ಹಾವೇರಿ: ಕಳೆದ ಎರಡು ದಿನಗಳಲ್ಲಿ ನೀಲಂ ಚಂಡಮಾರುತ ಪರಿಣಾಮದಿಂದ ಜಿಲ್ಲೆಯಲ್ಲಿ 608.6 ಮಿ.ಮೀ. ಮಳೆ ಸುರಿದಿದೆ. ನಿರಂತರವಾಗಿ ಸುರಿದ ಮಳೆಗೆ ಜಿಲ್ಲೆಯಲ್ಲಿ ಸುಮಾರು 35ಕ್ಕೂ ಹೆಚ್ಚು ಮನೆಗಳು ಕುಸಿದಿವೆ.
ಬ್ಯಾಡಗಿ ತಾಲ್ಲೂಕಿನಲ್ಲಿಯೇ 29 ಮನೆಗಳು ಭಾಗಶಃ ಕುಸಿದಿದ್ದು, ಹಾವೇರಿಯಲ್ಲಿ ಎರಡು, ಶಿಗ್ಗಾವಿಯಲ್ಲಿ ಒಂದು ಮನೆ ಕುಸಿದ ಬಗ್ಗೆ ವರದಿಯಾಗಿದೆ.
ಗುರುವಾರ ಜಿಲ್ಲೆಯಲ್ಲಿ 112.1 ಮಿ.ಮೀ. ಮಳೆಯಾಗಿದೆ. ಹಾವೇರಿಯಲ್ಲಿ 14.5 ಮಿ.ಮೀ, ರಾಣೆಬೆನ್ನೂರಿ ನಲ್ಲಿ 31 ಮಿ.ಮೀ, ಬ್ಯಾಡಗಿಯಲ್ಲಿ 24.8 ಮಿ.ಮೀ, ಹಿರೇಕೆರೂರಲ್ಲಿ 16.8ಮಿ.ಮೀ, ಸವಣೂರಿನಲ್ಲಿ 10.4ಮಿ.ಮೀ, ಶಿಗ್ಗಾವಿಯಲ್ಲಿ 9.4 ಮಿ.ಮೀ, ಹಾನಗಲ್ನಲ್ಲಿ 5.2 ಮಿ.ಮೀ ಮಳೆಯಾಗಿದೆ.
ಶುಕ್ರವಾರ ಕೂಡ ಜಿಲ್ಲೆಯಲ್ಲಿ 496.5 ಮಿ.ಮೀ ಮಳೆ ಸುರಿದಿದ್ದು, ಹಾವೇರಿಯಲ್ಲಿ 74.6ಮಿ.ಮೀ, ರಾಣೆಬೆನ್ನೂರಿನಲ್ಲಿ 63 ಮಿ.ಮೀ, ಬ್ಯಾಡಗಿಯಲ್ಲಿ 92.8 ಮಿ.ಮೀ, ಹಿರೇಕೆರೂರಿನಲ್ಲಿ 62 ಮಿ.ಮೀ, ಸವಣೂರಿನಲ್ಲಿ 82.9 ಮಿ.ಮೀ, ಶಿಗ್ಗಾವಿಯಲ್ಲಿ 65 ಮಿ.ಮೀ, ಹಾನಗಲ್ನಲ್ಲಿ 56.2 ಮಿ.ಮೀ ಮಳೆಯಾದ ಬಗ್ಗೆ ವರದಿಯಾಗಿದೆ.
ಹಾವೇರಿ ತಾಲ್ಲೂಕಿನಲ್ಲಿ ಮಳೆ ಸ್ವಲ್ಪವೂ ಬಿಡುವಿಲ್ಲದೆ ಸುರಿಯಿತು. ವಾತಾವರಣ ಸಂಪೂರ್ಣ ತಂಪಾಗಿತ್ತು. ಧಾರಾಕಾರ ಸುರಿದ ಮಳೆಯಿಂದಾಗಿ ಕಾಲುವೆ, ರಸ್ತೆಗಳ ಮೇಲೆಲ್ಲ ನೀರು ತುಂಬಿ ಹರಿಯಿತು.
ರಾಣೆಬೆನ್ನೂರು ವರದಿ
ನಗರದಲ್ಲಿ ಸುರಿದ ಮಳೆಗೆ ಗೋಡೆಯೊಂದು ಕಾರ್ ಶೆಲ್ಟರ್ ಮೇಲೆ ಕುಸಿದು ಬಿದ್ದು ಎರಡು ಕಾರು ಮತ್ತು ಒಂದು ಬೈಕ್ ಜಖಂಗೊಂಡ ಘಟನೆ ಗುರುವಾರ ಸಂಜೆ ಅಂಬಾ ಭವಾನಿ ದೇವಸ್ಥಾನದ ರಸ್ತೆಯಲ್ಲಿ ಸಂಭವಿಸಿದೆ.
