ಹಾವೇರಿ: ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣ ಕಡಿಮೆಯಾದರೂ ಜಿಲ್ಲೆಯಲ್ಲಿ ಹರಿಯುತ್ತಿರುವ ತುಂಗಭದ್ರಾ ಹಾಗೂ ವರದಾ ನದಿಗಳಿಗೆ ಹೆಚ್ಚಿನ ಪ್ರಮಾಣದ ನೀರು ಬರುತ್ತಿದ್ದು, ಭೀತಿಯನ್ನುಂಟು ಮಾಡಿವೆ.
ಶುಕ್ರವಾರ ತುಂಗಭದ್ರಾ ಹಾಗೂ ವರದಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ತುಂಗಭದ್ರಾ ನದಿ ದಡದಲ್ಲಿರುವ ಹಾವೇರಿ ತಾಲ್ಲೂಕಿನ ಹಾವನೂರು, ಗಳಗನಾಥ ಹಾಗೂ ವರದಾ ನದಿ ದಡದಲ್ಲಿರುವ ಹಾವೇರಿ ತಾಲ್ಲೂಕಿನ ಹೊಸರಿತ್ತಿ, ಕೊರಡೂರು, ನೀರಲಗಿ, ಬೆಳವಿಗೆ, ಹಾಲಗಿ, ಮರೋಳ, ಮರಡೂರು, ಉಕ್ಕುರು, ಕೊಡಬಾಳ ಗ್ರಾಮಗಳ ಜಮೀನಿಗೆ ನೀರು ನುಗ್ಗಿದೆ. ಕಬ್ಬು, ಸೆಂಗಾ ಹಾಗೂ ಹತ್ತಿ ಬೆಳೆ ನೀರಿನಲ್ಲಿ ನಿಂತಿವೆ.
ಆದರೆ, ಯಾವುದೇ ತರಹದ ಬೆಳೆಹಾನಿಯಾಗಿಲ್ಲ. ಇದೇ ರೀತಿ ನೀರಿನ ಪ್ರಮಾಣ ಹೆಚ್ಚಾದರೆ, ಹೆಚ್ಚಿನ ಪ್ರಮಾಣದ ಬೆಳೆಹಾನಿ ಆಗಲಿದೆ ಎಂಬುದು ರೈತರ ಅಭಿಪ್ರಾಯ.
ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕ ಪ್ರಮಾಣದ ಮಳೆ ಬೀಳುತ್ತಿರುವುದರಿಂದ ನದಿಗಳಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿರುವುದೇ ಜಿಲ್ಲೆಯ ಪ್ರಮುಖ ನದಿಗಳಲ್ಲಿ ಪ್ರವಾಹ ಉಂಟಾಗಲು ಕಾರಣವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.