ಹಾವೇರಿ: ನಗರದ ಎಪಿಎಂಸಿ ಗೋದಾಮಿನಿಂದ ಸವಣೂರಿಗೆ ಗುರುವಾರ ತಡರಾತ್ರಿ ಅಕ್ರಮವಾಗಿ ಟ್ರಾಕ್ಟರ್ನಲ್ಲಿ ಸಾಗಣೆ ಮಾಡುತ್ತಿದ್ದರು ಎನ್ನಲಾದ 150 ಯೂರಿಯಾ ರಸಗೊಬ್ಬರ ಚೀಲಗಳನ್ನು ತಡೆದ ರೈತರು, ವಾಹನ ಸಮೇತನಗರ ಪೊಲೀಸ್ ಠಾಣೆ ಸಿಬ್ಬಂದಿಗೆ ಒಪ್ಪಿಸಿದ್ದಾರೆ.
ಶುಕ್ರವಾರರಸಗೊಬ್ಬರ ಖರೀದಿಸಲು ನಗರಕ್ಕೆ ಬಂದಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಮುಖಂಡರುಇಲ್ಲಿನ ಎಪಿಎಂಸಿ ಗೋದಾಮುಗಳಿಗೆ ಭೇಟಿ ನೀಡಿ ರಸಗೊಬ್ಬರದ ದಾಸ್ತಾನು ಪರಿಶೀಲಿಸಲು ಮುಂದಾದರು.ಸ್ಥಳಕ್ಕೆ ಬಂದ ಮಾರ್ಕೆಟಿಂಗ್ ಫೆಡರೇಷನ್ ಅಧಿಕಾರಿಗಳನ್ನು ರೈತರು ತರಾಟೆಗೆ ತಗೆದುಕೊಂಡರು. ತಡರಾತ್ರಿ ಗೊಬ್ಬರ ಸಾಗಣೆ ಮಾಡಲು ಅನುಮತಿ ನೀಡಿದವರು ಯಾರು? ಗೋದಾಮಿನಲ್ಲಿ ದಾಸ್ತಾನು ಇರುವ ಯೂರಿಯಾ ಬಗ್ಗೆ ಮಾಹಿತಿ ಕೊಡಿ ಎಂದು ಒತ್ತಾಯಿಸಿದರು.
ಗೋದಾಮಿನ ಚಾವಿ ತೆಗೆಯಲು ಅಧಿಕಾರಿಗಳು ಹಿಂದೇಟು ಹಾಕಿದಾಗ, ಎಪಿಎಂಸಿ ಅಧ್ಯಕ್ಷರ ಸಮ್ಮುಖದಲ್ಲೇ ರೈತ ಮುಖಂಡರು ಗೋದಾಮಿನ ಬೀಗ ಒಡೆದರು. ನೂರಾರು ಚೀಲ ಯೂರಿಯಾ ದಾಸ್ತಾನು ಮಾಡಿದ್ದು ಕಂಡು ಬಂದಿತು. ಈ ಯೂರಿಯಾ ಯಾರಿಗೆ ಸೇರಿದ್ದು ಎಂಬ ಬಗ್ಗೆ ಫೆಡರೇಷನ್ ಮತ್ತು ಕೃಷಿ ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗಲಿಲ್ಲ. ಸೂಕ್ತ ತನಿಖೆ ನಡೆಸಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.