ADVERTISEMENT

‘ಮಾತುಗಾರಿಕೆ ಕಲೆಯಾಗಿ ಅಭಿವೃದ್ಧಿಗೊಳ್ಳಲಿ’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 6:04 IST
Last Updated 17 ಸೆಪ್ಟೆಂಬರ್ 2013, 6:04 IST

ಹಾವೇರಿ: ‘ಬದುಕಿನಲ್ಲಿ ಸಾಮೂಹಿಕತೆ ಗೌಣವಾಗಿ, ವೈಯಕ್ತಿಕತೆ ಆವರಿಸಿಕೊಂಡ ಪರಿಣಾಮ ಮಾತಿನ (ಮೌಖಿಕ) ಸಂಸ್ಕೃತಿಗೆ ಸುಧಾರಿಸಲಾರದಂತಹ ದೊಡ್ಡ ಪೆಟ್ಟು ಬಿದ್ದಿದೆ’ ಎಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.
ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯಲ್ಲಿರುವ ಜಾನಪದ ವಿವಿ ಪ್ರಕಟಿಸಿದ ಐದು ಪುಸ್ತಕಗಳನ್ನು ಸೋಮವಾರ ವಿವಿ ಆವರಣದಲಿ್ಲ ನಡೆದ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

‘ಮಾತಿನ ಸಂಸ್ಕೃತಿ ಕಡಿಮೆಯಾಗಿರುವುದು ಸೃಜನಶೀಲತೆ ನಶಿಸುವಂತೆ ಮಾಡಿದೆ. ಮತ್ತೆ ಸೃಜನಶೀಲತೆ ಚಿಗುರುವಂತೆ ಮಾಡಲು ಮಾತಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಿದೆ. ವೇದ, ಜಾನಪದ ಸಮಾನಾಂತರವಾಗಿ ಬೆಳೆದು ಬಂದಿವೆ. ವೇದ ಲಿಪಿ ಮೂಲಕ ದಾಖಲೆಗೊಂಡ ಪರಿಣಾಮ ಅಂದಿನಿಂದ ಇಂದಿನವರೆಗೆ ಯಾವುದೇ ಬದಲಾವಣೆ ಕಾಣದೇ ಒಂದೆ ರೀತಿಯಲ್ಲಿದೆ. ಆದರೆ, ಜಾನಪದವು ಲಿಪಿಗೆ ಸಿಕ್ಕಿಕೊಳ್ಳದೇ ಬಾಯಿಂದ ಬಾಯಿಗೆ ವರ್ಗಾವಣೆಗೊಂಡಿದ್ದರಿಂದ ಇಂದಿಗೂ ಅದರಲ್ಲಿ ಸೃಜನಶೀಲತೆ ಅಡಗಿದೆ’ ಎಂದು ಹೇಳಿದರು.

‘ಸಂಪೂರ್ಣವಾಗಿ ಲಿಪಿಯನ್ನು ಅವಲಂಬಿಸಿದಾಗ ಸೃಜನಶೀಲತೆಗೆ ಕುತ್ತು ಬರಲಿದೆ. ಇದಕ್ಕೆ ಜನರಿಂದ ದೂರವಾಗಿರುವ ವೇದ ಉಪನಿಷತ್ತುಗಳೇ ಸಾಕ್ಷಿ ಎಂದ ಅವರು, ಮಾತುಗಾರಿಕೆಯಲ್ಲಿನ ರಹಸ್ಯ, ಜಿಗುಟುತನವನ್ನು ಮರುಸ್ಥಾಪನೆ ಮಾಡಬೇಕಿದೆ. ಅದಕ್ಕಾಗಿ ಮಾತುಗಾರಿಕೆಯನ್ನು ಪ್ರತ್ಯೇಕ ಕಲೆಯನ್ನಾಗಿ ಅಭಿವೃದ್ಧಿ ಪಡಿಸುವುದು ಅಗತ್ಯವಾಗಿದೆ’ ಎಂದರು.

‘ಜಾನಪದ ವಿಶ್ವವಿದ್ಯಾಲಯ ಈ ನಿಟ್ಟಿನಲ್ಲಿ ಗಂಭೀರ ಚಿಂತನ ನಡೆಸಬೇಕಲ್ಲದೇ, ಮಾತುಗಾರಿಕೆಯನ್ನು ಕಲೆಯನ್ನಾಗಿ ಅಧ್ಯಯನ, ಸಂಶೋಧನೆ ಮಾಡುವತ್ತ ಕಾರ್ಯೋನು್ಮಖವಾಗಬೇಕು’ ಎಂದು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.