ಹಾವೇರಿ: ‘ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಮಾದಿಗ ಸಮಾಜದ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಬೇಕು’ ಎಂದು ಅಖಿಲ ಕರ್ನಾಟಕ ಆದಿಜಾಂಬವ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಸ. ಮಾಳಗಿ ಮನವಿ ಮಾಡಿದರು.
‘ಇಲ್ಲಿ ಕಾಂಗ್ರೆಸ್ ಲಂಬಾಣಿ ಸಮಾಜದ ರುದ್ರಪ್ಪ ಲಮಾಣಿ ಹಾಗೂ ಜೆಡಿಎಸ್ ಬಲಗೈ ಚಲವಾದಿ ಸಮಾಜದ ಡಾ.ಸಂಜಯ ಡಾಂಗೆ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಆದರೆ, ಬಿಜೆಪಿ ಟಿಕೆಟ್ ಇನ್ನೂ ಘೋಷಣೆ ಆಗಿಲ್ಲ. ಹೀಗಾಗಿ ಬಿಜೆಪಿಯಲ್ಲಿನ ಆಕಾಂಕ್ಷಿಗಳಾದ ನಾನು (ಡಿ.ಎಸ್.ಮಾಳಗಿ), ಪರಮೇಶಪ್ಪ ಮೇಗಳಮನಿ, ಡಾ. ಮಲ್ಲೇಶಪ್ಪ ಹರಿಜನ, ಶಿವರಾಜ ಹರಿಜನ, ಮಹದೇವಪ್ಪ ನಾಗಮ್ಮನವರ ಹಾಗೂ ಗವಿಸಿದ್ದಪ್ಪ ದ್ಯಾಮಣ್ಣನವರ ಸೇರಿದಂತೆ ಆರು ಮಂದಿಯ ಪೈಕಿ ಒಬ್ಬರಿಗೆ ಟಿಕೆಟ್ ನೀಡಬೇಕು’ ಎಂದು ಇಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ವಿನಂತಿ ಮಾಡಿದರು.
‘ಹಾವೇರಿಯಲ್ಲಿ ಮಾದಿಗ ಸಮಾಜದ ಅಭ್ಯರ್ಥಿಗೆ ಟಿಕೆಟ್ ನೀಡಿದರೆ, ಕ್ಷೇತ್ರದ 35 ಸಾವಿರ ಸೇರಿದಂತೆ ಅವಿಭಜಿತ ಧಾರವಾಡ ಜಿಲ್ಲೆಯ 17 ಕ್ಷೇತ್ರಗಳ ಎಲ್ಲ ಮಾದಿಗ ಮತದಾರರು ಬಿಜೆಪಿ ಬೆಂಬಲಿಸುತ್ತಾರೆ. ಆ ಮೂಲಕ ಋಣವನ್ನು ತೀರಿಸುತ್ತೇವೆ’ ಎಂದರು.
‘ಕಾಂಗ್ರೆಸ್ ಪಕ್ಷವು ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ. ಅದು ಮಾದಿಗರ ವಿರೋಧಿ ಆಗಿದೆ. ಅಲ್ಲದೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಣ್ಣ ಸಣ್ಣ ಸಮುದಾಯಗಳಿಗೆ ಅನ್ಯಾಯ ಎಸಗಿದ್ದು, ಢೋಂಗಿ ಅಹಿಂದ ನಾಯಕ’ ಎಂದು ಆರೋಪಿಸಿದರು.
‘ಸಿದ್ದರಾಮಯ್ಯ ಅವರು ನೀಡಿದ ಭರವಸೆಯಂತೆ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಿಲ್ಲ. ಅಲ್ಲದೇ, ಎಡಗೈ ಮತ್ತು ಬಲಗೈ ಸಮುದಾಯಗಳ ಮಧ್ಯೆ ಅನಗತ್ಯ ಗೊಂದಲ ಉಂಟು ಮಾಡುತ್ತಾ ತಮ್ಮ ಕುರ್ಚಿ ಭದ್ರ ಪಡಿಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು. ನಾಗರಾಜ ಆರ್. ಮಾಳಗಿ ಮತ್ತು ಉಡಚಪ್ಪ ಮಾಳಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.