ADVERTISEMENT

ಜಿಲ್ಲಾ ಉತ್ಸವಕ್ಕೆ ವಿರೋಧ: ತಹಶೀಲ್ದಾರರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 5:20 IST
Last Updated 11 ಫೆಬ್ರುವರಿ 2012, 5:20 IST

ರಾಣೆಬೆನ್ನೂರು: ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಬ್ಯಾಡಗಿಯಲ್ಲಿ ನಡೆಯುವ ಹಾವೇರಿ ಜಿಲ್ಲಾ ಉತ್ಸವವನ್ನು ನಿಲ್ಲಿಸಬೇಕೆಂದು ಪ್ರತಿಭಟನೆ ನಡೆಸಿ, ನಂತರ ತಹಶೀಲ್ದಾರ ಮಹ್ಮದ್ ಝುಬೈರ್‌ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕು ಅಧ್ಯಕ್ಷ ಬಸವರಾಜಪ್ಪ ಕಡೂರು ಮಾತನಾಡಿ, ಜಿಲ್ಲೆಯಾದ್ಯಂತ ಮಳೆಯಿಲ್ಲದೇ ಬರಗಾಲದಿಂದ ಎಲ್ಲ ಬೆಳೆಗಳು ಒಣಗಿ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ, ಗ್ರಾಮೀಣ ಪ್ರದೇಶಗಳಲ್ಲಿ ದನಕುರುಗಳಿಗೆ ಮತ್ತು ಸಾರ್ವಜನಕರಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ, ಕೂಲಿಕಾರರು ಕೆಲಸವಿಲ್ಲದೇ ಗ್ರಾಮ ಬಿಟ್ಟು ಗುಳೆ ಹೊರಟಿದ್ದಾರೆ ತಿನ್ನಲು ಅನ್ನವಿಲ್ಲದೆ ಚಿಂತೆಗೀಡಾಗಿದ್ದಾರೆ ಎಂದು ದೂರಿದರು.

ಹಾವೇರಿ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದು, ಸರ್ಕಾರ ಮಾತ್ರ ಯಾವುದೇ ಕಾಮಗಾರಿ ಕೈಗೊಂಡಿಲ್ಲ, ರೈತರು ಸಾಲಗಾರರಾಗಿ ಆತ್ಮಹತ್ಯೆ ದಾರಿ ಹಿಡಿದ್ದಾರೆ. ಜಿಲ್ಲಾ ರೈತ ಸಂಘ ಹಾಗೂ ಜಿಲ್ಲೆಯ ಪ್ರಮುಖ ರೈತರರು 5 ದಿನಗಳ ಅಹೋರಾತ್ರಿ ಧರಣಿ ನಡೆಸಿದ ರೈತರನ್ನು ಕರೆಸಿ ಸುಳ್ಳು ಭರವಸೆ ನೀಡಿ ರೈತರಿಗೆ ವಂಚನೆ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಉತ್ಸಾಹದಿಂದ ಜಿಲ್ಲಾ ಉತ್ಸವ ಮಾಡುತ್ತಿರುವುದು ನಾಚಿಗೇಡಿತನ ಸಂಗತಿಯಾಗಿದೆ ಎಂದರು.

ಜಿಲ್ಲಾಧಿಕಾರಿಗಳು ಮಂತ್ರಿಗಳ ತಾಳಕ್ಕೆ ತಕ್ಕಂತೆ ಕುಣಿಯುವುದನ್ನು ಬಿಟ್ಟು ಜಿಲ್ಲೆಯ ರೈತರ, ಕೂಲಿಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಲ್ಲವಾದರೆ ತಾಲ್ಲೂಕು ರೈತ ಸಂಘದಿಂದ ತಹಶೀಲ್ದಾರ ಕಚೇರಿ ಎದುರು ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಡಿ.ಕೆ. ಕಂಬಳಿ, ಆರ್.ವಿ. ಕೆಂಚಳ್ಳೇರ, ಎಚ್.ಐ.ಉಮೇಶ, ಹಾಲೇಶ ನಾಗರಜ್ಜಿ, ಮಲ್ಲಿಕಾರ್ಜುನ, ಈರಪ್ಪ ಬುಡುಪನಹಳ್ಳಿ, ದಿಳ್ಳೆಪ್ಪ ಕಂಬಳಿ, ಸುರೇಶ ಧುಳೆಹೊಳಿ, ಜಗದೀಶ ಪಾಟೀಲ, ಯಲ್ಲಪ್ಪ ಸೂರ್ವೆ, ಪ್ರಕಾಶ ದೇಸಾಯಿ, ಕುಮಾರ ನಂಜಪ್ಪನವರ, ಚನ್ನವೀರಪ್ಪ ಹ್ನೊಚಿಕ್ಕಪ್ಪನವರ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಆರೇಮಲ್ಲಾಪೂರ ಗ್ರಾಮದಲ್ಲಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ರೈತರ ಸಮಸ್ಯೆಗಳ ಬಗ್ಗೆ ತಹಶೀಲ್ದಾರ ಮಹ್ಮದ್ ಝುಬೈರ್ ಅವರ ಅಧ್ಯಕ್ಷತೆಯಲ್ಲಿ ರೈತ ಸಂಘದ ಪದಾಧಿಕಾರಿಗಳ ಸಭೆ ನಡೆಯಿತು.

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರಾದ ಗಣೇಶ ಹಾಗೂ ಪಿ.ಡಿ. ಸಂಗನಗೌಡ್ರ ಭಾಗವಹಿಸಿದ್ದರು. ಜಿಲ್ಲಾ ರೈತ ಸಂಘದ ಅಧ್ಯಕ್ಷ ಆರ್.ವಿ. ಕೆಂಚಳ್ಳೇರ ಅವರು ತಾಲ್ಲೂಕಿನ ಎಲ್ಲ ಕೆವಿಜಿ  ಬ್ಯಾಂಕಿನ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.