ADVERTISEMENT

ಪಾರದರ್ಶಕತೆ ಇಲ್ಲದ ಅಧಿಕಾರಿಗಳ ವಿರುದ್ಧ ಕ್ರಮ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 5:15 IST
Last Updated 16 ಸೆಪ್ಟೆಂಬರ್ 2011, 5:15 IST

ಹಾವೇರಿ: ಅಧಿಕಾರಿಗಳು ಕಾರ್ಯ ನಿರ್ವಹಣೆಯಲ್ಲಿ ಪಾರದರ್ಶಕವಾಗಿ ರದಿದ್ದರೆ, ಅಂತಹ ಅಧಿಕಾರಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗು ವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಓಲೇಕಾರ ಎಚ್ಚರಿಸಿದ್ದಾರೆ.

ಜಿ.ಪಂ. ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಇಲಾಖೆಗಳ ಪ್ರಗತಿಯ ವಿವರ ವನ್ನು ನೀಡುವಂತೆ ಪತ್ರ ಬರೆದು ಕೇಳಿ ದರೂ, ಈವರೆಗೆ ಕೇವಲ 12 ಇಲಾಖೆಗಳವರು ಮಾತ್ರ ಮಾಹಿತಿ ನೀಡಿದ್ದಾರೆ. ಉಳಿದ ಇಲಾಖೆಗಳ ಅಧಿ ಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.

ಇಲಾಖೆಯ ಮಾಹಿತಿಯನ್ನು ಜಿ.ಪಂ. ಅಧ್ಯಕ್ಷರಿಗೆ ನೀಡಲು ಹಿಂದೇಟು ಹಾಕುವ ಅಧಿಕಾರಿಗಳು ಇನ್ನು ಸದಸ್ಯರು ಮತ್ತು ಸಾಮಾನ್ಯರಿಗೆ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಇನ್ನು ಮುಂದೆ ಕೇಳಿದ ಮಾಹಿತಿಯನ್ನು ಸಕಾಲಕ್ಕೆ ನೀಡಬೇಕು. ಇಲ್ಲವಾದರೆ, ಅಧಿಕಾರಿಗಳ ವಿರುದ್ಧ ಇಲಾಖಾ ಮುಖ್ಯಸ್ಥರಿಗೆ ವರದಿ ಸಲ್ಲಿಸ ಲಾಗುವುದು ಎಂದರು.

