ADVERTISEMENT

ಶರಣ ಸಂಸ್ಕೃತಿಯಿಂದ ಆರ್ಥಿಕ ತಳಹದಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 8:56 IST
Last Updated 3 ಡಿಸೆಂಬರ್ 2017, 8:56 IST
ಹಾವೇರಿ ಹೊಸಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಶನಿವಾರ ಕರಕುಶಲ ವಸ್ತುಗಳ ಮೇಲೆ ಜಿ.ಎಸ್.ಟಿ. ಕುರಿತು ಪ್ರಸ್ತಾಪಿಸುತ್ತಿರುವ ಡಾ.ಶಿವಮೂರ್ತಿ ಮುರುಘಾ ಶರಣರು
ಹಾವೇರಿ ಹೊಸಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಶನಿವಾರ ಕರಕುಶಲ ವಸ್ತುಗಳ ಮೇಲೆ ಜಿ.ಎಸ್.ಟಿ. ಕುರಿತು ಪ್ರಸ್ತಾಪಿಸುತ್ತಿರುವ ಡಾ.ಶಿವಮೂರ್ತಿ ಮುರುಘಾ ಶರಣರು   

ಹಾವೇರಿ: ‘ದುಡಿಮೆಯನ್ನೇ ದೇವರು ಎಂದು ಕಾಣುವ ಚಿಂತನೆಯೇ ಅಭಿವೃದ್ಧಿಯ ಆರ್ಥಿಕ ತಳಹದಿ. ಇದುವೇ ಶರಣ ಸಂಸ್ಕೃತಿ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಬಣ್ಣಿಸಿದರು ನಗರದ ಹೊಸಮಠದದಲ್ಲಿ ಶನಿವಾರ ಶರಣ ಸಂಸ್ಕೃತಿ ಉತ್ಸವದಲ್ಲಿ ಅವರು ಮಾತನಾಡಿದರು.

‘ಪ್ರತಿ ಪ್ರಜೆಯೂ ದುಡಿಮೆ ಮೂಲಕ ಕೊಡುಗೆ ನೀಡಿದಾಗ ಅಭಿವೃದ್ಧಿ ಸಾಧ್ಯ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಾರೆ. ಅದನ್ನೇ, ಬಸವಣ್ಣನವರು ‘ಕಾಯಕ ಸಂಸ್ಕೃತಿ’ ಮೂಲಕ ಪ್ರತಿಪಾದಿಸಿದ್ದರು’ ಎಂದು ವಿವರಿಸಿದರು.

ಭಾರಿ ಉತ್ಪಾದನೆಯ ಬದಲಾಗಿ ಭಾರಿ ಸಮೂಹವೇ ಉತ್ಪಾದನೆಯ ಭಾಗವಾಗಬೇಕು ಎಂದು ಗಾಂಧೀಜಿ ಹೇಳಿದ್ದರು. ಆದರೆ, ಅಂತಕರಣ ಇಲ್ಲದ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣಕ್ಕೆ ಒತ್ತು ನೀಡಿದ ಕಾರಣ ದುಸ್ಥಿತಿ ಬರುತ್ತಿದೆ’ ಎಂದರು.

ADVERTISEMENT

ರವೀಂದ್ರನಾಥ ಠ್ಯಾಗೋರ್ ಹೇಳಿದಂತೆ ಕಾರ್ಮಿಕರ ಶ್ರಮ ಹಾಗೂ ರೈತರ ಬೆವರಿನಲ್ಲಿ ದೇವರಿದ್ದಾನೆ. ಇದುವೇ ಕಾಯಕ ಸಂಸ್ಕೃತಿ. ದೇಶದ ಆರ್ಥಿಕತೆ ಕಟ್ಟುವವರು ತಳಸ್ತರದ ಬಹುಸಂಖ್ಯಾತರು ಎಂಬ ಎಚ್ಚರಿಕೆ ಆಡಳಿತಕ್ಕೆ ಇರಬೇಕು ಎಂದರು.

‘ಜನರನ್ನು ಪರಾವಲಂಬಿ ಮಾಡುವ ಬದಲು, ಪಾಲುದಾರರನ್ನಾಗಿ ಮಾಡಬೇಕು. ಯಾವುದೇ ಆರ್ಥಿಕ ನೀತಿಯು ನ್ಯಾಯ ಸಮ್ಮತ, ಎಲ್ಲರ ಕೈಗೆಟಕುವ, ಉದ್ದೇಶ ಆಧರಿತ ಹಾಗೂ ಉತ್ತರದಾಯಿತ್ವ ಹೊಂದಿದಾಗ ಮಾತ್ರ ಅಭಿವೃದ್ಧಿ ಸಾಧ್ಯ’ ಎಂದರು

