ADVERTISEMENT

‘ಬಂಜಾರ ವಸತಿ ಶಾಲೆ ಆರಂಭಿಸಿ’

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 9:01 IST
Last Updated 4 ಡಿಸೆಂಬರ್ 2017, 9:01 IST

ಶಿಗ್ಗಾವಿ: ‘ದೇಶದ ಏಕತೆಗೆ ಬಂಜಾರ ಭಾಷೆ, ಸಂಸ್ಕೃತಿಯು ಅಪಾರ ಕೊಡುಗೆ ನೀಡಿದೆ. ಹೀಗಾಗಿ ಸರ್ಕಾರ ತಾಂಡಾಗಳಲ್ಲಿನ ಬಂಜಾರ ಸಮುದಾ ಯದ ಜನರ ಜೀವನ ಗುಣಮಟ್ಟವನ್ನು ಹೆಚ್ಚಿಸಲು ಮುಂದಾಗಬೇಕು’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲ್ಲೂಕಿನ ಗೊಟಗೋಡಿ ಉತ್ಸವ ರಾಕ್‌ ಗಾರ್ಡನ್‌ದಲ್ಲಿ ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದ ವತಿಯಿಂದ ಭಾನುವಾರ ನಡೆದ  2ನೇ ದಿನದ ಬಂಜಾರ ಸಾಹಿತ್ಯ ಮತ್ತು ಸಂಸ್ಕೃತಿ ಬಹುಮುಖೀ ದಾಖಲೀಕರಣ ವಿಷಯ ಕುರಿತ ಸಂವಾದ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಇತರ ಸಮುದಾಯಗಳ ವಸತಿ ಶಾಲೆಗಳಂತೆಯೇ ಬಂಜಾರ ಸಮಾಜದ ಮಕ್ಕಳಿಗೆ ಪ್ರತ್ಯೇಕವಾದ ವಸತಿ ಶಾಲೆ ಆರಂಭಿಸುವಂತೆ ಸಚಿವ ಎಚ್‌.ಆಂಜನೇಯ ಅವರಿಗೆ ನಾಲ್ಕು ವರ್ಷಗಳ ಹಿಂದೆ ಮನವಿ ಮಾಡಲಾಗಿದೆ. ಅಲ್ಲದೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅದಕ್ಕಾಗಿ ಸುಮಾರು ₹700 ಕೋಟಿ ಹಣವಿದೆ. ಆದರೆ, ಅದು
ಈತನಕ ಬಳಕೆ ಆಗಿಲ್ಲ. ರಾಜ್ಯದಲ್ಲಿ ತಕ್ಷಣ ಬಂಜಾರ ಸಮಾಜದ ಮಕ್ಕಳಿಗೆ ವಸತಿ ಶಾಲೆ ಆರಂಭಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ‘ತಾಂಡಾಗಳ ಅಭಿವೃದ್ಧಿ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರದಲ್ಲೇ ರಾಜ್ಯದಲ್ಲಿನ ಬಂಜಾರ ಸಮಾಜದ ಶಾಸಕರು–ಸಂಸದರ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು. ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ಹೀರಾಲಾಲ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ಯಾಮ ಬಿಹಾರಿಲಾಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.