ಬ್ಯಾಡಗಿ: ಚುನಾವಣೆಯ ಸಂದರ್ಭದಲ್ಲಿ ಭರಪೂರ ಭರವಸೆ ನೀಡುವ ರಾಜಕಾರಣಿಗಳು ಅಧಿಕಾರ ಸಿಕ್ಕ ಬಳಿಕ ಜನರನ್ನು ಮರೆಯುತ್ತಾರೆ. ಅಧಿಕಾರಸ್ಥರ ದೃಷ್ಟಿಯಲ್ಲಿ ಬಡವರು ಮತ ಬ್ಯಾಂಕ್ಗಳಷ್ಟೆ ಎಂದು ಬ್ಯಾಡಗಿಯ ಯಡಿಯೂರಪ್ಪ ಬಡಾವಣೆಯ ನಿವಾಸಿಗಳು ವಿಷಾದದಿಂದ ಹೇಳುತ್ತಾರೆ.
ಕಳೆದ ಎರಡು ವರ್ಷಗಳ ಹಿಂದೆ ಪಟ್ಟಣದ ನಿವೇಶನರಹಿತ ಕಡುಬಡವರಿಗೆ ನಿವೇಶನ ಒದಗಿಸುವ ಉದ್ದೇಶದಿಂದ ವಾಯುವಿಹಾರಕ್ಕೆ ಮೀಸಲಿಟ್ಟಿದ್ದ ಸರ್ಕಾರಿ ಜಾಗವನ್ನು ವಶಕ್ಕೆ ತೆಗೆದುಕೊಂಡು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಡಾವಣೆ ಎಂದು ಹೆಸರಿಸಿ ಅಭಿವೃದ್ಧಿಪಡಿಸಲಾಯಿತು.
ತುರಾತುರಿಯಲ್ಲಿ ಹಕ್ಕುಪತ್ರಗಳನ್ನು ಸಹ ವಿತರಿಸಲಾಯಿತು. ಆದರೆ ನಿವೇಶನ ವಿತರಿಸುವಲ್ಲಿ ಕಾಣದ ಕೈ ಕೆಲಸ ಮಾಡಿತ್ತು. ನಿವೇಶನ ಕೊಡಿಸುವ ನೆಪದಲ್ಲಿ ಬಡವರಿಂದ ಹಣ ವಸೂಲಿ ಸಹ ಮಾಡಲಾಯಿತು ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಆದರೆ ಎರಡು ವರ್ಷ ಕಳೆದರೂ ಬಡಾವಣೆಯಲ್ಲಿ ಮೂಲ ಸೌಲಭ್ಯ ಒದಗಿಸಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳು ಕತ್ತಲೆಯಲ್ಲಿಯೇ ಬದುಕು ಸಾಗಿಸಬೇಕಾಗಿದೆ.
‘ಬಡಾವಣೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿರುವುದರಿಂದ ರಾತ್ರಿ ಮೇಣದ ಬತ್ತಿ, ಚಿಮಣಿಗಳನ್ನೇ ಅವಲಂಭಿಸಬೇಕಾಗಿದೆ. ಕತ್ತಲೆಯಾದರೆ ಸಾಕು ಹಾವು, ಚೇಳುಗಳ ಭಯ ಕಾಡುತ್ತದೆ’ ಎನ್ನುತ್ತಾರೆ ಸೋಮವ್ವ.
‘ಆಶ್ರಯ ಬಡಾವಣೆಯ ರಸ್ತೆ ಸಂಪೂರ್ಣ ಹಾಳಾಗಿದ್ದು ಅಲ್ಲಿ ತಿರುಗಾಡುವುದು ಕಷ್ಟವಾಗಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಮಳೆಗಾಲದಲ್ಲಿ ಇಲ್ಲಿನ ಜನರ ಸ್ಥಿತಿ ಹೇಳತೀರದು. ಮೂಲಸೌಕರ್ಯ ಕಲ್ಪಿಸುವಂತೆ ಪುರಸಭೆಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಇಲ್ಲಿನ ನಿವಾಸಿ ಪರಸಪ್ಪ.
ಮೂಲಸೌಕರ್ಯ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕಿ, ಅನುದಾನ ಬಿಡುಗಡೆಯಾದಾಗ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.