ADVERTISEMENT

ದೌರ್ಜನ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 8:40 IST
Last Updated 4 ಅಕ್ಟೋಬರ್ 2012, 8:40 IST

ರಟ್ಟೀಹಳ್ಳಿ: ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆ ಮತ್ತು ಲಾಠಿ ಪ್ರಹಾರ ಪ್ರಕರಣದಲ್ಲಿ ಪೊಲೀಸರೇ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅಮಾಯಕರ ಮೇಲೆ ಹಲ್ಲೆ ನಡೆಸಿದ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ತಾಲ್ಲೂಕು ಬಿಜೆಪಿ ಘಟಕ ಬುಧವಾರ ಪ್ರತಿಭಟನೆ ನಡೆಸಿತು.

ಇಲ್ಲಿನ ಬಂಕಾಪುರ ಸರ್ಕಲ್‌ನಲ್ಲಿ ಬುಧವಾರ ಬೆಳಿಗ್ಗೆ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪಾಲಾಕ್ಷಗೌಡ ಪಾಟೀಲ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಪೊಲೀಸರ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದರು. 2 ತಾಸು ರಸ್ತೆ ತಡೆ ನಡೆಸಿದ ನಂತರ ಉಪತಹಶೀಲ್ದಾರ ಎ.ವಿ.ಶಿಗ್ಗಾವಿ ಅವರಿಗೆ ಮನವಿ ಸಲ್ಲಿಸಿದರು.

ಮೆರವಣಿಗೆ ನೋಡಲು ಬಂದವರ ಮೇಲೂ ಲಾಠಿ ಪ್ರಹಾರ ಮಾಡಿದ್ದು ಸರಿಯಲ್ಲ. ಅವರನ್ನು ಬಂಧಿಸಿ, ಅಮಾನವೀಯವಾಗಿ, ಹಲ್ಲೆ ನಡೆಸಲಾಗಿದೆ. ಬಂಧಿತರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಗೃಹ ಸಚಿವರನ್ನು ಆಗ್ರಹಿಸಿದರು.

ರಾಜ್ಯ ಭೋವಿ ಸಂಘರ್ಷ ಸಮಿತಿ ಉಪಾಧ್ಯಕ್ಷ ಬಸವರಾಜ ಬೇವಿನಹಳ್ಳಿ, ಜಿಪಂ ಸದಸ್ಯೆ ಬಸಮ್ಮ ಅಬಲೂರ, ಗಂಗಾಧರ ಮಲೆಬೆನ್ನೂರ, ರಾಘವೇಂದ್ರ ಹರವಿಶೆಟ್ಟರ, ನಿಂಗಪ್ಪ ಚಳಗೇರಿ, ಉಮೇಶ ಬಣಕಾರ, ಶಿವಣ್ಣ ಗುತ್ತಲ. ಬಸವರಾಜ ಬಳಿಗಾರ, ಚಂದ್ರಶೇಖರಪ್ಪ ಆಲದಗೇರಿ, ಶ್ರೀಕಾಂತ ಕುಲಕರ್ಣಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.