ಸವಣೂರ: ರಾಜ್ಯದಲ್ಲಿನ ಹಮಾಲಿ ಕಾರ್ಮಿಕರ ಹತ್ತಾರು ಬೇಡಿಕೆಗಳು, ಸಮಸ್ಯೆಗಳು ಪರಿಹಾರ ಕಾಣದೆ ಉಳಿದುಕೊಂಡಿದ್ದು, ಅವುಗಳನ್ನು ಸರ್ಕಾರ ಪರಿಹರಿಸಬೇಕು ಎಂದು ರಾಜ್ಯ ಹಮಾಲಿ ಕಾರ್ಮಿಕರ ಸಂಘದ ತಾಲ್ಲೂಕು ಘಟಕ ಆಗ್ರಹಿಸಿದೆ.
ಮಂಗಳವಾರ ಸವಣೂರಿನಲ್ಲಿ ಪ್ರತಿಭಟನಾ ಮೆರವಣಿಗೆಯೊಂದಿಗೆ ಸರ್ಕಾರಕ್ಕೆ ತಮ್ಮ ಬೇಡಿಕೆಗಳ ಮನವಿ ಯನ್ನು ಸಲ್ಲಿಸಿದ ಹಮಾಲಿ ಕಾರ್ಮಿಕರು, ಅಸಂಘಟಿತ ವಲಯದಲ್ಲಿನ ಕಾರ್ಮಿ ಕರಿಗೆ ಇಂದಿಗೂ ಯಾವದೇ ಸೌಲಭ್ಯ ಲಭ್ಯವಾಗಿಲ್ಲ ಎಂದು ದೂರಿದ್ದಾರೆ.
ಅಸಂಘಟಿತ ಕಾರ್ಮಿಕರ ಸಾಮಾಜಿಕ ಮಂಡಳಿಯ ಕಾರ್ಯವೈಖರಿಯೂ ತೃಪ್ತಿಕರವಾಗಿಲ್ಲ. ಕನಿಷ್ಠ ಪಕ್ಷ ಗುರುತಿನ ಚೀಟಿಯನ್ನೂ ಕಾರ್ಮಿಕರಿಗೆ ವಿತರಿಸಿಲ್ಲ.
ವರ್ಷದಲ್ಲಿ ಕೆಲವು ತಿಂಗಳು (ಸೀಸನ್ದಲ್ಲಿ) ಮಾತ್ರ ವೃತ್ತಿಯನ್ನು ನಿರ್ವಹಿ ಸುವ ಹಮಾಲಿ ಕಾರ್ಮಿಕರು, ಉಳಿದ ಅವಧಿಯಲ್ಲಿ ನಿರುದ್ಯೋಗಿಗ ಳಾಗಿರುತ್ತಾರೆ. ಈ ಹಂತದಲ್ಲಿ ಸರಕಾರ ತನ್ನ ಮುಂಬರುವ ರಾಜ್ಯ ಬಜೆಟ್ನಲ್ಲಿ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಹೆಚ್ಚಿನ ಅನುದಾನ ಕಾಯ್ದಿರಿಸಬೇಕು.
ಅಸಂಘಟಿತ ಕಾರ್ಮಿಕರ ಮಂಡಳಿಯಿಂದ ಎಲ್ಲ ಕಾರ್ಮಿಕರಿಗೆ ಸೌಲತ್ತುಗಳು ಜಾರಿಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಎಲ್ಲ ಹಮಾಲಿ ಕಾರ್ಮಿಕರಿಗೂ ರಾಷ್ಟ್ರೀಯ ಸ್ವಾಸ್ಥ ಭೀಮಾ ಯೋಜನೆಯನ್ನು ಜಾರಿಗೊಳಿಸ ಬೇಕು. 2 ರೂ ದರದಲ್ಲಿ ಆಹಾರ ಧಾನ್ಯ ವಿತರಿಸಬೇಕು.
ಗುತ್ತಿಗೆ ಪದ್ಧತಿ ನಿಷೇಧಗೊಳಿಸಿ ಎಲ್ಲ ಕಾರ್ಮಿಕರಿಗೂ ನಿಶ್ಚಿತ ಪಿಂಚಣಿ ನೀಡಬೇಕು. ಕಾರ್ಮಿಕ ಕಾನೂನುಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಬೇಕು ಎಂಬ ಬೇಡಿಕೆಯನ್ನು ಸಂಘ ಸರಕಾರದ ಮುಂದಿಟ್ಟಿದೆ.
ಸ್ಥಳೀಯ ಎಪಿಎಂಸಿ ಆವರಣದಿಂದ ಸಂಘದ ಅಧ್ಯಕ್ಷ ಸೈಯ್ಯದ ರಶೀದ ಹವಾಲ್ದಾರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಕೈಗೊಳ್ಳಲಾಯಿತು. ನಗರದ ಪ್ರಮುಖ ಬೀದಿಯಲ್ಲಿ ಸಾಗಿ ಕಂದಾಯ ಇಲಾಖೆಯ ಆವರಣದಲ್ಲಿ ಸಮಾವೇಶಗೊಂಡಿತು.
ಸಂಘದ ಕಾರ್ಯದರ್ಶಿ ರಾಜೇಸಾಬ ಕರಡಿ, ವಿವಿಧ ಬೇಡಿಕೆಗಳ ಮನವಿಯನ್ನು ತಹಶೀಲ್ದಾರ ಕಾರ್ಯಾ ಲಯದ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಅರ್ಪಿಸಿದರು.
ಈ ಸಂದರ್ಭದಲ್ಲಿ ಸುಲೇಮಾನ ಕಿಸ್ಮತಗಾರ, ಮಹಬೂಬಖಾನ ಫರಾಶ, ಸೈಯ್ಯ ಸುಲೇಮಾನ ಪೀರಜಾದೆ, ಬಾಬಾ ಜಾನ ಮನಿಯಾರ, ದಾವು ಮೀಯ್ಯಾ ಪಲ್ಟಣಿ, ಬಸೀರಅಹ್ಮದ ನಾನಾಮಲ್ಲಿಕ, ಬಸವಣ್ಣೆಪ್ಪ ನೀರಲಗಿ, ಅಬ್ದುಲ ಮುನಾಫ್ ಫರಾಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.