ADVERTISEMENT

ಲಂಚ: ಎಂಜಿನಿಯರ್ ಬಂಧನ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2010, 12:55 IST
Last Updated 17 ಡಿಸೆಂಬರ್ 2010, 12:55 IST

ಹಾವೇರಿ: ಗ್ರಾಮೀಣ ಉದ್ಯೋಗ ಖಾತ್ರಿ ಕಾಮಗಾರಿಯ ಬಿಲ್ ತಯಾರಿಸಲು 22 ಸಾವಿರ ರೂ. ಲಂಚ ತೆಗೆದುಕೊಳ್ಳುತ್ತಿದ್ದ ಜಿ.ಪಂ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಎಸ್. ಪಾಟೀಲ ಅವರು ಗುರುವಾರ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಹಾವೇರಿ ತಾಲ್ಲೂಕಿನ ಕೂರಗುಂದ ಗ್ರಾಮದ ಶಿವಪ್ಪ ನೀಲಪ್ಪ ಹೊಟ್ಟೆಪ್ಪನವರ ನೀಡಿದ ದೂರಿನನ್ವಯ ಗುರುವಾರ ಮಧ್ಯಾಹ್ನ ಜಿ.ಪಂ. ಕಚೇರಿ ಮೇಲೆ ದಾಳಿ ನಡೆಸಿದ ದಾವಣಗೆರೆ ಹಾಗೂ ಹಾವೇರಿ ಲೋಕಾಯುಕ್ತ ಪೊಲೀಸರು ಲಂಚದ ಹಣ ಸಮೇತ ಎಂಜಿನಿಯರ್ ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂರಗುಂದ ಗ್ರಾಮದ ಪ್ಲಾಟ್‌ನಿಂದ ಶಿಬಾರದ ವರೆಗೆ ರಸ್ತೆ ಎಡಬದಿಯಲ್ಲಿ ಕಾಲುವೆ ಮತ್ತು ಸಿಡಿ ನಿರ್ಮಾಣ ಮಾಡಲಾಗಿತ್ತು. ಆ ಕಾಮಗಾರಿಯಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ 2.85 ಲಕ್ಷ ರೂ.ಗಳ ಕೂಲಿ ನೀಡಬೇಕಿತ್ತು. ಕಳೆದ ಆರು ತಿಂಗಳಿಂದ ಜಿ.ಪಂ. ಎಂಜಿನಿಯರ್ ವಿಭಾಗದ ಕಚೇರಿಗೆ ಅಲೆದರೂ ಬಿಲ್ ತಯಾರಿಸಿರಲಿಲ್ಲ. 22 ಸಾವಿರ ರೂ. ಹಣ ನೀಡಿದರೆ ಮಾತ್ರ ಬಿಲ್ ತಯಾರಿಸುವುದಾಗಿ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ಅವರು ಫಲಾನುಭವಿಗಳ ಮುಖಂಡ ಶಿವಪ್ಪ ಅವರಿಗೆ ಹೇಳಿದ್ದರು. ಈ ವಿಷಯ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ ಶಿವಪ್ಪ ಲೋಕಾಯುಕ್ತರು ರಾಸಾಯನಿಕ ಲೇಪನ ಮಾಡಿದ 22 ಸಾವಿರ ರೂ. ಹಣವನ್ನು ಎಂಜಿನಿಯರ್ ಪಾಟೀಲರಿಗೆ ನೀಡುತ್ತಿದ್ದಾಗಪೊಲೀಸರು ದಾಳಿ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.