ADVERTISEMENT

ವಿಷಯ ಪ್ರೌಢಿಮೆ ಬೆಳೆಸಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2011, 7:05 IST
Last Updated 3 ಏಪ್ರಿಲ್ 2011, 7:05 IST

ಹಾವೇರಿ: ‘ಸಹನೆ ಹಾಗೂ ವಿಷಯ ಪ್ರೌಢಿಮೆ ಹೊಂದಿದ ಶಿಕ್ಷಕ ಮಾತ್ರ ಒಬ್ಬ ಉತ್ತಮ ಶಿಕ್ಷಕನಾಗಲು ಸಾಧ್ಯ’ ಎಂದು ಹೊಸಮಠದ ಬಸವಶಾಂತಲಿಂಗ ಶ್ರೀಗಳು ಹೇಳಿದರು.ನಗರದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಉತ್ತಮ ಪ್ರಜೆಗಳ ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಹೀಗಾಗಿ ಶಿಕ್ಷಕರು ಸತತ ಅಧ್ಯಯನಶೀಲರಾಗಿರಬೇಕು. ಭಾವಿ ಶಿಕ್ಷಕರು ಕೂಡಾ ಈ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಹಾಗೂ ಸಾರ್ವಜನಿಕರಲ್ಲಿದ್ದ ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಂಡರು. ಉಪನ್ಯಾಸಕ ಆರ್.ವಿ.ಚಿನ್ನಿಕಟ್ಟಿ, ಶಿಕ್ಷಣ ರಂಗದಲ್ಲಿ ಶಿಕ್ಷಕನ ಪಾತ್ರ ಪ್ರಮುಖವಾಗಿದ್ದು, ವಿದ್ಯಾರ್ಥಿಗಳಲ್ಲಿ ವಿಷಯದ ಆಸಕ್ತಿ ಕೆರಳಿಸುವಂತೆ ಬೋಧನೆ ಮಾಡಬೇಕು. ಶಿಕ್ಷಕ ಬೊಧಿಸುವವನಾಗಬೇಕೇ ಹೊರತು ಭಾಧಿಸುವವನಾಗಬಾರದು ಎಂದರು.
 

ಪತ್ರಕರ್ತ ಶಿವಾನಂದ ಗೊಂಬಿ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಶಿಕ್ಷಣ ಅವಶ್ಯವಿದ್ದು, ಪ್ರಶಿಕ್ಷಣಾರ್ಥಿಗಳು ದಿನಾಲು ದಿನಪತ್ರಿಕೆಗಳನ್ನು ಓದುವುದರ ಮುಖಾಂತರ ತಮ್ಮ ಜ್ಞಾನದ ಹಸಿವನ್ನು ಈಡೇರಿಸಿಕೊಳ್ಳಬೇಕೆಂದು ಕರೆ ನೀಡಿದರು.ಶೋಭಾತಾಯಿ ಆರ್ ಮಾಗಾವಿ, ನಿಂಗಪ್ಪ ಚಾವಡಿ, ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ಎಂ.ಕೆ. ಮತ್ತಿಹಳ್ಳಿ ಸೇರಿದಂತೆ ಕಾಲೇಜಿನ ಬೋಧಕ ಹಾಗೂ ಬೊಧಕೇತರ ವರ್ಗ ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಸೇರಿದಂತೆ ಮುಂತಾದವರು ಹಾಜರಿದ್ದರು.
ಪ್ರಾಚಾರ್ಯ ಎಂ.ವಿ. ಕುಲಕರ್ಣಿ ಸ್ವಾಗತಿಸಿದರು. ಎಸ್.ಎಸ್. ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಗೀತಾ ಸವದತ್ತಿ ವಂದಿಸಿದರು.
 

ADVERTISEMENT

ಸವಣೂರ: ವೀರಭದ್ರೇಶ್ವರ ರಥೋತ್ಸವ ಇಂದಿನಿಂದ

ಸವಣೂರ:
ನಗರದ ಶುಕ್ರವಾರಪೇಟೆಯ ಶ್ರೀ ವೀರಭದ್ರೇಶ್ವರ ದೇವರ ರಥೋತ್ಸವ ಕಾರ್ಯಕ್ರಮ ಏ. 3 ರಿಂದ ಆರಂಭಗೊಳ್ಳಲಿದೆ.ಹಿರೇಮಣಕಟ್ಟಿ ಮುರುಘರಾಜೇಂದ್ರಮಠದ ಶ್ರೀಗಳಾದ ವಿಶ್ವಾರಾಧ್ಯ ಶಿವಾಚಾರ್ಯರ ನೇತೃತ್ವದಲ್ಲಿ ಏ. 3ರಂದು ಮಹಾರುದ್ರಾಭಿಷೇಕ, ಪುರವಂತ ಸಮೇತ ಶ್ರೀ ವೀರಭದ್ರ ದೇವರ ಗುಗ್ಗಳ ಮಹೋತ್ಸವ, ಅಗ್ನಿ ಹಾಯುವದು, ಮಹಾಗಣರಾಧನೆ, ಸಂಜೆ ಹೂವಿನ ರಥೋತ್ಸವ, ಶಿವ ಭಜನೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
 

ಏ. 4ರಂದು ನಗರದ ಪ್ರಮುಖ ಬೀದಿಗಳಲ್ಲಿ ಶೃಂಗರಿಸಿದ ಎತ್ತುಗಳ ಮೆರವಣಿಗೆ ಹಾಗೂ ಪಾಲಕಿ  ಉತ್ಸವವನ್ನು ವಿವಿಧ ವಾದ್ಯವೈಭವಗಳೊಂದಿಗೆ ಕೈಗೊಳ್ಳಲಾಗುತ್ತದೆ. ಸಂಜೆ 5 ಗಂಟೆಗೆ ರಥೋತ್ಸವ ಕಾರ್ಯಕ್ರಮ ನೆರವೇರಲಿದೆ. ರಾತ್ರಿ ಶಿವಭಜನೆ ಹಾಗೂ ಮಹಾಮಂಗಳ ಮಹೋತ್ಸವ ಜರುಗಲಿದೆ.ಏ. 5ರಂದು ಮಹಾರುದ್ರಾಭಿಷೇಕ ಸಂಜೆ ಕಡುಬಿನ ಕಾಳಗ, ಚಿಕ್ಕ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ನೆರವೇರಲಿದೆ ಎಂದು ಜಾತ್ರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.