ADVERTISEMENT

ಸಹಕಾರಿ ತತ್ವದಿಂದ ಉನ್ನತಿ ಸಾಧ್ಯ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 6:30 IST
Last Updated 15 ಫೆಬ್ರುವರಿ 2012, 6:30 IST

ಸವಣೂರ: `ಸಹಕಾರಿ ತತ್ವದಿಂದ ಮಾತ್ರ ಉನ್ನತಿ ಸಾಧಿಸಬಹುದಾಗಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಹಕಾರ ಸಿದ್ಧಾಂತ ಉತ್ತಮ ಫಲ ನೀಡುತ್ತದೆ~ ಎಂದು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ರಾಜಶೇಖರ ಸಿಂಧೂರ ತಿಳಿಸಿದರು.

ಸವಣೂರಿನ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಧಾರವಾಡ ಕೆ.ಸಿ.ಸಿ ಬ್ಯಾಂಕಿನ ಗ್ರಾಹಕರ ಸಮಾವೇಶ, ಠೇವು ಸಂಗ್ರಹಣೆ ಹಾಗೂ ಸಾಲ ವಿತರಣಾ ಸಮಾರಂಭದಲ್ಲಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಿ ಅವರು ಮಾತನಾಡಿದರು.

ಅನ್ಯರ ಉನ್ನತಿಯನ್ನು ಸಹಿಸಿಕೊಳ್ಳುವುದು, ಸಕಾಲಕ್ಕೆ ಸೂಕ್ತ ನೆರವನ್ನು ಕಲ್ಪಿಸುವುದು ಸಹಕಾರ ಎನಿಸಿಕೊಳ್ಳುತ್ತದೆ. ಸಹಕಾರಿ ಸಂಘದಲ್ಲಿ ಪಡೆದ ಸಾಲವನ್ನು ಆರ್ಥಿಕಾಭಿವೃದ್ಧಿಗೆ ಬಳಸುವುದು ಅವಶ್ಯಕವಾಗಿದೆ. ಸಂಘದಿಂದ ಪಡೆದ ಸಾಲದ ಮೊತ್ತ ಇನ್ನೊಬ್ಬರ ಠೇವಣಿ ಎಂಬ ಪ್ರಜ್ಞೆ ಎಲ್ಲರಲ್ಲಿಯೂ ಮೂಡಬೇಕಿದೆ ಎಂದು ರಾಜಶೇಖರ ಸಿಂಧೂರ ತಿಳಿಸಿದರು.

ಸ್ವ ಸಹಾಯ ಗುಂಪುಗಳಿಗೆ ಶೇ. 4 ರ ಬಡ್ಡಿ ದರದಲ್ಲಿ ಸಾಲ ವಿತರಣೆ ಕೈಗೊಂಡ ಶಾಸಕ ನೆಹರೂ ಚ. ಓಲೇಕಾರ, ರೈತರಿಗೆ ಅತ್ಯಂತ ಕನಿಷ್ಠ ಬಡ್ಡಿದರದ ಸಾಲ ವಿತರಣೆ ನಮ್ಮ ರಾಜ್ಯದಲ್ಲಿ ಮಾತ್ರ ಜಾರಿಯಲ್ಲಿದೆ.

ಶೂನ್ಯ ಬಡ್ಡಿದರದ ಸಾಲ ವಿತರಣೆಯ ಚಿಂತನೆಯೂ ಸರಕಾರಕ್ಕೆ ಇದೆ. ಸಹಕಾರಿ ಸಂಘಗಳು ಸ್ವಾವಲಂಬಿ ಗಳಾದಲ್ಲಿ ಮಾತ್ರ ಸಾರ್ಥಕತೆ ಎನಿಸುತ್ತದೆ. ಸಹಕಾರಿ ಸಂಘ ನಮ್ಮೆಲ್ಲರದ್ದು ಎಂಬ ಭಾವನೆ ಸಾರ್ವತ್ರಿಕರಣಗೊಳ್ಳಬೇಕಿದೆ. ಸರಕಾರದ 25 ಕೋಟಿ ರೂ.ಗಳ ನೆರವಿನೊಂದಿಗೆ ಕೆ.ಸಿ.ಸಿ ಬ್ಯಾಂಕ್ ಆರ್ಥಿಕ ಸಂಕಷ್ಟದಿಂದ ಹೊರಬಂದು, ಅಭಿವೃದ್ಧಿ ಸಾಧಿಸುತ್ತಿದೆ ಎಂದರು.

