂರ, ಶಿವಣ್ಣ ಬಣಕಾರ ಹಾಗೂ ಇನ್ನಿತರರು ವಹಿಸಿದ್ದರು.

ದ್ಯಾಮವ್ವ ಜಾತ್ರೆಗೆ ಸಂಭ್ರಮದ ತೆರೆ

ಗುತ್ತಲ: ಸಮೀಪದ ಹಾವನೂರ ದ್ಯಾಮವ್ವನ ಜಾತ್ರಾ ಮಹೋತ್ಸವ ಸಂಭ್ರಮದಿಂದ ಸಮಾರೋಪಗೊಂಡಿತು. ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ದೇವಿಗೆ ಉಡಿತುಂಬು ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ಜರುಗಿತು.

ಗುರುವಾರ ದೇವಿ ಮೂರ್ತಿಯ ಮೆರವಣಿಗೆ ವಿಜ್ರಂಭಣೆಯಿಂದ ಜರುಗಿತು. ಮೆರವಣಿಗೆಯುದ್ದಕ್ಕೂ ಚಿತ್ತಾಕರ್ಷಕದ ಪಟಾಕಿಗಳು ಸಿಡಿದು ಭಕ್ತರನ್ನು ಹರ್ಷದಲ್ಲಿ ಮುಳುಗಿಸಿದವು. ದೇವಿ ಮೂರ್ತಿ ಚೌತ ಮನಿ ಕಟ್ಟೆಗೆ ಬಂದು ತಲುಪುವವರೆಗೂ ಭಕ್ತರ ಸಂಭ್ರಮ ಮುಗಿಲು ಮುಟ್ಟಿತ್ತು.

ಜಾತ್ರೆಗೆ ಆಗಮಿಸಿದ ಸಹಸ್ರಾರು ಭಕ್ತರು ದೇವಿಯ ದರ್ಶನ ಪಡೆದು ಹಣ್ಣು ಕಾಯಿ ನೈವೇದ್ಯ ಸಲ್ಲಿಸಿ, ದೇವಿ ಕೃಪೆಗೆ ಪಾತ್ರರಾದರು. ಅಲ್ಲದೆ ಜಾತ್ರೆ ವೇಳೆ ಭಕ್ತರು ಹರಕೆ ತೀರಿಸಿದರು. ಜಾತ್ರೆಯಲ್ಲಿ ಮಹಿಳೆಯರು ಮಕ್ಕಳು ಸಂಭ್ರಮಿಸಿದರು.

ಭಕ್ತರ ದರ್ಶನದ ನಂತರ ಗುರುವಾರ ಸಹಸ್ರಾರು ಭಕ್ತರ ಜಯಕಾರಗಳೊಂದಿಗೆ ದೇವಿಯನ್ನು ಗ್ರಾಮದ ಗಡಿಗೆ ಮುಟ್ಟಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT