ADVERTISEMENT

`ಹಣ, ಹೆಂಡಕ್ಕೆ ಮತ ಮಾರಾಟ ಮಾಡಬೇಡಿ'

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 6:37 IST
Last Updated 3 ಏಪ್ರಿಲ್ 2013, 6:37 IST

ರಾಣೆಬೆನ್ನೂರು: `ಪ್ರತಿಯೊಬ್ಬರೂ ತಮ್ಮ ಅಮೂಲ್ಯ ಮತವನ್ನು ಹಣ, ಹೆಂಡ, ಸೀರೆ, ಪಾತ್ರೆಗೆ ಮಾರಿಕೊಳ್ಳದೇ ಪ್ರಾಮಾಣಿಕ ವ್ಯಕ್ತಿಗೆ ಮತ ನೀಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಬೇಕು' ಎಂದು ಸ್ತ್ರೀರೋಗ ತಜ್ಞ ಡಾ. ಮೋಹನ್ ಹಂಡೆ ಹೇಳಿದರು.

ತಾಲ್ಲೂಕಿನ ಮಾಕನೂರು ಗ್ರಾಮದಲ್ಲಿ ಭಾನುವಾರ ಕರುನಾಡ ಸಮರಸೇನೆ ಗ್ರಾಮ ಘಟಕದ ಉದ್ಘಾಟನಾ  ಸಮಾರಂಭದಲ್ಲಿ ಅವರು ಮಾತನಾಡಿದರು. 
`ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಸಮಸ್ಯೆಗಳನ್ನು ಸಮಸ್ಯೆಗಳಾಗಿಯೇ ಉಳಿಯುವಂತೆ ನೋಡಿಕೊಳ್ಳುತ್ತಿದ್ದು, ಸಮಸ್ಯೆಗಳ ವಿರುದ್ಧ ಹೋರಾಡುವ ಇಂತಹ ಸಂಘಟನೆಗಳು ಬಲಿಷ್ಠವಾಗಬೇಕು' ಎಂದರು.

ಕರುನಾಡ ಸಮರಸೇನೆಯ ರಾಜ್ಯ ಘಟಕದ ಅಧ್ಯಕ್ಷ ಐಗೂರು ಸುರೇಶ ಮಾತನಾಡಿ, `ಸಮರ-ಹೋರಾಟ ನಮ್ಮ ಗುರಿ ಅಲ್ಲ, ಇಂದು ವಿಮುಖವಾಗುತ್ತಿರುವ ಸಂಬಂಧಗಳ ಕೊಂಡಿಯನ್ನು ಕೂಡಿಸಿ, ಮನ-ಮನೆಗಳನ್ನು ಜೋಡಿಸಿ ಉತ್ತಮ ಸಮಾಜ ನಿರ್ಮಾಣ, ಫಾದರ್ಸ್‌ ಡೇ, ಮದರ್ಸ್‌ ಡೇ ಗಳಂತಹ ಸಂಸ್ಕೃತಿಯಿಂದ ನಮ್ಮ ಸಮಾಜವನ್ನು ಮುಕ್ತ ಗೊಳಿಸುವುದು ಸಂಘದ ಮುಖ್ಯ ಉದ್ದೇಶ' ಎಂದರು.

ನಗರದ ಡಾ.ರಂಜನಾ ನಾಯಕ್, `ಹೆರಿಗೆಯ ಸಂದರ್ಭಗಳಲ್ಲಿ ರಕ್ತಸ್ರಾವದಿಂದ ಸಾವನ್ನಪ್ಪುವ ಗರ್ಭಿಣಿಯರನ್ನು ರಕ್ತದಾನದ ಮೂಲಕ ಜೀವ ಉಳಿಸುವ ಈ ಸಂಘಟನೆಯ ಯೋಜನೆ ನಿಜಕ್ಕೂ ಶ್ಲಾಘನೀಯ' ಎಂದರು.

ಕಾರ್ಯಕ್ರಮದಲ್ಲಿ ಕೆ.ಮಧು ಉಪನ್ಯಾಸ ನೀಡಿದರು. ನೀಲಕಂಠಪ್ಪ ಕುಸಗೂರ, ಎ.ಎಂ. ನಾಯ್ಕ, ಎಂ.ಸಿ.ಮಲ್ಲನಗೌಡ್ರ, ದುರುಗಮ್ಮ ಬಡಣ್ಣನವರ, ಶ್ರೀನಿವಾಸ. ಏಕಬೋಟೆ, ಸುನಿತಾ ತಾವರಗೊಂದಿ, ಪ್ರಕಾಶ ದೇಸಳ್ಳಿ, ಹೊನ್ನಮ್ಮ ಕುರುವತ್ತಿ ಮತ್ತಿತರರು ಉಪಸ್ಥಿತರಿದ್ದರು.ಹನುಮಂತಪ್ಪ ಸಾರಥಿ ಸ್ವಾಗತಿಸಿದರು. ಅಜ್ಜಪ್ಪ ನಿರೂಪಿಸಿದರು. ಜಿಲ್ಲಾ ಘಟಕದ ಅಧ್ಯಕ್ಷೆ ಲಲಿತಾ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.