ADVERTISEMENT

ತಪ್ಪಿತಸ್ಥರ ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 6:00 IST
Last Updated 16 ಮಾರ್ಚ್ 2011, 6:00 IST

ಸವಣೂರ: ಕರ್ತವ್ಯನಿರತರಾಗಿದ್ದ ತೊಂಡೂರ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ಮೇಲೆ ಹಲ್ಲೆ ನಡೆಸಿ, ಅವರನ್ನು ಪಂಚಾಯ್ತಿ ಕಾರ್ಯಾಲಯದಿಂದ ಹೊರದಬ್ಬಿದ ಘಟನೆಯ ಬಗ್ಗೆ ಪಂಚಾಯತ್‌ರಾಜ್ ಇಲಾಖೆ ನೌಕಕರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.ಘಟನೆಯನ್ನು ಖಂಡಿಸಿ ಮಂಗಳವಾರ ತಹಶೀಲ್ದಾರ ಡಾ. ಪ್ರಶಾಂತ ನಾಲವಾರ ಅವರಿಗೆ ಮನವಿ ಸಲ್ಲಿಸಿದ ತಾಲ್ಲೂಕಿನ ಪಂಚಾಯ್ತಿ ನೌಕರ ಸಮೂಹ, ತಪ್ಪಿತಸ್ಥ ವ್ಯಕ್ತಿಗಳನ್ನು ತಕ್ಷಣ ಬಂಧಿಸುವಂತೆ ಹಾಗೂ ಕಾರ್ಯದರ್ಶಿಗಳಿಗೆ ಸೂಕ್ತ ರಕ್ಷಣೆಯನ್ನು ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

‘ಮಾ. 14 ರಂದು ಕರ್ತವ್ಯದ ನಿರ್ವಹಣೆಯಲ್ಲಿದ್ದ ತೊಂಡೂರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎನ್.ಕೆ ಬಾರಕೇರ ಅವರ ಕೆಲಸಕ್ಕೆ ಅಡ್ಡಿ ಪಡಿಸಲಾಗಿದೆ. ಗ್ರಾಮದ ಕೆ.ಎಸ್.ಆರ್‌ಪಿ ಸಿಬ್ಬಂದಿ ಎಸ್.ಸಿ ಪಾಟೀಲ, ಸಹೋದ್ಯೋಗಿ ಸುಂಕದ ಹಾಗೂ ತೊಂಡೂರಿನ ಬಸಪ್ಪ ಕಬ್ಬೂರ, ಮಂಜುನಾಥ ಕಬ್ಬೂರ ಎಂಬುವರು ಕಾರ್ಯದರ್ಶಿಗಳ ಮೆಲೆ ಹಲ್ಲೆ ನಡೆಸಿದ್ದಾರೆ. ಕಾರ್ಯದರ್ಶಿ ಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕಾರ್ಯದರ್ಶಿಗಳ ಅಂಗಿಯ ಕೊರಳಪಟ್ಟಿಯನ್ನು ಹಿಡಿದು, ಹಲ್ಲೆ ಮಾಡಲಾಗಿದೆ. ಬಳಿಕ ಕಾರ್ಯದರ್ಶಿಗಳನ್ನು ಕಾರ್ಯಾಲಯದಿಂದ ಹೊರದೂಡಲಾಗಿದೆ. ಈ ಸಂದರ್ಭದಲ್ಲಿ ಗ್ರಾ.ಪಂ ಸಿಬ್ಬಂದಿಗಳು, ಕಾರ್ಯದರ್ಶಿಗಳ ರಕ್ಷಣೆ ಮಾಡಿದ್ದಾರೆ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸವಣೂರಿನ ಉಪವಿಭಾಗಾಧಿಕಾರಿಗಳು ಹಾಗೂ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ಪಂಚಾಯ್ತಿ ಸಿಬ್ಬಂದಿ ತಮ್ಮ ಮನವಿಯನ್ನು ಸಲ್ಲಿಸಿದ್ದಾರೆ.ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಾದ ಕೃಷ್ಣಾ ಧರ್ಮರ್, ಅಶೋಕ ಗೊಂದಿ, ಎಸ್.ಸಿ ಪಾಟೀಲ, ಟಿ.ಪಿ ಮಲ್ಲಾಡದ್, ಪ್ರಶಾಂತ ಮಾಧಳ್ಳಿ, ಸಿಂಪಿ. ಕಾರ್ಯದರ್ಶಿಗಳಾದ ಹಜರತನವರ್, ಡಿ.ಕೆ ಕುಲಕರ್ಣಿ, ವೈ.ಎಮ್ ಚಾಕರಿ, ಪಾರ್ವತಿ ಸೇರಿದಂತೆ ತಾಲ್ಲೂಕಿನ ಎಲ್ಲ ಪಿಡಿಓಗಳು ಕಾರ್ಯದರ್ಶಿಗಳು, ಪಂಚಾಯ್ತಿ ಸಿಬ್ಬಂದಿ ಮನವಿ ಸಲ್ಲಿಕೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅಸಮಾಧಾನ: ಪಂಚಾಯ್ತಿ ಕಾರ್ಯದರ್ಶಿಗಳ ಮೇಲೆ ಹಲ್ಲೆ ನಡೆದಿದ್ದರೂ, ಸವಣೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ವಿಳಂಬ ಮಾಡಲಾಗಿದೆ. ತಮ್ಮನ್ನೆ ಪರೋಕ್ಷವಾಗಿ ಬೆದರಿಸಲಾಗಿದೆ ಎಂಬ ಅಸಮಾಧಾನ ಪಂಚಾಯ್ತಿ ಸಿಬ್ಬಂದಿಗಳಿಂದ ವ್ಯಕ್ತವಾಯಿತು.

ಖಂಡನೆ:  ಪಂಚಾಯತ್ ಸಿಬ್ಬಂದಿಗಳ ಮೇಲೆ ನಡೆದ ಹಲ್ಲೆ ಘಟನೆಯನ್ನು ತಾಲ್ಲೂಕಿನ ಗ್ರಾಮ ಲೆಕ್ಕಾಧಿಕಾರಿಗಳ ಸಂಘವೂ ತೀವ್ರವಾಗಿ ಖಂಡಿಸಿದ್ದು, ಸರಕಾರಿ ನೌಕರರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ಇಂತಹ ಘಟನೆಗಳು ಪುನಃ ಮರುಕಳಿಸದಂತೆ ಸೂಕ್ತ ಕ್ರಮಗಳನ್ನು ಜರುಗಿಸಬೇಕು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.