
ಹಾವೇರಿ: `ಅಡುಗೆಯವರು ಮತ್ತು ಶಿಕ್ಷಕರು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಶಿಕ್ಷಣಕ್ಕೆ ಉತ್ತೇಜನ ನೀಡುವ ಸಲುವಾಗಿ ಆರಂಭವಾದ ಅಕ್ಷರ ದಾಸೋಹ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ~ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಡಾ.ಶೋಭಾ ನಿಸ್ಸೀಮಗೌಡ್ರ ಹೇಳಿದರು.
ಸೋಮವಾರ ನಗರದ ಹುಕ್ಕೇರಿಮಠದಲ್ಲಿ ಜಿ.ಪಂ. ಹಾಗೂ ಅಕ್ಷರ ದಾಸೋಹ ಕಾರ್ಯಕ್ರಮ ಸಹೋಗದೊಂದಿಗೆ ಸೋಮ ವಾರ ನಡೆದ ಜಿಲ್ಲಾ ಮಟ್ಟದ ಮುಖ್ಯ ಅಡುಗೆ ಸಿಬ್ಬಂದಿಯರಿಗೆ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮನೆಯಲ್ಲಿ ನಮ್ಮ ಮಕ್ಕಳಿಗೆ ಯಾವ ರೀತಿಯ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಅಡುಗೆ ಮಾಡಿ ಅವರ ಆರೋಗ್ಯದ ಕಡೆ ಗಮನ ಹರಿಸುತ್ತೇವೆಯೋ ಅದೇ ರೀತಿ ಶಾಲೆಯಲ್ಲಿ ಅಡುಗೆ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ಶುಚಿತ್ವದೊಂದಿಗೆ ಉತ್ತಮ ಆಹಾರ ತಯಾರಿಸಿ ಶಾಲಾ ಮಕ್ಕಳಿಗೆ ಬಡಿಸಿದಾಗ ನಿಮ್ಮ ವೃತ್ತಿಗೆ ಗೌರವ ಬರಲಿದೆ ಎಂದರು.
ಸರ್ಕಾರವು ನಿಮಗೆ ಮಕ್ಕಳ ಪೋಷಣೆ ಜವಾಬ್ದಾರಿಯನ್ನು ವಹಿಸಿದ್ದು, ಅದನ್ನು ಸಮರ್ಥವಾಗಿ ನಿಭಾಯಿ ಸುವ ಕುರಿತು ಈ ಕಾರ್ಯಾಗಾರದಲ್ಲಿ ತಿಳಿಸಿಕೊಡುವ ಮಾಹೊತೊಯನ್ನು ದಿನನಿತ್ಯದ ಕಾರ್ಯದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ಮಾಡಿದರು.
ಜಿ.ಪಂ. ಉಪಕಾರ್ಯದರ್ಶಿ ಜಿ. ಗೋವಿಂದಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಿಲೆಂಡರ್ ಸ್ಪೋಟ್ದಂತ ಮಾರ ಣಾಂತಿಕ ಘಟನೆಗಳು ಜರುಗುತ್ತಿದ್ದು, ಅಡುಗೆ ಸಿಬ್ಬಂದಿಗಳು ಕಾರ್ಯನಿರ್ವಹಿಸುವಾಗ ಸುರಕ್ಷತೆ ಹಾಗೂ ಶುಚಿತ್ವದೆಡೆಗೆ ಹೆಚ್ಚು ಗಮನ ನೀಡುವಂತೆ ತಿಳಿಸಿದರು.
ಶಾಲಾ ಆವರಣವನ್ನು ಕೈತೋಟವಾಗಿ ಮಾರ್ಪಡಿಸಿ, ಅಡುಗೆಗೆ ಅಗತ್ಯವಿರುವ ತರಕಾರಿ ಗಳನ್ನು ಹಾಗೂ ಸೊಪ್ಪನ್ನು ಬೆಳೆದು, ಅದನ್ನೇ ದಿನನಿತ್ಯದ ಆಹಾರ ತಯಾರಿಕೆಗೆ ಬಳಸಿಕೊಳ್ಳು ವುದರಿಂದ ಪೌಷ್ಠಿಕ ಆಹಾರ ಒದಗಿಸಿದಂತಾ ಗುತ್ತದೆ ಎಂದರು.
ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಝೆಡ್. ಎಂ.ಖಾಜಿ ಮಾತನಾಡಿ, 2003-04ರಲ್ಲಿ ಆರಂಭವಾದ ಅಕ್ಷರ ದಾಸೋಹ ಕಾರ್ಯಕ್ರಮ ನಿರಂತರವಾಗಿ ಜಾರಿಯಲ್ಲಿದೆ. ಇಲ್ಲಿ ಅಡುಗೆ ತಯಾರಿಸುವ ಸಿಬ್ಬಂದಿಗಳು ಸುರಕ್ಷತೆಯಿಂದ ಸಿಲೆಂಡರ ಬಳಕೆ ಮತ್ತು ಶುಚಿತ್ವ ಕಾಯ್ದು ಕೊಳ್ಳುವ ಉದ್ದೆೀಶವನ್ನು ಈ ಕಾರ್ಯಾಗಾರ ಹೊಂದಿದೆ ಎಂದ ಅವರು, ಸಿಲೆಂಡರ್ ಬಳಕೆ ಕುರಿತು ನೀಡಲಾದ ಪ್ರಾತ್ಯಕ್ಷಿಕೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ತಮ್ಮ ಕಾರ್ಯದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ಮಾಡಿದರು.
ಸಿದ್ಧತೆ, ಸ್ವಚ್ಛತೆ, ಸಮನ್ವಯತೆ ಹಾಗೂ ಸುರಕ್ಷತೆ ಎಂಬ ನಾಲ್ಕು ಅಂಶಗಳ ಮೇಲೆ ಈ ಅಕ್ಷರ ದಾಸೋಹ ಕಾರ್ಯಕ್ರಮ ಸಾಗುತ್ತಿದೆ. ಮುಖ್ಯ ಅಡುಗೆ ಸಿಬ್ಬಂದಿಯವರು ಈ ನಾಲ್ಕು ಅಂಶಗಳನ್ನು ದಿನನಿತ್ಯದ ಕಾರ್ಯಗಳಲ್ಲಿ ಅಳವಡಿಸಿಕೊಳ್ಳಬೇಕು. ಮನೆಗೆ ಬರುವ ಅತಿಥಿಗಳನ್ನು ಉಪಚರಿಸುವಂತೆ, ಮಕ್ಕಳಿಗೂ ಸಹ ಉಪಚರಿಸಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗದಿಗೆವ್ವ ಬಸನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಇಂಡಿಯನ್ ಗ್ಯಾಸ್ ಏಜೆನ್ಸಿ ಮಾಲೀಕ ಶಿವಬಸವ ಬೆಲ್ಲದ, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಕೃಷ್ಣಾ ಬುಗಟ್ಯಾಗೋಳ, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರೀವಿಕ್ಷಕ ಎಸ್. ಜಿ.ಕೋಟಿ ಇತರರು ಹಾಜರಿದ್ದರು. ಹುಕ್ಕೇರಿ ಮಠದ ಪ್ರೌಢಶಾಲಾ ವಿದ್ಯಾರ್ಥಿ ಗಳು ಪ್ರಾರ್ಥನಾಗೀತೆ ಹಾಡಿದರು. ಸರ್ವ ಶಿಕ್ಷಣ ಅಭಿಯಾನದ ಅಕ್ಷರ ದಾಸೋಹದ ಅಧಿಕಾರಿ ಎಸ್.ಎಸ್.ಅಡಿಗ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.