ಹಿರೇಕೆರೂರ: ಜಾನಪದ ಸಾಹಿತ್ಯವು ಮಾರ್ಗ ಸಾಹಿತ್ಯದ ತಾಯಿ ಬೇರು. ಇಷ್ಟು ಗಟ್ಟಿನೆಲೆ ಹೊಂದಿರುವ ಮಾತೃ ಹೃದಯದ ಈ ಜನಪದ ಸಾಹಿತ್ಯವು ಇಂದು ನಮ್ಮಿಂದ ದೂರವಾಗುತ್ತಿದೆ ಎಂದು ಸಂಪನ್ಮೂಲ ಶಿಕ್ಷಕ ಕೆ.ಆರ್. ಹಿರೇಮಠ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರಂಪರೆ ಕೂಟವು ಬುಧವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ `ಜಾನಪದ ಪರಂಪರೆ~ ಕುರಿತು ಉಪನ್ಯಾಸ ನೀಡಿದ ಅವರು, ಯಂತ್ರ ಸಂಸ್ಕೃತಿಯು ದೇಶೀಯ ಸಾಹಿತ್ಯವನ್ನು ಅಳಿವಿನ ಅಂಚಿಗೆ ಒಯ್ಯುತ್ತಿದೆ ಎಂದು ವಿಷಾದಿಸಿದರು.
ಪಂಪ, ರನ್ನ, ಪೊನ್ನ ಮೊದಲಾದವರ ಮಾರ್ಗ ಸಾಹಿತ್ಯದಲ್ಲೂ ಜನಪದ ಸೊಗಡು ಇದೆ. ಮಾರ್ಗ ಸಾಹಿತ್ಯದಲ್ಲಿ ಕೃತಿಯ ಕರ್ತೃವನ್ನು ಗುರುತಿಸಿ, ಗೌರವಿಸಲು ಸಾಧ್ಯವಾಯಿತು. ಅದು ಜನಪದ ಸಾಹಿತ್ಯದಲ್ಲಿ ಆಗಲಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಎಲ್.ಎಸ್. ಪೂಜಾರ ಮಾತನಾಡಿ, ವಿದ್ಯಾರ್ಥಿಗಳು ನಮ್ಮ ಜನಪದ ಬದುಕಿನ ಮಹತ್ವ ಅರಿಯುವುದರೊಂದಿಗೆ, ಪರಂಪರೆಯ ಮಹತ್ವವನ್ನು ತಿಳಿದುಕೊಳ್ಳಬೇಕು ಎಂದರು.
ಪರಂಪರೆ ಕೂಟದ ಸಂಚಾಲಕರಾದ ಉಪನ್ಯಾಸಕ ಎಸ್.ಪಿ.ಗೌಡರ ಆಶಯ ನುಡಿಗಳಲ್ಲಿ ಪರಂಪರೆ ಕೂಟದ ಚಟುವಟಿಕೆಗಳನ್ನು ವಿವರಿಸಿದರು.
ಉಪನ್ಯಾಸಕ ಆರ್.ಎಸ್ ಚಕ್ಕಿ, ಗಾಯಕ ಬಸವರಾಜ ಶಿಗ್ಗಾಂವ,ಉಪನ್ಯಾಸಕರಾದ ಎಸ್.ಬಿ.ಭಜಂತ್ರಿ, ದಿನೇಶ, ಡಾ.ಪರಮೇಶ್ವರ, ಎಸ್.ಬಿ.ಮಲ್ಲೂರ, ಕವಿತಾ ಹರಿಹರ, ಕೆ.ಆರ್.ಕೊಣ್ತಿ ಮತ್ತಿತರರು ಉಪಸ್ಥಿತರಿದ್ದರು. ಕು.ಅಶ್ವಿನಿ ಹಿರೇಮಠ ಸ್ವಾಗತಿಸಿದರು. ಉಪನ್ಯಾಸಕ ಎಸ್.ಎಚ್.ದೊಡ್ಡಗೌಡರ ವಂದಿಸಿದರು. ಪ್ರವೀಣ ಕುರುವತ್ತೇರ ನಿರೂಪಿಸಿದರು.ಸಚಿವರಾಗಿದ್ದ ವಿ.ಎಸ್.ಆಚಾರ್ಯ ನಿಧನಕ್ಕೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.