ADVERTISEMENT

ಟಿಕೆಟ್‌ ಆಕಾಂಕ್ಷಿಗಳ ನಡೆಗೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 9:16 IST
Last Updated 2 ಜನವರಿ 2018, 9:16 IST

ಹಾನಗಲ್: ‘ಹಾನಗಲ್‌ ಕ್ಷೇತ್ರದ ವಿಧಾನಸಭೆ ಚುನಾವಣೆಯ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುವಂತಹ ಹೇಳಿಕೆಗಳನ್ನು ನೀಡುತ್ತಿರುವುದು ಪಕ್ಷದ ಕಾರ್ಯಕರ್ತರನ್ನು ಮುಜುಗರಕ್ಕೀಡು ಮಾಡಿದೆ’ ಎಂದು ಕೆಪಿಸಿಸಿ ಸದಸ್ಯ ಸತೀಶ ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ ಕಾಂಗ್ರೆಸ್‌ ಪಕ್ಷ ಸದೃಢವಾಗಿದೆ. ಆದರೆ ಇತ್ತೀಚಿನ ಆಕಾಂಕ್ಷಿಗಳ ನಡೆ, ಮಾಧ್ಯಮಗಳಿಗೆ ನೀಡುತ್ತಿರುವ ಹೇಳಿಕೆಗಳು ಹಾಗೂ ದೋಷಾರೋಪಣೆಗಳಿಂದ ವಾತಾವರಣ ಕಲುಷಿತಗೊಳ್ಳುತ್ತಿದೆ’ ಎಂದು ದೂರಿದರು.

‘ಯಾರೇ ಟಿಕೆಟ್‌ ಆಕಾಂಕ್ಷಿಗಳಾಗಿದ್ದರೂ, ಅಂತಿಮವಾಗಿ ಪಕ್ಷದ ವರಿಷ್ಠರ ನಿರ್ಣಯಕ್ಕೆ ಬದ್ಧರಾಗಬೇಕು. ಪಕ್ಷ ಅಭ್ಯರ್ಥಿಯಾಗಿ ನಿರ್ಣಯಿಸಿದವರನ್ನು ಒಮ್ಮತದಿಂದ ಬೆಂಬಲಿಸಿ, ಅವರ ಗೆಲುವಿಗೆ ಶ್ರಮಿಸಬೇಕಿದೆ. ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂಥ ಹೇಳಿಕೆಗಳನ್ನು ನಿಲ್ಲಿಸಬೇಕು’ ಎಂದು ಅವರು ಮನವಿ ಮಾಡಿಕೊಂಡರು.

ADVERTISEMENT

ನಾನೂ ಆಕಾಂಕ್ಷಿ: ಹಿಂದಿನ ಎರಡು ವಿಧಾನಸಭಾ ಚುನಾವಣೆಗೆ (2008 ಮತ್ತು 2013) ನಾನು ಪ್ರಬಲ ಆಕಾಂಕ್ಷಿಯಾಗಿದ್ದೆ. ಪಕ್ಷ ತಿರ್ಮಾನಿಸುವ ಅಂತಿಮ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಕೊನೆಯ ಗಳಿಗೆಯಲ್ಲಿ ಟಿಕೆಟ್‌ ವಂಚಿತನಾಗಿದ್ದೇನೆ.

ಸದ್ಯ ಹುಬ್ಬಳ್ಳಿ ಪಶ್ಚಿಮ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು ಮನೆ–ಮನೆಗೆ ಕಾಂಗ್ರೆಸ್ ಅಭಿಯಾನವನ್ನು ಯಶಸ್ವಿಯಾಗಿ ಮುನ್ನಡೆಸಿದ್ದೇನೆ. ನಾನು ಹಾನಗಲ್ ಕ್ಷೇತ್ರದ ಪ್ರಬಲ ಮತ್ತು ಹಿರಿಯ ಆಕಾಂಕ್ಷಿ’ ಎಂದು ಸತೀಶ ಅವರು ಪ್ರತಿಪಾದಿಸಿದರು. ಮುಖಂಡರಾದ ಉಮೇಶ ಗೌಳಿ, ಎ.ಎಂ.ಮುಲ್ಲಾ, ಸುರೇಶ ದೊಡ್ಡಕುರುಬರ, ಗಿರೀಶಗೌಡ ಪಾಟೀಲ, ಸಂದೀಪ ಹುಲಗೂರ, ಎಂ.ಎನ್.ಸರಖಾಜಿ, ಬಿ.ಎಸ್.ಮೆಳ್ಳೆಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.