ತಪ್ಪಿದ ಭಾರೀ ಅನಾವುತ ಸ್ಥಳೀಯರ ಪ್ರಕಾರ ಈ ವಿಶಾಲವಾದ ಜಾಗೆಯಲ್ಲಿ ಸದಾ ಮಕ್ಕಳು ಆಟ ಆಡುತ್ತಾರೆ ಆದರೆ ಕರೆಂಟ್ ಇಲ್ಲದೇ ಇದ್ದುದರಿಂದ ಅಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಗೋಡೆ ಬೀಳುವ ಕೆಲ ನಿಮಿಷಗಳ ಮೊದಲು ಇದೇ ಜಾಗೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೆಲಸಗಾರರಿಗೆ ಮನೆಯ ಮಾಲೀಕರು ಚಹಾ ಕುಡಿದು ಕೆಲಸ ನಿರ್ವಹಿಸುವಂತೆ ಹೇಳಿ ಅವರನ್ನು ಮನೆಯ ಒಳಗೆ ಕರೆದಿದ್ದರಿಂದ ಕೆಲಸಗಾರರು ಅದಷ್ಠವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜಾಗೆಯ ಮಾಲೀಕ ಮಾಂಗಿಲಾಲ ಎಸ್. ಜೈನ್ ಕಳೆದ 8-10 ದಿನಗಳ ಹಿಂದೆಯಷ್ಟೇ ಕಾರುಗಳಿಗಾಗಿ ಮೇಲ್ಛಾವಣಿ ನಿರ್ಮಿಸಿದ್ದರು. ಗೋಡೆ ಬಿದ್ದ ರಭಸಕ್ಕೆ ಕಾರು ಮತ್ತು ಬೈಕ್ ಮೇಲೆ ಮೇಲ್ಛಾವಣಿಯೂ ಕುಸಿದುಬಿದ್ದಿದೆ.
ಅಕ್ಕಿಆಲೂರ ವರದಿ
ಚಂಡ ಮಾರುತದ ಪ್ರಭಾವ ಅರೇ ಮಲೆನಾಡು ಪ್ರದೇಶಕ್ಕೂ ವ್ಯಾಪಿಸಿದ್ದು ಅಕ್ಕಿಆಲೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಧವಾರ ಸಂಜೆಯಿಂದ ಮಳೆ ಆರಂಭಗೊಂಡಿದ್ದು ಜನಜೀವನ ಅಸ್ತವ್ಯಸ್ತ ಗೊಂಡಿದೆ.
ಬುಧವಾರ ರಾತ್ರಿಯಿಡೀ ಸುರಿದ ಜಿಟಿಜಿಟಿ ಮಳೆ ಗುರುವಾರ ಇಡೀ ದಿನ ಹಾಗೆಯೇ ಮುಂದುವರೆದಿತ್ತು.
ಒಂದೇ ಸಮನೆ ಬೀಳುತ್ತಿರುವ ಮಳೆಯಿಂದ ನಾಗರಿಕರು ತೀವ್ರ ಕಿರಿಕಿರಿ ಅನುಭವಿ ಸುವಂತಾಗಿದ್ದು, ನಿತ್ಯದ ಬದುಕಿನ ಮೇಲೆ ದುಷ್ಪರಿಣಾಮ ಉಂಟಾಗಿದೆ. ಸುತ್ತಲಿನ ಅರಳೇಶ್ವರ, ಕಲ್ಲಾಪುರ, ಮಲಗುಂದ, ಶ್ಯಾಡಗುಪ್ಪಿ, ಶೇಷಗಿರಿ, ಮಲಗುಂದ, ಕೂಸನೂರ, ಹಾವಣಗಿ, ವೀರಾಪುರ, ಬಸಾಪುರ, ಸೋಮಾಪುರ, ಬಾಳಂಬೀಡ ಇನ್ನೂ ಹಲವು ಗ್ರಾಮ ಗಳಲ್ಲಿಯೂ ಮಳೆ ಬೀಳುತ್ತಿದೆ.
ಸದ್ಯಕ್ಕೆ ಸುರಿಯುತ್ತಿರುವ ಮಳೆಯಿಂದ ರೈತ ಸಮೂಹದಲ್ಲಿ ಆತಂಕದ ಕಾರ್ಮೋಡ ಆವರಿಸಿದೆ. ಕೃಷಿ ಭೂಮಿಗಳಲ್ಲೆಗ ಫಸಲು ಕೊಯ್ದು ಹಾಕಲಾಗಿದ್ದು ಮಳೆಯಿಂದ ಫಸಲು ಅಲ್ಲಿಯೇ ಮೊಳಕೆಯೊಡೆದೀತು ಎಂಬ ಆತಂಕ ಮನೆ ಮಾಡಿದೆ.
ಹಿಂಗಾರಿ ಬಿತ್ತನೆಗೆ ಮಳೆ ಹೊಸ ಕಳೆ ಮೂಡಿಸಿದೆಯಾದರೂ ಫಸಲು ತೆಗೆದು ಹಾಕಿರುವ ರೈತರು ಮಾತ್ರ ಪರದಾಡು ವಂತಾಗಿದೆ.
ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದ ವ್ಯಾಪಾರ-ವಹಿವಾಟು ಸ್ತಬ್ಧಗೊಂಡಿದ್ದು ಸುತ್ತಲಿನ ಗ್ರಾಮಸ್ಥರು ಇತ್ತ ಕಡೆಗೆ ತಿರುಗಿಯೂ ನೋಡುತ್ತಿಲ್ಲ. ಮಳೆಯಿಂದಾಗಿ ಅಲ್ಲಲ್ಲಿ ವಿದ್ಯುತ್ ಸಂಪರ್ಕವೂ ಕೈಕೊಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.