ADVERTISEMENT

ರೈತರ ಹಿತರಕ್ಷಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 5:15 IST
Last Updated 24 ಜೂನ್ 2013, 5:15 IST

ಬ್ಯಾಡಗಿ: ವನ್ಯಜೀವಿಗಳಿಂದ ರೈತರ ಬೆಳೆ ರಕ್ಷಣೆ, ರೈತ ಸಂಜೀವಿನಿ ಮೊತ್ತ ಹೆಚ್ಚಳ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಕೃಷಿಕ ಸಮಾಜದ ಅಧ್ಯಕ್ಷ ಹಾಗೂ ರೈತ ಮುಖಂಡ ಗಂಗಣ್ಣ ಎಲಿ ಸರ್ಕಾರವನ್ನು ಒತ್ತಾಯಿಸಿದರು.

ಬಿತ್ತನೆ ನಡೆಸಿದಾಗಿನಿಂದ ಹಿಡಿದು ಬೆಳೆ ಬರುವವರೆಗೆ ರೈತರು ಒಂದಿಲ್ಲೊಂದು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಕಳೆದ ವರ್ಷ ಉತ್ತಮ ಮಳೆ ಬಾರದೆ ರೈತರು ನಷ್ಟ ಅನುಭವಿಸಿದ್ದಾರೆ. ಈ ವರ್ಷ ಉತ್ತಮ ಮಳೆಯಾಗಿದ್ದು, ಬಿತ್ತನೆ ಮಾಡಿದ ಮೆಕ್ಕೆಜೋಳ ಕಾಡು ಹಂದಿಗಳ ಪಾಲಾಗುತ್ತಿದ್ದರೆ, ಬೆಳೆದ ಸಸಿಗಳನ್ನು ಜಿಂಕೆಗಳು ಹಾಳು ಮಾಡುತ್ತಿವೆ. ಕಾರಣ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಬೇಲಿ ಹಾಕಿ ವನ್ಯ ಜೀವಿಗಳಿಂದ ರೈತನ ಬೆಳೆಯನ್ನು ಸಂರಕ್ಷಿಸುವಂತೆ ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿಕೊಳ್ಳಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವನ್ಯ ಜೀವಿಗಳಿಂದ ಹಾಳಾದ ಬೆಳೆಗಳಿಗೆ ಸರ್ಕಾರ ರೂ ಎರಡು ಸಾವಿರ ಪರಿಹಾರ ನೀಡುತ್ತಿದ್ದು, ಆ ಮೊತ್ತವನ್ನು ್ಙ 10,000ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿದ ಅವರು, ರೈತರು ಮೃತರಾದಲ್ಲಿ ರೈತ ಸಂಜೀವಿನಿ ಯೋಜನೆಯಡಿ ನೀಡುವ ಪರಿಹಾರದ ಮೊತ್ತವನ್ನು ರೂ ಐದು ಲಕ್ಷಕ್ಕೆ ಹೆಚ್ಚಿಸಬೇಕು. ಸುವರ್ಣ ಭೂಮಿ ಯೋಜನೆಯನ್ನು ಮುಂದುವರೆಸುವ ಮೂಲಕ ತಾಲ್ಲೂಕಿನಲ್ಲಿ ಬಾಕಿ ಉಳಿದ 6090 ರೈತರಿಗೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ರುದ್ರಗೌಡ ಕಾಡನಗೌಡ್ರ, ರೈತ ಮುಖಂಡರಾದ ಶಶಿಧರ ಛತ್ರದಮಠ, ಚಿಕ್ಕಪ್ಪ ಛತ್ರದ, ಕೆ.ವಿ.ದೊಡ್ಡಗೌಡ್ರ, ಮಂಜುನಾಥ ಬಾರ್ಕಿ, ಮಲಕಪ್ಪ ಹಾದರಗೇರಿ, ಪ್ರಶಾಂತ ಹಾಲನಗೌಡ್ರ, ಎಂ.ವಿ.ಚಿಕ್ಕಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.