ಹಾವೇರಿ: ಲೋಕಸಭಾ ಕ್ಷೇತ್ರದಲ್ಲಿ 19 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಮೂವರ ನಾಮಪತ್ರಗಳು ತಿರಸ್ಕೃತಗೊಂಡಿವೆ.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ನಾಮಪತ್ರ ಪರಿಶೀಲನೆ ನಡೆಸಿದರು. 19 ಅಭ್ಯರ್ಥಿಗಳಿಂದ 30 ನಾಮಪತ್ರ ಸಲ್ಲಿಕೆಯಾಗಿತ್ತು. ಈ ಪೈಕಿ ಪಕ್ಷೇತರ ಅಭ್ಯರ್ಥಿ ನಜೀರ್ ಅಹ್ಮದ್ ಸವಣೂರ, ವೀರೇಶ ಮಲ್ಲಪ್ಪ ಕಿರವಾಡಿ ಹಾಗೂ ಇಸ್ಮಾಯಿಲ್ ಮುತ್ತಬಿ ನಾಮಪತ್ರಗಳು ತಿರಸ್ಕೃತವಾಗಿವೆ. ಉಳಿದಂತೆ ಎಲ್ಲ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಭ್ಯರ್ಥಿಗಳು ಸಹಿ ಮಾಡಿದ ಕ್ರಮಬದ್ಧ ಅಫಿಡವಿಟ್ ಸಲ್ಲಿಸದ ಹಾಗೂ ಸೂಚಕರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇಲ್ಲದ ಕಾರಣಗಳಿಗಾಗಿ ಉಮೇದುವಾರಿಕೆ ಅರ್ಜಿ ತಿರಸ್ಕೃತಗೊಂಡಿವೆ. ಹಾವೇರಿ ಕ್ಷೇತ್ರದ ಕೇಂದ್ರ ಸಾಮಾನ್ಯ ವೀಕ್ಷಕ ಡಾ.ಅಖ್ತರ್ ರಿಯಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.