ಬ್ಯಾಂಕಿನ ವ್ಯವಸ್ಥಾಪಕ ನಿರ್ದೆಶಕರಾದ ಶಿವಾ ಕುಲಕರ್ಣಿ, ನಬಾರ್ಡ್ ಪರಿವೀಕ್ಷಣೆಯಲ್ಲಿ ಉತ್ತಮ ಅಂಕ ಹಾಗೂ ಪರವಾನಿಗೆ ಪಡೆದಿರುವ ಕೆ.ಸಿ.ಸಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ಶೇ. 85 ರಷ್ಟು ಸಾಲ ಮರುಪಾವತಿ ಸಾಧಿಸಿದೆ.  20 ಕೋಟಿ ರೂ.ಗಳ ಠೇವಣಿ ಸಂಗ್ರಹಿಸಿದೆ. ಸವಣೂರ ತಾಲ್ಲೂಕಿನಲ್ಲಿಯೇ 1.60 ಕೋಟಿ ರೂ.ಗಳ ಠೇವಣಿ ಸಂಗ್ರಹಣೆಯಾಗಿದೆ ಎಂದು ತಿಳಿಸಿದರು.

ಉದ್ಘಾಟನೆಯನ್ನು ನೆರವೇರಿಸಿದ ಡಾ. ಎಮ್.ವಿ. ತೆಗ್ಗಿಹಳ್ಳಿ, ಸಹಕಾರಿ ಕ್ಷೇತ್ರದ ಜೀವನದಿಯಾದ ಕೆ.ಸಿ.ಸಿ ಬ್ಯಾಂಕ್ ಉತ್ತಮ ಅಭಿವೃದ್ಧಿ ಸಾಧಿಸಲಿ. ಜಿಲ್ಲೆಗೆ ಪ್ರತ್ಯೇಕ ಸಹಕಾರಿ ಬ್ಯಾಂಕ್ ಸ್ಥಾಪನೆಯಾಗಲಿ ಎಂದು ಹಾರೈಸಿದರು. ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಬ್ಯಾಂಕಿನ ಅಧ್ಯಕ್ಷ ಬಸವರಾಜ ಸಿಂಧೂರ ಕೃಷಿ ಸಾಲ ವಿತರಣೆ ಕೈಗೊಂಡು, ಬ್ಯಾಂಕಿನ ಪ್ರಗತಿಯನ್ನು ವಿವರಿಸಿದರು.
 
ಒಂದು ಕೋಟಿಗೂ ಹೆಚ್ಚಿನ ಲಾಭ ದಾಖಲಾಗಿದೆ ಎಂದರು.ಸಾನ್ನಿಧ್ಯವನ್ನು ಕಲ್ಮಠದ ಶ್ರೀಗಳಾದ ಮಹಾಂತ ಸ್ವಾಮೀಜಿ ವಹಿಸಿದ್ದರು.
 
ನಿರ್ದೆಶಕರಾದ ಎನ್.ಬಿ ತೆಗ್ಗಿನ್, ಸಿ.ಕೆ ಶೆಟ್ಟರ್, ಸಿ.ಎಸ್ ಕೋಣನವರ, ಎ.ಪಿ.ಎಮ್.ಸಿ ಅಧ್ಯಕ್ಷ ಗದಿಗಯ್ಯ ಕುಲಕರ್ಣಿ, ಉಪಾಧ್ಯಕ್ಷ ಮಲ್ಲಾರೆಪ್ಪ ತಳ್ಳಿಹಳ್ಳಿ, ಪಿ.ಎಮ್ ನಾಗಶಯನ, ಆರ್.ಬಿ ಮಾತರಂಗಿಮಠ, ಸಿದ್ದಣ್ಣ ಗುಂಜಾಳ, ವಿರೂಪಾಕ್ಷ ಸಿಂಧೂರ, ಕೆ.ವಾಯ್ ಅಬ್ಬಿಗೇರಿ, ವ್ಹಿ.ಆರ್ ಪಾಟೀಲ ಸೇರಿದಂತೆ ಹಲವಾರು ಸಹಕಾರಿ ಪ್ರಮುಖರು, ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿ ವರ್ಗ ತಾಲ್ಲೂಕಿನ ಎಲ್ಲ ಸಹಕಾರಿ ಸಂಘಗಳ ಆಡಳಿತ ಮಂಡಳಿ ಸದಸ್ಯರು, ನಿರ್ದೆಶಕರು ಸಮಾರಂಭದಲ್ಲಿ ಭಾಗವಹಿಸಿದ್ದರು. ಎನ್.ಎಸ್ ಪೂಜಾರ ಸ್ವಾಗತಿಸಿ, ಗುರುಪಾದಯ್ಯ ಸಾಲಿಮಠ ನಿರ್ವಹಿಸಿದರು. ಗುಜ್ಜರಿ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.