ಶಿಗ್ಗಾವಿ: ಗ್ರಾಮೀಣ ಪ್ರದೇಶದ ಜನರ ಬದುಕು ಹಸನಾಗಿಸಲು ಆರೋಗ್ಯಕರ ವಾತಾವರಣ ಪ್ರಮುಖವಾಗಿದ್ದು, ಸ್ವಸ್ಥ್ಯ ಸಮಾಜ ನಿರ್ಮಾಣದಲ್ಲಿ ಆರೋಗ್ಯ ಮನುಷ್ಯನಿಗೆ ಸಂಜೀವಿನಿಯಾಗಿದೆ ಎಂದು ಹುಲಗೂರಿನ ಓಲೆಮಠದ ಅಭಿನವ ಕುಮಾರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಹುಲಗೂರ ದರ್ಗಾದಲ್ಲಿ ಶಿಗ್ಗಾವಿ-ಸವಣೂರ ಕ್ಷೇತ್ರದ ಯುವ ಕಾಂಗ್ರೆಸ್ ಹಾಗೂ ಡಾ.ಎಂ.ಎಂ.ಜೋಶಿ ವಿಜ್ಞಾನ ಸಂಸ್ಥೆ ಆಶ್ರಯದಲ್ಲಿ ಮಂಗಳವಾರ ನಡೆದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶಿಶುವಿನಹಾಳದ ಶರೀಫರು- ದರ್ಗಾದ ಖಾದಲಿಂಗ ಶ್ರೀಗಳು ನಡೆದಾಡಿದ ಈ ಪುಣ್ಯ ಭೂಮಿಯು ಸೌಹಾರ್ದಯುತ ಕೇಂದ್ರವಾಗಿ ಖ್ಯಾತಿ ಹೊಂದಿದೆ. ಧರ್ಮ ಎಂದರೆ ಜಾತಿಮತಗಳಲ್ಲ. ಧರ್ಮವೆಂದರೆ ಭಕ್ತಿಪಂಥ ಎಂದರ್ಥ ಕೂಡುತ್ತಿದೆ. ಭಕ್ತಿಯಿಂದ ಮಾಡಿರುವ ಸೇವೆ ಭವಿಷ್ಯತ್ವದಲ್ಲಿ ಯಶಸ್ವಿ ತರುತ್ತದೆ ಎಂದರು.
ಮಾಜಿ ಶಾಸಕ ಸಿ.ಎಸ್.ಶಿವಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ವೈದ್ಯರು ಅಂಧರಿಗೆ ಕಣ್ಣು ಕೊಡುವ ನಿಜ ದೇವರು. ಹೀಗಾಗಿ ಸಮಾಜದಲ್ಲಿ ವೈದ್ಯರಿಗೆ ವಿಶೇಷ ಸ್ಥಾನ ನೀಡಲಾಗಿದೆ. ಮನುಷ್ಯ ವಿಷ ಪೂರಿತ ಆಹಾರ ಸೇವಿಸಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಔಷಧಿಗಳಿಂದ ರೋಗಿ ಬೇಗನೆ ಗುಣಮುಖವಾಗಲು ಸಾಧ್ಯವಿಲ್ಲದಾಗಿದೆ ಎಂದು ವಿಷಾದಿಸಿದರು.
ಮಾಜಿ ಶಾಸಕ ಸೈಯದ್ ಅಜೀಮಪೀರ ಖಾದ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಡವರ ಆರ್ಥಿಕ ಅಭಿವೃದ್ಧಿ ಜೊತೆಗೆ ಆರೋಗ್ಯಕರ ವಾತಾವರಣ ಮೂಡಿಸುವದು ಅಗತ್ಯವಾಗಿದೆ ಎಂದರು. ಹುಬ್ಬಳ್ಳಿಯ ಡಾ.ಶ್ರಿನಿವಾಸ ಜೋಶಿ ಮಾತನಾಡಿದರು.
ಮೌನೇಶ್ವರಮಠದ ಮೌನೇಶ್ವರ ಸ್ವಾಮೀಜಿ, ಸೈಯದ್ ಅಬ್ದುಲ್ ಹಸನ್ ಶಾ ಖಾದ್ರಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಎಂ.ಎನ್.ವೆಂಕೋಜಿ, ಚಂದ್ರಣ್ಣ ನಡುವಿನಮನಿ, ಗುರುನಗೌಡ ಪಾಟೀಲ, ವಿ.ವೈ.ಪಾಟೀಲ, ಮೋಹನ ಅಸುಂಡಿ, ಹನುಮರೆಡ್ಡಿ ನಡುವಿನಮನಿ, ಶೇಖಣ್ಣ ಗಣಾಚಾರಿ, ಯಲ್ಲಪ್ಪಗೌಡ ಹೊಳಲೆಪ್ಪನವರ, ಅಬ್ದುಲ್ ಮಜೀದ್ ಕೊಲ್ಲಾಪುರ, ಸಾದಿಕ್ ಅಹ್ಮದ್ ರಿಸಾಲದಾರ, ಮೌಲಾಲಿ ಧಾರವಾಡ, ಡಾ.ಖಾದ್ರಿ, ಎ.ಸಿ.ಜಮಾದಾರ, ಡಾ.ಸಂಜೀವ ಮುರಗೋಡ, ಮನೀಶ ಅಗರವಾಲ, ಡಿ.ಜಿ.ಕುಲಕರ್ಣಿ, ಡಾ.ಪ್ರಕಾಶ ಹಿರೇಮಠ, ಸಿಕಂದರ ಮತ್ತೂರ, ರುದ್ರಪ್ಪ ಕಡೆಮನಿ ಮತ್ತಿತರರು ಉಪಸ್ಥಿತರಿದ್ದರು.
ಶಂಭುಲಿಂಗಪ್ಪ ಆಜೂರ ನಿರೂಪಿಸಿ, ವಂದಿಸಿದರು. ಸುಮಾರು ನಾಲ್ಕುನೂರು ರೋಗಿಗಳು ಶಿಬಿರದ ಪ್ರಯೋಜನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.