ಹಾವೇರಿ: ಸರ್ಕಾರಿ ಹಾಗೂ ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತ ಸ್ನಾತಕೋತ್ತರ ಪದವಿ ಕಲಿಯುತ್ತಿದ್ದ 19 ವಿದ್ಯಾರ್ಥಿಗಳನ್ನು ಕಡಿಮೆ ಹಾಜ ರಾತಿ ನೆಪದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದೇ, ಪರೀಕ್ಷಾ ಕೇಂದ್ರದಿಂದ ಹೊರಕಳಿದ ಘಟನೆ ತಾಲ್ಲೂಕಿನ ಕೆರಿಮತ್ತಿಹಳ್ಳಿಯಲ್ಲಿರುವ ಧಾರವಾಡ ಕವಿವಿ ರಾಜೀವ್ಗಾಂಧಿ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದಿದೆ.
ಗುರುವಾರ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ಕನ್ನಡ ಹಾಗೂ ಪತ್ರಿಕೋದ್ಯಮ ವಿಭಾಗದ 3ನೇ ಸೆಮಿಸ್ಟರ್ ಪರೀಕ್ಷೆಗೆ ೧೬೯ ವಿದ್ಯಾರ್ಥಿಗಳು ಹಾಜರಾಗಿದ್ದರು. ಆಡಳಿತ ಮಂಡಳಿ ಕವಿವಿ ನಿಯಮದಂತೆ ಶೇ. ೭೫ರಷ್ಟು ಹಾಜರಾತಿ ಹೊಂದಿದ 150 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲಿ್ಪಸಿ, ಉಳಿದ ವಿದ್ಯಾರ್ಥಿಗಳಿಗೆ ಅವಕಾಶ ನೀಡದ ಕಾರಣ ಆಕ್ರೋಶಗೊಂಡ ವಿದ್ಯಾರ್ಥಿಗಳು ಕವಿವಿ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು.
ಕೆಲ ಅಭ್ಯರ್ಥಿಗಳು ಮನೆಯತ್ತ ನಡೆದರೆ, ಏಳಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾವು ಯಾವುದೇ ಸರ್ಕಾರಿ ಹಾಗೂ ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿಲ್ಲ. ಆರೋಗ್ಯದ ತೊಂದರೆಯಿಂದ ಸರಿಯಾಗಿ ತರಗತಿಗಳಿಗೆ ಸರಿಯಾಗಿ ಹಾಜರಾಗಿಲ್ಲ. ನಾವು ಅನಾರೋಗ್ಯದ ಕುರಿತು ಪ್ರಮಾಣ ಪತ್ರ ನೀಡುವುದಾಗಿ ಹೇಳಿದರೂ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ ಎಂದು ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡರು.
‘ನಾನು ಖಾಸಗಿ ಶಿಕ್ಷಣ ಸಂಸ್ಥೆ ಮಾಲೀಕ. ಸ್ನಾತಕೋತ್ತರ ಕಾರ್ಯವೈಖರಿ ಖಂಡಿಸಿ ಇತ್ತೀಚೆಗೆ ವಿದ್ಯಾರ್ಥಿಗಳು ಕೈಗೊಂಡ ಪ್ರತಿಭಟನೆ ನೇತೃತ್ವ ವಹಿಸಿದ್ದೆ ಎನ್ನುವ ಕಾಣಕ್ಕಾಗಿ ನಾನು ತರಗತಿಗಳಿಗೆ ಹಾಜರಾಗಿದ್ದರೂ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ’ ಎಂದು ಪರೀಕ್ಷೆ ವಂಚಿತ ವಿದ್ಯಾರ್ಥಿ ಹೇಮಂತ ಮರ್ಗಿ ಆರೋಪಿಸಿದರು.
ಈ ಕುರಿತು ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಡಾ. ಟಿ.ಎಂ.ಭಾಸ್ಕರ್ ಮಾತನಾಡಿ, ಕವಿವಿ ನಿಮಯದ ಪ್ರಕಾರ ಶೇ. ೭೫ಕ್ಕಿಂತ ಕಡಿಮೆ ಹಾಜರಾತಿ ಹೊಂದಿದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗದಿರಲು ಮೊದಲೇ ಸೂಚಿಸಿದೆ. ಅದು ಅಲ್ಲದೇ, ಹಾಜರಾತಿ ಕಡಿಮೆ ಇರುವ ಕೆಲ ಅಭ್ಯರ್ಥಿಗಳು ಅರೇ ಸರ್ಕಾರಿ, ಖಾಸಗಿ ಶಾಲೆ ಹಾಗೂ ಕಂಪೆನಿಗಳಲ್ಲಿ ಕೆಲಸ ಮಾಡುವ ಕುರಿತು ನಮಗೆ ದೂರುಗಳು ಬಂದ ಹಿನ್ನೆಲೆ ಯಲ್ಲಿ ಅವುಗಳನ್ನು ಪರಿಶೀಲಿಸಲಾಗಿದೆ.
ಅದರಲ್ಲಿ ಕೆಲವು ದೃಢಪಟ್ಟಿವೆ. ಆಯಾ ವಿಭಾಗದ ಮುಖ್ಯಸ್ಥರು ನೀಡಿದ ಹಾಜರಾತಿ ಮೇರೆಗೆ ಕಡಿಮೆ ಹಾಜರಾತಿ ಇದ್ದ ವಿದ್ಯಾರ್ಥಿಗಳ ಪಟ್ಟಿಯನ್ನು ನೊಟೀಸ್ ಬೋರ್ಡ್ಗೆ ಅಂಟಿಸಲಾಗಿದೆ. ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಅವಕಾಶ ಕಲ್ಪಿಸಿಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.