ಶಿಗ್ಗಾವಿ: ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ತಾಲ್ಲೂಕಿನ ಹೊತ್ನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಸ್ಥಳೀಯ ಗ್ರಾಮ ಪಂಚಾಯತಿಗೆ ಬೀಗ ಹಾಕಿ ಸುಮಾರು 4-5 ತಾಸು ಪ್ರತಿಭಟನೆ ನಡೆಸಿದರು.
ಕೆಲವು ತಿಂಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ.
ನೀರು ನೀಡುವ ವ್ಯವಸ್ಥೆ ಕಲ್ಪಿಸುವ ಬೇರೆ ಮಾರ್ಗ ಕಂಡುಕೊಳ್ಳುವಂತೆ ಹಾಗೂ ತಕ್ಷಣ ಈ ಸಮಸ್ಯೆ ಪರಿಹರಿಸುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮನವಿ ಮಾಡಲಾಗಿದೆ. ಆದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಯಾವುದೆ ವ್ಯವಸ್ಥೆ ಕಲ್ಪಿಸುವ ಕಾರ್ಯಕೈಗೊಂಡಿರಲಿಲ್ಲ.
ಅದರಿಂದ ಗ್ರಾಮಸ್ಥರು ನೀರಿಗಾಗಿ ನಿತ್ಯ ಮಕ್ಕಳು, ಮಹಿಳೆಯರು ಅಲೆಯುವಂತಾಗಿದೆ. ಅದಕ್ಕೆ ಬೇಸತ್ತ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ, ಗ್ರಾ.ಪಂ. ಅಧಿಕಾರಿಗಳ ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು.
ಖಾಲಿ ಕೊಡಗಳನ್ನು ಹಿಡಿದು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ, ಹಲಗೆ, ತಮಟೆಗಳನ್ನು ಭಾರಿಸುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ನಂತರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಗ್ರಾ.ಪಂ. ಕಾರ್ಯಲಯದ ಮುಂದೆ ನೂರಾರು ಖಾಲಿ ಕೊಡಗಳನ್ನು ಪ್ರದರ್ಶನಕ್ಕಿಟ್ಟು ತಮಟೆ ಬಾರಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
`ಬೆಳವತ್ತಿ ಕೆರೆಯಲ್ಲಿ ನಿರ್ಮಿಸಲಾದ ಕೊಳವೆಬಾವಿ ಪೈಪಲೈನ್ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು, ಅದರಲ್ಲಿ ಹಲವಾರು ಅಧಿಕಾರಿಗಳು ಅವ್ಯವಹಾರ ಮಾಡಿದ್ದಾರೆ. ಅದರಿಂದ ಇಡೀ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಅಲೆಡುವಂತಾಗಿದೆ. ಮೇಲಾಧಿಕಾರಿಗಳು ಈ ಕಡೆ ಗಮನ ಹರಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಮೂಲಕ ಗ್ರಾಮಕ್ಕೆ ಸರಿಯಾಗಿ ನೀರು ನೀಡುವ ಕಾರ್ಯಕೈಗೊಳ್ಳಬೇಕು~ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಜಿ.ಪಂ. ಎಂಜಿನಿಯರ್ ದೇಸಾಯಿ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ನಂತರ ಸ್ಥಳಕ್ಕೆ ಆಗಮಿಸಿದ ಜಿ.ಪಂ.ಅಧಿಕಾರಿ ಜೆ.ಸಿ. ವಾರದ, ಗ್ರಾಮಸ್ಥರ ಸಮಸ್ಯೆ ಆಲಿಸಿ ವಾರದೊಳಗೆ ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯಿಂದ ಹಿಂದೆ ಸರಿದರು.
ಗ್ರಾ.ಪಂ.ಮಾಜಿ ಅಧ್ಯಕ್ಷ ಹನಮಂತಗೌಡ್ರ ಪಾಟೀಲ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ರಮೇಶ ಬೆಳವತ್ತಿ, ಮಾರ್ತಾಂಡ ಮೂಡೂರ, ರವಿ ಗುಳಣ್ಣನವರ, ಚಂದ್ರು ಬೆಲವತ್ತಿ, ಸುರೇಶ ಗೂಳಣ್ಣನವರ, ಶಿವಾನಂದಪ್ಪ ಈಳಗೇರ, ಭರಮಣ್ಣ ಗೂಳಣ್ಣನವರ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.