ಆಡಳಿತದಲ್ಲಿ ಅಧಿಕಾರಿಗಳ ವಿಳಂಬ ನೀತಿಯನ್ನು ಇನ್ನು ಸಹಿಸಲಾಗದು ಎಂದು ಎಚ್ಚರಿಸಿದ ಅಧ್ಯಕ್ಷರು, ಇಂದಿರಾ ಆವಾಸ್ ಯೋಜನೆಯ ಫಲಾನುಭವಿ ಗಳ ಪಟ್ಟಿಯನ್ನು ಜಿಲ್ಲಾ ಪಂಚಾಯಿತಿಗೆ ಸಕಾಲಕ್ಕೆ ಸಲ್ಲಿಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇದೇ 15ರೊಳಗೆ ತಪ್ಪದೇ ಕಳುಹಿಸುವಂತೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಂಬಂಧಿಸಿದ ಯಾವುದೇ ಕಟ್ಟಡ ಉದ್ಘಾಟನೆಗೆ ಅಥವಾ ಕಾರ್ಯ ಕ್ರಮ ಇದ್ದಲ್ಲಿ, ಅಧಿಕಾರಿಗಳು ಶಿಷ್ಟಾ ಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಬಗ್ಗೆ ಅಗತ್ಯ ಅಧಿಕಾರಿಗಳಿಗೆ ಮಾರ್ಗದರ್ಶನ ಬೇಕಾದಲ್ಲಿ ಇಲಾಖೆಯಿಂದ ಪಡೆದು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗಂಗಾ ಕಲ್ಯಾಣ ಅಡಿಯಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಕಾಮಗಾರಿ ಜಿಲ್ಲೆಯಲ್ಲಿ 2006-07ರ ಸಾಲಿನಿಂದಲೂ ಬಾಕಿ ಇರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅಧ್ಯ ಕ್ಷರು, ಮುಂಗಾರು ಬೆಳೆ ಕಟಾವು ಆದ ತಕ್ಷಣ ಕೆ.ಪಿ.ಟಿ.ಸಿ.ಎಲ್. ಅಧಿಕಾರಿಗಳು ಬಾಕಿ ಕಾಮಗಾರಿಗಳನ್ನು ಪೂರ್ಣ ಗೊಳಿಸಬೇಕು ಅಲ್ಲದೇ, ಇನ್ನು ಮುಂದೆ ಅಧಿಕಾರಿಗಳು ಪ್ರತಿ ತಿಂಗಳೂ ಪ್ರಗತಿ ಬಗ್ಗೆ ಅನುಸರಣಾ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯ ಕೆಲವೆಡೆಗಳಲ್ಲಿ ವಾಂತಿ, ಭೇದಿ ಪ್ರಕರಣಗಳು ವರದಿಯಾಗಿರುವ ಬಗ್ಗೆ ಅಧ್ಯಕ್ಷರು ಸಭೆಯ ಗಮನಕ್ಕೆ ತಂದಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಈಶ್ವರ ಮಾಳೋದೆ, ಗ್ರಾ.ಪಂ. ವಾಟರ್‌ಮನ್‌ಗಳಿಗೆ ನೀರು ಪರೀಕ್ಷಾ ಉಪಕರಣ ಗಳನ್ನು ನೀಡಿದ್ದರೂ ಸಹ ಮಳೆಗಾಲದಲ್ಲಿ ನೀರು ಪೂರೈಸುವ ವಾಲ್ವ್‌ನಲ್ಲಿ ಕಲುಷಿತ ನೀರು ಸೇರಿದ ನೀರನ್ನು   ಪೂರೈಸುವುದೇ ಇದಕ್ಕೆ ಕಾರಣ. ಇನ್ನು ಮುಂದೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.

ಜಿಲ್ಲೆಯಲ್ಲಿ ಡೆಂಗೆ ಭೀತಿ ಇಲ್ಲ: ಪತ್ತೆ ಯಾದ 6 ಡೆಂಗೆ ಪ್ರಕರಣಗಳಲ್ಲಿ ಆರೂ ಜನರೂ ಗುಣಮುಖರಾಗಿದ್ದಾರೆ. ಇದನ್ನು ಹೊರತುಪಡಿಸಿದರೆ,   ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಇಲ್ಲ ಎಂದು ವಿವರಣೆ ನೀಡಿದರು.

ಕಳೆದ ತಿಂಗಳು ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ನೀಡಲಾಗಿದ್ದು, ಈ ತಿಂಗಳಲ್ಲಿ ಬಿಟ್ಟು ಹೋದ   ಜಾನುವಾರುಗಳಿಗೆ ಲಸಿಕೆ ನೀಡುವ ಕಾರ್ಯ ಚಾಲ್ತಿಯಲ್ಲಿದೆ ಎಂದು ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಶಿವರಾಂ ಭಟ್ ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಮುಂದಿನ ತಿಂಗಳು ಆರಂಭಗೊಳ್ಳುವ ಹಿಂಗಾರು ಬಿತ್ತನೆ ವೇಳೆಗೆ ಜಿಲ್ಲೆಗೆ ಅವಶ್ಯವಿರುವ ಬೀಜ ಗೊಬ್ಬರ ಸಂಗ್ರಹ ಉತ್ತಮವಾಗಿದೆ ಎಂದು ಕೃಷಿ ಜಂಟಿ ನೀರ್ದೇಶಕ ಎಸ್.ಕೆ. ಕೆಂಪರಾಜು ಸಭೆಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.