ಹಾವೇರಿ: ಕೊರೊನಾ 3ನೇ ಅಲೆ ಮತ್ತು ಓಮೈಕ್ರಾನ್ ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ವಾರಾಂತ್ಯ ಕರ್ಫ್ಯೂ’ಗೆ ಶನಿವಾರ ಜಿಲ್ಲೆಯಾದ್ಯಂತ ನೀರಸ ಪ್ರತಿಕ್ರಿಯೆ ಕಂಡುಬಂದಿತು.
ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ರಸ್ತೆಗಳಲ್ಲಿ ವಾಹನ ಮತ್ತು ಜನರ ಸಂಚಾರ ಹೆಚ್ಚಿತ್ತು. ಹೂವು, ಹಣ್ಣು, ಕಬ್ಬು, ತರಕಾರಿ ಹಾಗೂ ಹಬ್ಬದ ಸಾಮಗ್ರಿ ಖರೀದಿಸಲು ಜನರು ಪಟ್ಟಣ ಮತ್ತು ನಗರಗಳಲ್ಲಿರುವ ಮಳಿಗೆಗಳಿಗೆ ಭೇಟಿ ನೀಡಿದರು. ವಾರಾಂತ್ಯ ಕರ್ಫ್ಯೂ ಇದ್ದರೂ ವ್ಯಾಪಾರ ವಹಿವಾಟು ಉತ್ತಮವಾಗಿ ನಡೆಯಿತು.
ಹಾಲು, ಹಣ್ಣು, ತರಕಾರಿ, ಮಾಂಸ, ದಿನಸಿ, ಔಷಧ ಸೇರಿದಂತೆ ಅತ್ಯವಶ್ಯ ಸೇವೆಗಳ ಮಳಿಗೆಗಳು ಬಾಗಿಲು ತೆರೆದಿದ್ದು, ವ್ಯಾಪಾರ ವಹಿವಾಟು ನಡೆಯಿತು. ಹೋಟೆಲ್ಗಳಲ್ಲಿ ಪಾರ್ಸಲ್ ಸೇವೆ ಇದ್ದರೂ, ಹಬ್ಬವಿದ್ದ ಕಾರಣ ಜನರು ಅಷ್ಟಾಗಿ ಹೋಟೆಲ್ಗಳತ್ತ ಮುಖ ಮಾಡಲಿಲ್ಲ.
ಸರ್ಕಾರಿ ಕಚೇರಿ, ಶಾಲೆ, ಸಿನಿಮಾ ಮಂದಿರ, ಜಿಮ್, ಪಾರ್ಕ್, ವಾಣಿಜ್ಯ ಮಳಿಗೆಗಳ ಬಾಗಿಲುಗಳು ಮುಚ್ಚಿದ್ದವು. ಪ್ರಮುಖ ವೃತ್ತ, ರಸ್ತೆಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಸಾರಿಗೆ ಬಸ್ಗಳ ಸಂಚಾರವಿದ್ದರೂ, ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಟ್ಯಾಕ್ಸಿ, ಆಟೊ ಸೇವೆ ಲಭ್ಯವಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.