ADVERTISEMENT

ರೈತರಿಂದ ತಹಸೀಲ್ದಾರ್ ಕಚೇರಿ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 8:05 IST
Last Updated 8 ಅಕ್ಟೋಬರ್ 2011, 8:05 IST

ಹಾವೇರಿ: ಹಾವೇರಿ ತಾಲ್ಲೂಕನ್ನು ಬರ ಗಾಲ ಪೀಡಿತ ತಾಲ್ಲೂಕು ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಹರ ಘಟಕ ಕಾರ್ಯಕರ್ತರು ಶುಕ್ರವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನಗರದ ಪುರಸಿದ್ದೇಶ್ವರ ದೇವಸ್ಥಾನ ದಿಂದ ಪ್ರತಿಭಟನಾ ಮೆರವಣಿಗೆ ಆರಂಭಿ ಸಿದ ರೈತರು, ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ವಿರುದ್ಧ ಘೋಷಣೆ ಗಳನ್ನು ಕೂಗುತ್ತಾ ಎಂ.ಜಿ.ರಸ್ತೆ, ಗಾಂಧಿ ವೃತ್ತ ಮಾರ್ಗವಾಗಿ ಸುಭಾಷ ವೃತ್ತ, ಸ್ಟೇಶನ್ ರಸ್ತೆ ಮೂಲಕ ತಹಸೀಲ್ದಾರ್ ಕಚೇರಿ ತಲುಪಿ ಮುತ್ತಿಗೆ        ಹಾಕಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಶಿವಾನಂದ ಗುರಮಠ ಮಾತನಾಡಿ, ಹಾವೇರಿ ತಾಲ್ಲೂಕಿನಾದ್ಯಂತ ಸಮರ್ಪಕ ಮಳೆ ಯಾಗದೇ ಬೆಳೆಗಳು ಒಣಗಿ ಹೋಗಿದೆ. ಆದರೆ, ಅಧಿಕಾರಿಗಳು ಸರ್ಕಾರಕ್ಕೆ ಸರಿಯಾದ ವರದಿ ನೀಡದೇ ತಾಲ್ಲೂಕಿನ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ ಕೂಡಾ ತಾಲ್ಲೂಕಿನ ಬೆಳೆ ಪರಿಸ್ಥಿತಿ ಬಗ್ಗೆ ಸರಿಯಾದ ಮಾಹಿತಿ ಪಡೆ ಯದೇ ಕೇವಲ ಅಧಿಕಾರಿಗಳನ್ನೇ ನಂಬಿ ಕೊಂಡು ರೈತ ವಿರೋಧಿ ನೀತಿ ಅನು ಸರಿಸುತ್ತದೆ. ಕೂಡಲೇ ಹಾವೇರಿ ತಾಲ್ಲೂಕಿನ ಮಳೆ ಹಾಗೂ ಬೆಳೆಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕಲ್ಲದೇ, ಹಾವೇರಿ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎ.ಹಿರೇಮಠ ಮಾತನಾಡಿ, ರೈತಪರ ಸರ್ಕಾರ ಎಂದು ಹೇಳಿಕೊಳ್ಳುವ ರಾಜ್ಯ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಇಲ್ಲಿವರೆಗೆ ಅಕ್ರಮ ಜಮೀನುಗಳನ್ನು ಸಕ್ರಮಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿಲ್ಲ. ಸುವರ್ಣಭೂಮಿ ಯೋಜನೆ ಯನ್ನು ಎಲ್ಲ ರೈತರಿಗೂ ವಿಸ್ತರಣೆ ಮಾಡಬೇಕು. ಜಮೀನುಗಳಿಗೆ ಹೋಗುವ ಹಾದಿಗಳನ್ನು ದುರಸ್ತಿ ಮಾಡಬೇಕು. ಕ್ವಿಂಟಾಲ್ ಮೆಕ್ಕೆ ಜೋಳಕ್ಕೆ 2 ಸಾವಿರ ರೂ., ಕ್ವಿಂಟಾಲ್ ಭತ್ತಕ್ಕೆ 2500 ರೂ., ಕ್ವಿಂಟಾಲ್ ಹತ್ತಿಗೆ 10 ಸಾವಿರ ರೂ., ಪ್ರತಿ ಟನ್ ಕಬ್ಬಿಗೆ 2500 ರೂ. ಬೆಲೆ ನಿಗದಿ ಮಾಡಬೇಕು. ಟ್ರ್ಯಾಕ್ಟರ‌್ರ ಪಾವರ್ ಟೇಲರ್ ಹಾಗೂ ಕೃಷಿ ಉಪಕರಣಗಳಿಗೆ ತಕ್ಷಣ ಸಹಾಯಧನ ತಕ್ಷಣ ಬಿಡುಗಡೆ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಮದ್ಯ ಮಾರಾಟವನ್ನು ನಿಲ್ಲಿಸಬೇಕು. ಪಂಪಸೆಟ್ ಬಾಕಿಯನ್ನು ಸಂಪೂರ್ಣ ಮನ್ನಾ ಮಾಡಬೇಕು. ಪ್ರತಿ ಜಿಲ್ಲೆಯಲ್ಲಿ ಬೆಂಬಲೆ ಬೆಲೆಯಲ್ಲಿ ಭತ್ತ, ಗೋವಿನಜೋಳ ಖರೀದಿ ಕೇಂದ್ರ ಆರಂಭಿಸಬೇಕು ಹಾಗೂ ಟ್ರ್ಯಾಕ್ಟರ್ ಹಾಗೂ ಬೆಳೆ ಸಾಲಗಳ ಬಲವಂತ ವಸೂಲಿಯನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಬೇಡಿಕೆಗಳ ಮನವಿಯನ್ನು ಪ್ರಬಾರಿ ತಹಸೀಲ್ದಾರ್ ಡಂಬಳ ಅವರಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಶಹರ ಕಾರ್ಯಾಧ್ಯಕ್ಷ ಸುರೇಶ ಚಲ ವಾದಿ, ಹನುಮಂತಪ್ಪ ಲಿಂಗದಹಳ್ಳಿ, ದುರ್ಗಪ್ಪ ಹುಲ್ಲತ್ತಿ, ಹನುಮಂತಪ್ಪ ಹುಚ್ಚಣ್ಣನವರ, ಎಸ್.ಎಸ್.ಹಿರೇ ಮಠ, ಇಮ್ತಿಯಾಜ್ ವಿಜಾಪುರ, ಮರಿಯಪ್ಪ ಸರಾವರಿ, ನಟರಾಜ ತುಪ್ಪದ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಪೂಜಾರ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.