ADVERTISEMENT

ಭಾಷಣ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 5:55 IST
Last Updated 10 ಫೆಬ್ರುವರಿ 2012, 5:55 IST
ಭಾಷಣ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ
ಭಾಷಣ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ   

ಹಾವೇರಿ: `ಕನ್ನಡ ಸಾಹಿತ್ಯ ಪರಂಪರೆಗೆ ಆಧುನಿಕ ಜಗತ್ತಿನ ಸೂಕ್ಷ್ಮ ಸಂವೇದನೆಗಳನ್ನು ತರುವ ಮೂಲಕ ಹೊಸ ಪಂಪರೆನ್ನು ಹುಟ್ಟು ಹಾಕಿದ ಗೋಕಾಕರ ಸಾಹಿತ್ಯ ಮತ್ತು ಜೀವನ ದೃಷ್ಟಿಗಳನ್ನು ಇಂದಿನ ಎಳೆ ಪೀಳಿಗೆಗೆ ಪರಿಚಯಿಸುವ ಕೆಲಸ ಹೆಚ್ಚೆಚ್ಚು ನಡೆಯಬೇಕಿದೆ~ ಎಂದು ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಅಭಿಪ್ರಾಯಪಟ್ಟರು.

ನಗರದ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಡಾ. ವಿ.ಕೃ.ಗೋಕಾಕ್ ರಾಷ್ಟ್ರೀಯ ಟ್ರಸ್ಟ್‌ನ  ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಡಾ.ವಿ.ಕೃ.ಗೋಕಾಕ್ ಬದುಕ-ಬರಹ ಕುರಿತು ಏರ್ಪಡಿಸಿದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕ ಸಾಹಿತ್ಯ ಪ್ರಕಾರಗಳಲ್ಲಿ ಗೋಕಾಕ್‌ರ ಸಾಹಿತ್ಯ ಪ್ರಕಾರವೇ ವಿಭಿನ್ನವಾಗಿದೆ. ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ತಮ್ಮ ಸಾಹಿತ್ಯದ ಮೂಲಕ ಪರಿಚಯಿಸುವ ಕೆಲಸವನ್ನು ಅವರು ಮಾಡಿದ್ದಾರೆ. ಅಂತಹ ಸೂಕ್ಷ್ಮಗಳು ಗೋಕಾಕರನ್ನು ಆಳವಾಗಿ ಅಧ್ಯಯನ ಮಾಡಿದಾಗ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುನ್ಸಿಪಲ್ ಹೈಸ್ಕೂಲಿನ ಪ್ರಭಾರಿ ಮುಖ್ಯೋಪಾಧ್ಯಾಯಿನಿ ಶೋಭಾ ಜಾಗಟಗೇರಿ ಮಾತನಾಡಿ, ಗೋಕಾಕರ ಸಾಹಿತ್ಯ ಮತ್ತು ಚಿಂತನೆಗಳ ಮರು ಮನನಕ್ಕೆ ಇಂತಹ ಕಾರ್ಯಕ್ರಮಗಳು ಪೂರಕ ಎಂದು ಹೇಳಿದರು.

ವೇದಿಕೆಯ ಮೇಲೆ ಟ್ರಸ್ಟ್‌ನ ಸದಸ್ಯ ಸತೀಶ ಕುಲಕರ್ಣಿ, ಶಿಕ್ಷಣ ಇಲಾಖೆಯ ಅಧಿಕಾರಿ ರಾಮಣ್ಣನವರ, ನಿವೃತ್ತ ಎಂಜಿನಿಯರ್ ಆರ್.ಎಫ್. ಕಾಳೆ ಹಾಜರಿದ್ದರು.

ಗೋಕಾಕರ ಬದುಕು ಬರಹ ಕುರಿತು ನಡೆದ ಈ ಭಾಷಣ ಸ್ಪರ್ಧೆಯಲ್ಲಿ ಜಿಲ್ಲೆಯ ಏಳು ತಾಲ್ಲೂಕುಗಳ ಇಪ್ಪತ್ತೊಂದು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರೊ. ಎಂ.ಕೆ. ಕಲ್ಲಜ್ಜನವರ, ಸಿ.ಎ. ಕೂಡಲಮಠ ಹಾಗೂ ಮಂಜುಳಾ ರಾಶಿನಕರ ನಿರ್ಣಾಯಕರಾಗಿದ್ದರು.
ಫಲಿತಾಂಶ: ಹಾವೇರಿಯ ಲಯನ್ ಆಂಗ್ಲ ಮಾಧ್ಯಮ ಶಾಲೆಯ ನಿಧಿ ಎಸ್ (ಪ್ರಥಮ), ಬ್ಯಾಡಗಿಯ ಎಸ್.ಎಸ್.ಪಿ.ಎನ್. ಹೈಸ್ಕೂಲಿನ ಲಕ್ಷ್ಮಿ ಹಳ್ಳಳ್ಳಿ (ದ್ವೀತಿಯ), ಹತ್ತಿಮತ್ತೂರ ಹೈಸ್ಕೂಲಿನ ಶಿವರಾಜಕುಮಾರ ಡೊಳ್ಳಿನ (ತೃತೀಯ), ಸವಣೂರು ಸ.ಭಾ.ಪ್ರೌಢಶಾಲೆಯ ಶಾರದಾ ವಿ. ಕುಲಕರ್ಣಿ ಹಾಗೂ ಗಂಜಿಗಟ್ಟಿ ಎಂ.ಬಿ.ಆರ್. ಎಸ್ ಪ್ರೌಢಶಾಲೆಯ ಶೋಭಾ ನಾಗಶೆಟ್ಟಿ ಸಮಾಧಾನಕರ ಬಹುಮಾನ ಪಡೆದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಮುನ್ಸಿಪಲ್ ಹೈಸ್ಕೂಲ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಯಹಯೋಗದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯಿನಿ ಶೋಭಾ ಜಾಗಟಗೇರಿ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.