‘ನೋಟು ರದ್ದತಿಯ ಪರಿಣಾಮವನ್ನು ಮೊದಲು ಎದುರಿಸಿದವರು ಮಹಿಳೆಯರು. ಸಾಸಿವೆ, ಜೀರಿಗೆ ಡಬ್ಬದೊಳಗೆ ಸುತ್ತಿಟ್ಟ ನೋಟುಗಳು ಹೊರ ಬಂದಿದ್ದವು’ ಎಂದು ಹಾಸ್ಯ ಮಾಡಿದ ಅವರು, ‘ನೋಟು ರದ್ದತಿಯಿಂದ ಜನತೆ ತೊಂದರೆಗೀಡಾಗಿದ್ದಾರೆ. ಆದರೆ, ಅಭಿವೃದ್ಧಿಯ ದೂರದೃಷ್ಟಿಯಿಂದ ಆಗಾಗ್ಗೆ ಆರ್ಥಿಕ ಸ್ವಚ್ಛತಾ ಕ್ರಮಗಳು ಅನಿವಾರ್ಯ’ ಎಂದರು.

ಗ್ರಾಮೀಣ ಆರ್ಥಿಕತೆಯಲ್ಲಿ ಬ್ಯಾಂಕಿಂಗ್‌ ಪಾತ್ರ ಹೆಚ್ಚಾಗಬೇಕು. ಬಂಡವಾಳವು ಕೃಷಿಗೆ ಹರಿದು ಬರಬೇಕು’ ಎಂದ ಅವರು, ‘ಶ್ರೀಮಂತ ಸರ್ಕಾರ’ ಹಾಗೂ ‘ಶ್ರೀಮಂತ ಜನರ ಸರ್ಕಾರ’ ಎಂಬ ಎರಡು ಚಿಂತನೆಗಳ ನಡುವೆ ನೆಮ್ಮದಿಯೇ ಮುಖ್ಯವಾಗಬೇಕು’ ಎಂದು ಪ್ರತಿಪಾದಿಸಿದರು.

ಜಿಎಸ್‌ಟಿ ಬಳಿಕ ಕರಕುಶಲ ಉದ್ಯಮಕ್ಕೆ ಹೊಡೆತ ಉಂಟಾಗಿರುವ ಕುರಿತು ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಪ್ರಸ್ತಾಪಿಸಿದರು. ‘ತಾಂತ್ರಿಕತೆ ಹಾಗೂ ಯಾಂತ್ರಿಕತೆಯಿಂದ ನೆಲದ ಕರಕುಶಲತೆಗೆ ಹೊಡೆತ ಬಿದ್ದಿದೆ. ಈ ಬಗ್ಗೆ ಚಿಂತನೆ ಅಗತ್ಯ’ ಎಂದು ಬೊಮ್ಮಾಯಿ ಪ್ರತಿಕ್ರಿಯಿಸಿದರು.

ಸವಣೂರು ದೊಡ್ಡಹುಣಸೆ ಕಲ್ಮಠದ ಚೆನ್ನಬಸವ ಸ್ವಾಮೀಜಿ, ಹೊಸಠದ ಬಸವಶಾಂತಲಿಂಗ ಸ್ವಾಮೀಜಿ, ಸಂಸದ ಶಿವಕಮಾರ್‌ ಉದಾಸಿ, ಆರ್ಥಿಕ ವಿಶ್ಲೇಷಕ ರುದ್ರಮೂರ್ತಿ, ಸಂಯುಕ್ತ ಜನತಾದಳದ ಅಧ್ಯಕ್ಷ ಮಹಿಮಾ ಜೆ. ಪಟೇಲ್, ವಿಜಯಪುರದ ಜಂಟಿ ಕೃಷಿ ನಿರ್ದೇಶಕ ಮಂಜುನಾಥ, ಸಂಘಟಕ ವಿಜಯಕುಮಾರ್ ತೇಗಲತಿಪ್ಪಿ, ಕಲಾವಿದ ಡಾ.ವಸಂತ ಬಾಂದೇಕರ, ವೇಣುಗೋಪಾಲ, ಪ್ರತೀಕ್ಷಾ, ಬಸವರಾಜ ಉಮ್ರಾಣಿ, ಮುಖಂಡರಾದ ಸಂಜೀವಕುಮಾರ್ ನೀರಲಗಿ, ನಾಗೇಂದ್ರ ಕಟಕೋಳ, ರುದ್ರೇಶ್‌ ಚಿನ್ನಣ್ಣನವರ, ರುಕ್ಮಿಣಿ ಸಾಹುಕಾರ್, ಶಿವಬಸಪ್ಪ ಮುದ್ದಿ ಮತ್ತಿತರರು

* * 

ಸಾಮಾನ್ಯ ಜನತೆಗೆ ದೇಶದ ಜಿಡಿಪಿಗಿಂತ ಕೌಟುಂಬಿಕ ನೆಮ್ಮದಿಯೇ ಮುಖ್ಯ. ಅಂತಹ ಸಮಾಜ ನಿರ್ಮಾಣವೇ ಸರ್ಕಾರದ ಆದ್ಯ ಕರ್ತವ್ಯವಾಗಬೇಕು
ಬಸವರಾಜ ಬೊಮ್ಮಾಯಿ
ಶಾಸಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.